Thursday, April 30, 2015

ಮರೆವಿನ ನೆನಪು



ತೊಂಬತ್ತು ವರುಷದ ಹಳೆ ದಂಪತಿಗಳು ಒಬ್ಬ ವೈದ್ಯರಲ್ಲಿ ಬಂದರು ತಮ್ಮ ಮರೆಗುಳಿತನದ ಬಗ್ಗೆ ಪ್ರಸ್ತಾಪಿಸಿ.
ವೈದ್ಯರು ಅವರನ್ನು ಪರಿಶೀಲಿಸಿ ಏನಾದರು ಸಮಸ್ಯೆಗಳಿದ್ದರೆ ತಿಳಿಸಲಿ ಎಂದು.
ವೈದ್ಯರು ಅವರನ್ನು ಪರಿಶೀಲಿಸಿ ಅವರ ಆರೋಗ್ಯ ಸರಿಯಾಗಿಯೇ ಇದೆಯೆಂದು ಹೇಳುತ್ತಾ ಅವರಿಗೆ ವಿಷಯಗಳನ್ನು
ಒಂದು ಕಾಗದದಲ್ಲಿ ಬರೆದಿಟ್ಟುಕೊಳ್ಳಲು ಹೇಳುತ್ತ, ಅವರ ಮರೆವನ್ನು ಕಡಿಮೆ ಮಾಡಲು ಅದು ಸಹಕಾರಿಯಾದೀತೆಂದೂ ಹೇಳಿದರು.

ಆ ದಿನ ರಾತ್ರೆ ದಂಪತಿಗಳು ಟೀವಿ ನೋಡುತ್ತಿದ್ದರು. ಪತಿ ತನ್ನ ಸ್ಥಳದಿಂದೆದ್ದಾಗ
ಪತ್ನಿ ಕೇಳಿದಳು" ಎಲ್ಲಿಗೆ ಹೋಗುತ್ತಿದ್ದೀಯಾ?
ಪತಿ: "ಅಡುಗೆ ಮನೆಗೆ! ನನಗೊಂದು ತಟ್ಟೆ ಬ್ರೆಡ್ ಮತ್ತು ಜಾಮ್ ತರಲು! ನಿನಗೇನಾದರು ತರಬೇಕೇ?"
ಪತ್ನಿ: ನನಗೊಂದು ತಟ್ಟೆ ಮೊಸರು ತಂದು ಕೊಡುತ್ತೀಯಾ?
ಪತಿ: ಸರಿ ಪ್ರಿಯೆ
ಪತ್ನಿ: ಪ್ರಿಯಾ , ನೀನು ಇದನ್ನು ಒಂದು ಕಾಗದದ ಮೇಲೆ ಬರೆದಿಟ್ಟುಕೊಳ್ಳುವುದು ಒಳ್ಳೆಯದಲ್ಲವೇ?
ಪತಿ: ಏನೂ ಅಗತ್ಯವೇ ಇಲ್ಲ ಪ್ರಿಯೆ , ಇದನ್ನಂತೂ ನಾನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುವೆ.
ಪತ್ನಿ: ಪ್ರಿಯಾ ಜತೆಗೆ ಸ್ವಲ್ಪ ಒಣ ಶುಂಠಿ ಹುಡಿಯನ್ನೂ, ಆದರೆ ಇದನ್ನಂತೂ ನೀನು ಬರೆದಿಟ್ಟುಕೋ, ನನಗಂತೂ ಚೆನ್ನಾಗಿ ಗೊತ್ತು, ನೀನು ಮರೆಯುವಿ.
ಪತಿ: ಏನಿಲ್ಲ ಪ್ರಿಯೆ, ನಿನಗೆ ಒಣ ಶುಂಠಿ ಹುಡಿಯನ್ನೂ, ಮತ್ತು ಒಂದು ತಟ್ಟೇ ಮೊಸರನ್ನೂ ನಾನು ತರಬೇಕು ಅಷ್ಟೇ ಅಲ್ಲವಾ? ಇದನ್ಯಾಕೆ ಬರೆದಿಟ್ಟುಕೊಳ್ಳಬೇಕು?
ಪತ್ನಿ: ಅದೆಲ್ಲಾ ಸರಿ, ಜತೆಗೆ ಚ್ಯವನಪ್ರಾಶವನ್ನೂ ತಾ, ಇದನ್ನಾದರೂ ನೀನು ಬರೆದಿಟ್ಟುಕೊಳ್ಳಲೇ ಬೇಕು ನೋಡು.
ಪತಿ ಅಸಹನೆಯಿಂದ ಕನಲಿದ, " ಇಷ್ಟು ವಸ್ತುಗಳನ್ನೂ ನೆನಪಿನಲ್ಲಿಡಲಾರೆ ಎಂದುಕೊಂಡೆಯಲ್ಲ, ನಾನೇನು ಅಷ್ಟೂ ಮರೆಗುಳಿಯಾ?" ಎಂದೆನ್ನುತ್ತಾ ಆತ ಅಡುಗೆ ಮನೆಗೆ ಹೋದ.

೨೦ ನಿಮಿಷದ ನಂತರ ಆತ ಅಡುಗೆ ಮನೆಯಿಂದ ಹೊರ ಬಂದು ಪತ್ನಿಗೆ ಒಂದು ತಟ್ಟೆಯಲ್ಲಿ ಕತ್ತರಿಸಿದ ಹಣ್ಣುಗಳನ್ನು ಕೊಟ್ಟ, ಮತ್ತು ತನಗಾಗಿ ಮಾಡಿಕೊಂಡು ತಂದ ಕಾಫಿ ಕುಡಿಯತೊಡಗಿದ.
ಆ ತಟ್ಟೆಯಲ್ಲಿನ ಹಣ್ಣುಗಳನ್ನು ನೋಡಿ ಆಕೆ ಸ್ವಲ್ಪಹೊತ್ತು ಅದನ್ನೇ ದುರುಗುಟ್ಟಿ ನೋಡುತ್ತಾ ಕೋಪದಿಂದ " ನಿನ್ನನ್ನು ಬರೆದಿಟ್ಟುಕೊಳ್ಳಲು ಹೇಳಿದರೆ ಬೇಡ ಎಂದೆಯಲ್ಲ. ನಾನು ಕೇಳಿದ್ದೇನು, ಈಗ ನೀನು ತಂದದ್ದೇನು?" ಎಂದಳು
ಪತಿ ಆಶ್ಚರ್ಯದಿಂದ ಅವಳತ್ತ ಪ್ರೀತಿಯಿಂದ ಕನಿಕರದಿಂದ ಹೇಳಿದ" ನೀನು ಇದನ್ನೇ ಕೇಳಿದ್ದು, ನೀನು ಮರೆತಿದ್ದೆ ಅಷ್ಟೇ"
ಪತ್ನಿ ಸಿಟ್ಟಿನಿಂದ ಹೇಳಿದಳು " ಮರೆತದ್ದು ನೀನು, ನಾನಲ್ಲ, ನನಗೆ ಈಗಲೂ ಸರಿಯಾಗಿ ನೆನಪಿದೆ, ನಾನು ಕೇಳಿದ್ದು ರೊಟ್ಟಿ ಮತ್ತು ಚಟ್ನಿ"




Monday, April 27, 2015

ತ್ಯಾಂಪನ ಕಾರ್ಡಿನ ಪಜೀತಿ


ತ್ಯಾಂಪ ಭಾರೀ ಖುಷಿಯಲ್ಲಿದ್ದ

ಅದಕ್ಕೆ ಕಾರಣವೂ ಇತ್ತೆನ್ನಿ.

ಅವನೆಣಿಸಿದ ಹಾಗೆಯೇ ಇವತ್ತು ಹೊಸ ಕ್ರೆಡಿಟ್ ಕಾರ್ಡ್ ಸಿಕ್ಕಿತ್ತು
ಫಳ ಫಳ ಹೊಳೆಯುವ ನೀಲಿ ಬಣ್ಣದ ಪ್ಲಾಸ್ಟಿಕ್ ಕಾರ್ಡ್ನಲ್ಲಿ ಅವನ ಹೆಸರು ಉಬ್ಬಿದ ಅಕ್ಷರದಲ್ಲಿ ಕೆತ್ತಲಾಗಿತ್ತು.
ಇನ್ನಂತೂ ಹಣದ ಅವಶ್ಯಕಥೆಯೇ ಇಲ್ಲಾ, ಎಷ್ಟು ಬೇಕಾದರು ಖರ್ಚು ಮಾಡಬಹುದು. ಬರಿ ಮೆಶೀನಿನಲ್ಲಿ ಉಜ್ಜಿದರಾಯ್ತು ಅಷ್ಟೇ!!
ಅದೇ ಖುಷಿಯಲ್ಲಿ ಕೈ ಎತ್ತಿ ಬೀಸಿಕೊಂಡು ಅದೇ .. ಜಿಮ್ಮ್ ನ ಹುಡುಗರ ಶೈಲಿಯಲ್ಲಿ ನಡೆಯುತ್ತಿದ್ದ.
ಇಡೀಪ್ರಪಂಚವೇ ತನ್ನ ಕೈಯಲ್ಲಿರುವ ಖುಷಿಯಲ್ಲಿ.
ದಾರಿಯಲ್ಲೊಂದು ಎಟಿಎಮ್ ಎದುರಾಯ್ತು.
ಹೊರಗೆ ಇಬ್ಬರು ನಿಂತಿದ್ದರು. ಅವನು ಅವರನ್ನು ಗಮನಿಸಲಿಲ್ಲ,
ಹೌದು ಯಾಕೆ ಗಮನಿಸಬೇಕು..??
ಒಳಗಡೆಯೂ ಯಾರೂ ಇರಲಿಲ್ಲ.
ಒಳಬಂದು ತಾನೇ ಬಾಗಿಲು ಹಾಕಿದ. ತಾನೇ ಮುಚ್ಚಿಕೊಳ್ಳಲು ಸಮಯ ಬೇಕಾಗುತ್ತದಲ್ಲ. ಯಾರು ಕಾಯ್ತಾರೆ ಬಿಡಿ.
ಕಾರ್ಡ್ ಸಿಕ್ಕಿಸಬೇಕಾದ ಜಾಗದಲ್ಲಿ ತನ್ನ ಕೈಯ್ಯಲ್ಲಿದ್ದ ಕಾರ್ಡ್ ತೂರಿಸಿದ.
ಆ ಮಶೀನ್ ತನ್ನ ಜನ್ಮದಲ್ಲೇ ಇಂತಹಾ ಕಾರ್ಡ್ ನೋಡಿಲ್ಲವೇನೋ ಎನ್ನುವಂತೆ ಒಳ ಸೆಳೆದುಕೊಂಡಿತು.
ಅದುವರೆವಿಗೂ ಏನೇನೋ ತೋರಗೊಡುತ್ತಿದ್ದ ಯಂತ್ರದ ಪರದೆ ಒಮ್ಮೆಲೇ ಬಣ್ನ ಕಳೆದುಕೊಂಡು ಹಸಿರಾಗಿ ಸ್ತಬ್ದವಾಯ್ತು
ಆಗ ಬೇಕಾದದ್ದೇ ಅಷ್ಟು ಸುಂದರವಾಗಿತ್ತಲ್ಲ ತನ್ನ ಕಾರ್ಡ್..
ತಾನು ಎನೆಲ್ಲಾ ಮಾಡಬೇಗಿತ್ತು ಅನ್ನುವುದನ್ನ ನಾಲ್ಕು ನಾಲ್ಕು ಬಾರಿ ಓದಿಕೊಂಡು ಬಂದಿದ್ದ.
ಆದರೆ ಈ ಖಾಲಿ ಹಸಿರು ಪರದೆ..??
ಕಾದ ಕಾದ.. ಅಕ್ಷರವು ಇಲ್ಲ ಅದರಪ್ಪನ ಗಂಟೂ....
ಸ್ವಲ್ಪ ಹೊಟ್ಟು ನಿಂತಿದ್ದ ಕಿಂಕರ್ತವ್ಯ ಮೂಢನಾಗಿ
ಸಿಕ್ಕಿದ ಗುಂಡಿಯೆಲ್ಲಾ ( ಬಟನ್) ಒತ್ತಿದ.
ಉಹ್ಹು ...ಇಲ್ಲ
ಜನ್ಮ ಜನ್ಮಾಂತರದಿಂದ ಮುನಿಸಿಕೊಂಡವರ ತರಹ ಸುಮ್ಮನೆ ಹಸಿರಾಗಿಯೇ ನಿಂತಿತ್ತು ಯಂತ್ರ.
ತ್ಯಾಂಪಿಯ ಮುನಿಸಿನಂತೆ..??? ಅಲ್ಲಲ್ಲ
ಗೋವಿಂದ..
ನಾನೇ ...ನನ್ನ ಕಾರ್ಡೇ ಬೇಕಾಯ್ತಾ ಮಾರಾಯಾ ಇದಕ್ಕೆ..
ಎಷ್ಟು ದಿನಗಳಿಂದ ಹಪಹಪಿಸಿ ಸಿಕ್ಕಿದ ಕಾರ್ಡಿದು... ಇದನ್ನೂ ನುಂಗಿ ಜೀರ್ಣ ಮಾಡಿಕೊಂಡು ಬಿಡ್ತಲ್ಲಾ ಈ ಯಂತ್ರ..???
ಆಗಲೇ ಒಳಬರುವಾಗ ಅವಗಣಿಸಿದ್ದ ಏನೋ ಬರೆದು ಅಂಟಿಸಿದ್ದ ಹಾಳೆಯ ನೆನಪಾಯ್ತು.
ಓಡಿಹೊರಬಂದು ಸುಮ್ಮನೆ ಓದಿದ
" ಈ ಯಂತ್ರ ಕೆಟ್ಟಿದೆ ದಯವಿಟ್ಟು ನಿಮ್ಮಕಾರ್ಡನ್ನು ಇಲ್ಲಿ ಉಪಯೋಗಿಸದಿರಿ"

ಪಾಪ ತ್ಯಾಂಪ

ನಿನ್ನಮ್ಮನಾಗಿ ನಾ ಮತ್ತೆ ಬರಲೇ




ನನ್ನ ಎದೆಯಾಳದಲಿ ಬಚ್ಚಿಟ್ಟ ಕನಸಿನಲೂ
ಕಂತು ಕಂತಿಗೂ ನಿನ್ನ ನೆನಪಿನೆಳಲೂ

ಎಲ್ಲನೋವನು ತನ್ನ ಮನದಲ್ಲೇ ಬಚ್ಚಿಟ್ಟು
ಹೊರಗೆ ಅರಳುವೆ ನೀನು ಪ್ರೀತಿ ಕೊಟ್ಟು

ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು
ಮತ್ತೆ ಬಿಸಿಯುಸಿರ ಆ ಪ್ರೀತಿ ಒನಪು

ಇನಿದನಿಯ ಜೋಗುಳದ ಅಕ್ಕರೆಯ ಕುಡಿನೋಟ
ಒಲವಿನಕ್ಕರೆಯ ಆ ತುತ್ತಿನೂಟ

ಬದುಕಿನೋಣಿಯ ತುಂಬ ಒಲುಮೆಯಮ್ರತ ಹರಿಸಿ
ನನ್ನ ಭಾಗ್ಯವ ಬರೆದೆ ಪ್ರೀತಿಯುಣಿಸಿ

ಮನೆಯ ಕಜ್ಜದ ಹೊರೆಯ ಹೊತ್ತೂ ಪ್ರೀತಿಯ ಹೊಸೆದು
ನಮ್ಮ ಬೆಳೆಸಿದೆ ನಿನ್ನ ನೆತ್ತರೆರೆದೂ

ಉಕ್ಕಿತೆನ್ನಯ ಅಕ್ಷಿ ಪಟಲದಾಚೆಯು ನಿತ್ಯ
ಇಳೆಯ ದೇವರು ನೀನೇ ಸತ್ಯ ನಿತ್ಯ

ಕಣ್ಣಾಲದಲ್ಲೆಲ್ಲ ಹರಿಯಿತೊಲುಮೆಯ ಜಲವು
ನಿನ್ನ ತ್ಯಾಗವ ನೆನೆಸಿ ಅಮ್ಮ ನಿಜವೂ

ನಿನ್ನ ಸೇವೆಯ ಋಣವ ನಾ ಹೇಗೆ ತೀರಿಸಲೇ
ನಿನ್ನಮ್ಮನಾಗಿ ನಾ ಮತ್ತೆ ಬರಲೇ

Saturday, April 25, 2015

ಚೈತ್ರದ ಒಲವು






ಚೈತ್ರದುಯ್ಯಾಲೆಯನು ಜೀಕಿ ಅರಸಿತು ಮನವು
ಚಿಗುರಿನೆಲೆಯೆಲೆಯಲ್ಲಿ ಪ್ರೇಮ ಲೀಲೆ

ಹಸಿರುಡುವ ಪ್ರಕೃತಿಯ ನೋಡಿ ದಣಿಯದು ಮನವು
ಪ್ರೇಮದಲರಿನ ಮತ್ತ ಕಂಪಿನಲ್ಲೆ


ಅಲ್ಲಿ ಮರಮರದಲ್ಲಿ ಹೂಗಳೆದೆಯೆಡೆಯಲ್ಲಿ
ಮತ್ತೆ ಬರೆಸೀತು ಆ ಪ್ರೇಮ ಕಾವ್ಯ

ಕೋಗಿಲೆಯ ಪಂಚಮವು ನಿಶೆಯನೇರಿಸುತಿರಲು
ಮಂದ ಅನಲವು ಹರಡಿ ಕಂಪು ಸೂಸೇ


ನೀರ ಜುಳುಜುಳು ರವವು ಜತೆಯ ರಾಗವ ಪಾಡೆ
ಭಾವದುಯ್ಯಾಲೆಯಲಿ ರಾಸಲೀಲೆ

ಕನಸ ಕನ್ಯೆಯ ಸನಿಹ ಮತ್ತು ಎರೆಯಿತು ನಿಶೆಯ
ನನ್ನ ಕನ್ಯೆಯ ಕೆನ್ನೆ ತಂಪು ಕಂಪು


ಹಸಿರು ಸೀರೆಯ ಒಡತಿ ಪ್ರೇಮ ಕಾವ್ಯದ ಕನ್ಯೆ
ಮನವು ಜಾರುವ ನೆಪವು ಬೇರೆ ಬೇಕೇ

ಪ್ರಕೃತಿ ಪುರುಷರ ಸ್ನೇಹ ಇಳೆಯ ನಿತ್ಯದ ನಿಯಮ

ಮೊದಲ ಚೈತ್ರದ ಒಲವಿಗೆಣೆಯು ಉಂಟೇ 

ಹೆಸರಲ್ಲೇನಿದೆ..?

ಹೆಸರಲ್ಲೇನಿದೆ..?

ಪ್ರಾಧ್ಯಾಪಕಿ ಜವಾನನನ್ನು ಕರೆದರು

ಪ್ರಾಧ್ಯಾಪಕಿ: ಏಯ್ ನಿನ್ನೇ....... ಏಯ್ ಇಲ್ಲಿ ಬಾ... 

ಜವಾನ: ಮೇಡಮ್ ನನ್ನ ಹೆಸರು ಏಯ್ ಅಂತ ಅಲ್ಲ, ನೀವು ನನ್ನ ಹೆಸರು ಹೇಳಿಯೇ ಕರೆಯ ಬಹುದು..

ಪ್ರಾಧ್ಯಾಪಕಿ: ಸರಿಯಪ್ಪಾ ಏನು ನಿನ್ನ ಹೆಸರು

ಜವಾನ: ನನ್ನ ಹೆಸರು ಪ್ರಾಣನಾಥ.

ಪ್ರಾಧ್ಯಾಪಕಿ: ಏನೂ.... ಅದು ಕರೆಯಕಾಗಲ್ಲ, ಬೇರೆ ಏನಾದರೂ ಹೇಳು

ಜವಾನ: ಸರಿ ನನ್ನ ಮನೆಯವರು ನನ್ನನ್ನು ಯಜಮಾನ್ರೇ ಅಂತ ಕರೇತಾರೆ..

ಪ್ರಾಧ್ಯಾಪಕಿ: ಇಲ್ಲ ಇದೂ ಸರಿ ಯಿಲ್ಲ ಬೇರೆ ಹೇಳು

ಜವಾನ: ಮತ್ತೆ ನನ್ನ ಓಣಿಯವರೆಲ್ಲಾ ಸಖ ಅಂತ ಕರೀತಾರೆ

ಪ್ರಾಧ್ಯಾಪಕಿ: ಇದೂ ಸರಿ ಯಿಲ್ಲ , ಮತ್ತೆ ಬೇರೆ ಹೆಸರೇನಾದರೂ... 

ಜವಾನ: ಚಿಕ್ಕವನಿರುವಾಗ ಇನಿಯ ಅಂತ ಕರೆಯುತ್ತಿದ್ದರು..

ಪ್ರಾಧ್ಯಾಪಕಿ: ಯಾರು

ಜವಾನ : ಪಕ್ಕದ ಮನೆಯವಳು..

ಪ್ರಾಧ್ಯಾಪಕಿ: ಹಾಗೆಲ್ಲಾ ಕರೆಯೋಕೆ ಆಗಲ್ಲಪ್ಪ...ಅಂದ ಹಾಗೆ ನಿನ್ನ ಸರ್ ನೇಮ್ ಏನು..?

ಜವಾನ: ಸ್ವಾಮಿ..

ಪ್ರಾಧ್ಯಾಪಕಿ ಸುಸ್ತು ಹೊಡೆದು ಕೆಳಗೆ ಬಿದ್ದರು....

Monday, April 20, 2015

ಜೀವನ ಸಾಗರ



ಇದಿರಿಗೆ
ಸಾಗರದ
ತುಂಬು ನೋಟ
ಏರಿಳಿವ ಅಲೆಗಳ ಮೋಹಕ ಆಟ
ಬಿಳಿನೊರೆಯ ಸಾಗಾಟ
ದಾಟಿದರೆ
ತೋರಿಕೆಗೆ ನೀಲ ಶಾಂತ,

ಆದರೆ
ಗರ್ಭವೋ ಪ್ರಚಂಡ ದಂಡು
ಅಣುವಿಂದ ಮಹತಿಗೆ ಕಾದಿಹವು
ಒಂದೊಂದನ್ನೇ ಇಡಿಡೀಯಾಗಿ
ನುಂಗಿ ನೊಣೆಯಲು
ಕರಗಿಸಿ ಅರಗಿಸಿಕೊಳ್ಳಲು
ತಿಮಿಂಗಿಲ, ಶಾರ್ಕ್,ಅಷ್ಟಪದಿ
ಒಂದೆರಡೇ ಹೆಸರಿಸಲು
ಲೆಕ್ಕವಿಲ್ಲದಷ್ಟು,

ಒಂದರಿಂದೊಂದು ಬಲ ಇವಕ್ಕೆ
ಇವನ್ನೆದುರಿಸಲು ಶಕ್ತಿ
ಇದೆಯಾದರೆ
ಹೆದರಿಸಿ ಓಡಿಸಲು ಯುಕ್ತಿ
ನಿನಗಿಲ್ಲಿ ಸ್ಥಾನ ಪಕ್ಕಾ
ಇಲ್ಲದಿರೆ ಈಗಲೇ
ಲೆಕ್ಕ ಚುಕ್ತಾ

ಕಲಿಯಬೇಕು ಇಲ್ಲೇ
ಇಂದೇ ಮುನ್ನುಗ್ಗಲು
ಇಂಥಹುಗಳ ಕೈ ಬಾಯಿಗೆ
ಸಿಲುಕದೇ ಪಾರಾಗಲು
ಬಾಳಲು
ಆಳದಡಿ ಸಿಗುವುದು
ಅಮೂಲ್ಯ ಸಂಪತ್ತು
ಹವಳ
ಮುತ್ತು

ಇರಿ ಆನಂದದೇ




ಅಯ್ಯೋ ಈ ತಾಪತ್ರಯಗಳ ಸಂತೆ
ಸಾಕಪ್ಪಾ ನಮಗೆ ಮಾತ್ರ ಅಂತೆ
ಎಂದೆಣಿಸೋ ಮೊದಲು ನೆನಪಿರಲಿ
ಗೋಚರ ನಮಗೆ ನಮ್ಮ ಕಷ್ಟ ಮಾತ್ರ
ಇವೆ, ಸಕಲರಿಗೂ ಕಷ್ಟ ಅವರವರದ್ದು

ಸಂತೋಷ ಎಲ್ಲಿದೆ

ನಾವಿಲ್ಲದ ದಿನಗಳಲ್ಲೇ -ಅಲ್ಲ
ನಾವಿರದ ಕಾರ್ಯಗಳಲ್ಲೇ - ಅಲ್ಲ
ಮತ್ತೆಲ್ಲಿ- ನಾವಿರುವಲ್ಲಿ ಮಾತ್ರ

ಪ್ರೀತಿಸೆ ಎಲ್ಲವನ್ನ

ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ,ನಮ್ಮನ್ನ
ಅಲ್ಲಿದೆ ನಮ್ಮೆಲ್ಲರ ಸಂತೋಷ

ನಿನ್ನೆಯೋ ಮುಗಿದ ಕಥೆ

ನಾಳೆಯ ನೋಡಿದವರ್ಯಾರು
ಇಂದು ಮಾತ್ರವೇ ನಮ್ಮದು
ಅದಕ್ಕೇ ಇದ್ದು ಬಿಡಿ ವಾಸ್ತವದಲ್ಲಿ
ಅದೇ ಆನಂದದಲ್ಲಿ

ಇಂದು ಮುಂದು, ಮತ್ತೆಂದೂ

ಇಂದೇ ಕಲಿಯಬೇಕಿದೆ ನಾವು
ಇದೇ ಜೀವಿಸೋ ಕಲೆ
ರಮಿಸಿ, ಅನುಭವಿಸೋ ಕಲೆ
ಇರಲು ಆನಂದದೇ

ಸಾವಿರ ದೀಪವ ಹಚ್ಚುವಾಸೆಯೂ




ಕಾಡಿನಾಚೆಯಾ ಊರ ಹೊರಗಿನಾ
ಆಸೆ ಹೊತ್ತ ಹಿರಿದಾದ ಕನಸಿನಾ
ಮರುಕು ಬಿದ್ದ ಹಳೆ ಗುಡಿಯ ಬದಿಗಿನಾ
ಪುಟ್ಟದಾದ ಒಂದು ಮಿಣುಕು ದೀಪ ನಾ

ಅರಿವಿದೆ ಮನಸ್ಸಿಗೆ ಸತ್ಯದತ್ತಲೂ
ಹರಡಿದೆ ಕತ್ತಲು ನನ್ನ ಸುತ್ತಲೂ
ಬೀಸುವ ಗಾಳಿಯು ಭರದೆ ಮುತ್ತಲೂ
ಸನಿಹದೆ ಬದುಕಿನ ಸಂಜೆಗತ್ತಲೂ

ಅಂತಃ ಶಕ್ತಿಯಾ ಬಳಸಿ ಉರಿಯುವ
ಉರಿದು ಉರಿದು ಜಗವೆಲ್ಲ ಬೆಳಗುವ
ಮನಸ್ಸಿನೊಳಗಿನಾ ಶ್ರೇಷ್ಟ ಶಕ್ತಿಯಾ
ಬಳಸಿ ಬೆಳೆಸಿ ಎಲ್ಲ ಬೆಳಗುವಾಸೆಯೂ

ಜಗವ ಬೆಳಗುವ ಬದುಕು ಮುಟ್ಟುವ
ನಲಿವಿನ ಮನೆಗಳ ಲೋಕ ಕಟ್ಟುವ
ಕನಸ ಬೆಸೆಯುವ ಮನಸ ತಟ್ಟುವ
ಸಾವಿರ ದೀಪವ ಹಚ್ಚುವಾಸೆಯೂ


Saturday, April 18, 2015

ಲಹರಿ




ಕಾದಿದ್ದೆ ನಿದ್ದೆಯಿಲ್ಲದ ಹಲವು ರಾತ್ರೆ
ಬೇಕಾದುದೆಲ್ಲವ ಜತೆಗಿಟ್ಟು
ಆದರೂ ಬರಲಿಲ್ಲ
ನೀನು

ಶಿವನೇರಿ ಏರಿದ್ದೆ, ಹತ್ತಿದ್ದೆ ನಂದಿ
ಕಳೆದಿದ್ದೆ ಹತ್ತು ದಿನ
ಆದರು ಸುಳಿವೇ ಇಲ್ಲ
ನಿನ್ನದು

ಬೀಸ ಬಯಲಲ್ಲೂ
ತುಂಬು ಮಡುವಲ್ಲೂ
ಹರಿವ ತೊರೆಯಲ್ಲು
ನಿಂತು ಕಾದೆ
ಪತ್ತೆಯೇ ಇಲ್ಲ
ನೀನು

ನಿಗಿ ನಿಗಿ ಕೆಂಡದ ಬಿರು ಬಿಸಿಲಲ್ಲಿ
ಇನ್ನೇನು ಬದಲಾಗೋ ಸಂಕೇತದ
ಆ ಕ್ಷಣ ಪ್ರತ್ಯಕ್ಷ
ನೀನು

image curtsy: Internet

ಮುತ್ತನ ಕಾರ್ ಪೂಲಿಂಗ್


ಮೊನ್ನೆ ಮೊನ್ನೆ ಬಂದಿದ್ದ ಸ್ವೀಟ್ ತಕೊಂಡು ಮುತ್ತ ನನ್ನ ಬಳಿ ಖುಷಿಯಲ್ಲಿ,
ಏಯ್ ನನಗೊಬ್ಬ ಕಾರ್ ಪೂಲರ್ ಸಿಕ್ಕಿದ ಕಣೋ..
ಖುಷಿಯಾಯ್ತು. ಯಾಕೆಂದರೆ ನನ್ನಲ್ಲಿ ಮನೆಯಿಂದ ದೂರದಲ್ಲಿರೊ ಕೆಲ್ಸದ ಬಗ್ಗೆ ,
ಅಷ್ಟು ದೂರ ಕಾರಲ್ಲೇ ಹೋಗಲಾಗದ ಬಗ್ಗೆ ಕೇಳಿದಾಗ ಕಾರ್ ಪೂಲ್ ಹುಡುಕಿಕೋ ಎಂದಿದ್ದೆ.
ನನ್ನ ಮಾತಿಗೆ ಸ್ವಲ್ಪ ಗೌರವ ಸಿಕ್ಕಿತಲ್ಲಾ ಅನ್ನೋ ಖುಷಿ ನಂಗೆ.
ಸರಿಯಪ್ಪಾ ಒಳ್ಳೆಯದಾಗಲಿ ಅಂದೆ. ಅಂದ ಹಾಗೆ ನಿನಗೆ ಪೂಲಿಗೆ ಸಿಕ್ಕಿದವರಾರು?
ಅದಾ ಒಬ್ಬರು ಅಲ್ಲಿಯೇ ಕೆಲ್ಸ ಮಾಡಿಕೊಂಡಿದ್ದಾರೆ ದಿನಾ ಇಲ್ಲಿಂದಲೇ ಹೋಗುವುದು.
ಮೊನ್ನೆ ಪುನಃ ಸಿಕ್ಕಿದ ಮುತ್ತ ಕೇಳಿದೆ

ಹೇಗೆ ನಡೀತಾ ಇದೆಯಪ್ಪಾ ನಿನ್ನ ಕಾರು ಪೂಲಿಂಗ್?
ಎಲ್ಲಿಯಾ, ಕಾರೇ ಇಲ್ಲ...ಎಂದ ಬೇಸರದಲ್ಲಿ, ಮುಚ್ಚಿದ ಬಿಸಿ ಡಬ್ಬದ ಮೇಲೆ ತಣ್ಣೀರು ಹಾಕಿದ ಹಾಗಿತ್ತು ಅವನ ಮುಖ.
ಏನಾಯ್ತಪ್ಪಾ..? ಕಾರು ಎಲ್ಲಿ,,, ಏನು ಆಕ್ಸಿಡೆಂಟ್ ಆಯ್ತಾ..?
ಇಲ್ಲ ಕಣೋ
ಮತ್ತೆ
ಕಾರು ಮೀಟರಿನವ ಕೊಂಡು ಹೋದ,
ಆದೇನು ಸ್ಪೀಡೋ ಮೀಟರ್ ರಿಪೆರಿಗಾ..?
ಅಲ್ಲಪ್ಪಾ. ಪೆಟ್ರೋಲ್ ಹಾಕಲಾರದೇ ಲೋನ್ ತೆಗೆದೆ
ಮತ್ತೆ
ಈಗ ಲೋನಿನ ದುಡ್ಡು ಬಡ್ಡಿ ಕಟ್ಟಲಾರದೇ ಹೋದುದರಿಂದ ನನಗೆ ದುಡ್ಡು ಸಾಲ ಕೊಟ್ಟವ ಕಾರೇ ಕೊಂಡು ಹೋದ ಜಬ್ಬರದಸ್ತೀ...
ಯಾಕೆ ನಿನ್ನ ಆ ಪೂಲಿನವ ಎಲ್ಲಿ ಹೋದ
ಪೂಲಿನವ,,,, ಅವನೊಬ್ಬ ದೊಡ್ಡ ಕುಡುಕ ಮಾರಾಯಾ........
ಒಂದು ವಾರ ಸರಿಯಾಗಿಯೇ ಇತ್ತು..
ನನ್ನ ವಾರದ ಪೂಲಿಂಗ್ ಮುಗಿಯಿತಾ, ಅವನದ್ದು ಶುರು ಆಗುತ್ತಲೇ...ನಾನು ಅವನ ಕಾರಲ್ಲಿ ಬರುವಾಗ ಕೂಡಾ ನನ್ನ ಹತ್ರನೇ ದುಡ್ಡು ಕಟ್ಟಲು ಹೇಳಿದ, ಪೆಟ್ರೋಲ್ ಬಂಕ್ ನಲ್ಲಿ,
ನಾನು ಹೋಗುವಾಗಲಂತೂ ನನ್ನದೇ ....
ಹೀಗೆ ದಿನಾ ದುಡ್ಡು ಕೊಡಲಾರದೇ......ಲೋನ್ ತೆಗೆದೆ, ಹೇಗಾದರೂ ಸಂಬಳ ಬಂದ ಕೂಡಲೇ ಕೊಡುತ್ತಾನೆ ಅಂದುಕೊಂಡು.
ಅವನಿಗೆ ಅವನ ಕಂಪೆನಿ ಕೊಡುತ್ತಿರಲಿಲ್ಲವಾ..?
ಕೊಡುತ್ತಿತ್ತು, ಆದರೆ ತಿಂಗಳು ಮುಗಿದ ಮೇಲೆ ಅಂತೆ,
ಹೇಗಾದ್ರೂ ಕೊಡುತ್ತಾನಲ್ಲ ಅಂತ ನಾನು ಸಾಲ ಮಾಡಿ ಕೊಟ್ಟಿದ್ದೆ. ತಿಂಗಳು ಮುಗಿದ ಮೇಲೆ ಗೊತ್ತಾದದ್ದು ತನಗೆ ಸಿಕ್ಕಿದ ನನ್ನ ದುಡ್ಡೂ ಆತ ಕುಡಿದೇ ಮುಗಿಸಿದ ಅಂತ.
ಈಗ ಎಲ್ಲಿದ್ದಾನೆ ಆತ..?
ಕುಡದ್ದು ಜಾಸ್ತಿ ಆಗಿ ಆಸ್ಪತ್ರೆಯಲ್ಲಿ......
ಹೀಗಂತ ಗೊತ್ತಿದ್ರೆ ನಾನು ಬಸ್ಸಲ್ಲೇ ಹೋಗಿ ಬರ್ತಾ ಇದ್ದೆ, ತಿಂಗಳ ಪಾಸ್ ತಕ್ಕೊಂಡು....
ಈಗ ಗತಿ ಗೋತ್ರ ಇಲ್ಲೆ ಮರಾಯಾ... ಎಲ್ಲ ನೀನೇ ಮಾಡಿದ್ದು
ಗೋಳೇ ಅಂತ ಅತ್ತ...
ಇಂತವರನ್ನ ಏನ್ರೀ ಮಾಡೋದು?

Cartoon Curtsy: Internet  

ಬೇಸಗೆಯ ಝಳಕ್ಕೆ ಮಾವಿನ ಜುಗಲ್ಬಂದಿ



 ಮಾವಿನ ರಸಾಯನ ಮತ್ತು ಸಾಸಿಮೆ


೧. ಮಾವಿನ ( ಕಾಟು) ಹಣ್ಣಿನ ಸಾಸಿಮೆ:-

೭-೮ ಕಾಟು ಮಾವಿನ ಹಣ್ಣು
ಒಂದು ತಟ್ಟೆ ತೆಂಗಿನ ಕಾಯಿ ತುರಿ( ಹಸಿ ತೆಂಗಿನ ಕಾಯಿ ಆದರೆ ಇನ್ನೂ ಒಳ್ಳೆಯದು)
ಅರ್ಧ ಚಹಾ ಚಮಚ ಸಾಸಿವೆ
೬-೮ ಒಣ ಮೆಣಸು ( ಬ್ಯಾಡಗಿ)
ರುಚಿಗೆ ತಕ್ಕಷ್ಟು ಉಪ್ಪು
ಬೆಲ್ಲ ( ಬೇಕಿದ್ದಲ್ಲಿ, ರುಚಿಗೆ ತಕ್ಕಷ್ಟು)

ತಯಾರಿಸೋ ವಿಧಾನ:-
ತೆಂಗಿನಕಾಯಿ ಸಾಸಿವೆ ಮೆಣಸು ( ಹುರಿಯುವದು ಬೇಡ) ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಕಾಟು ಮಾವಿನ ಹಣ್ಣುಗಳ ಸಿಪ್ಪೆ ತೆಗೆದು ಹಿಸುಕಿ ಮಿಶ್ರಣಕ್ಕೆ ಸೇರಿಸಿ, ಗೊರಟೂ ಇರಲಿ. ಸಾಂಬಾರ್ ನಲ್ಲಿನ ಹಾಗೆ ಸ್ವಲ್ಪ ದಪ್ಪ ಇದ್ದರೆ ಚೆನ್ನು ಜಾಸ್ತಿ ನೀರಾಗಿಸೋದು ಬೇಡ.
ಕುಚ್ಚಲಕ್ಕಿ ಅನ್ನದ ಜತೆಗೆ ಇನ್ನೂ ಜಾಸ್ತಿ ರುಚಿ.




೨. ಮಾವಿನ ರಸಾಯನ :-

(ಹುಳಿಯಲ್ಲದ ಮಾವಿನ ಹಣ್ಣು ಒಳ್ಳೆಯದು)
ಮಾವಿನ ಹಣ್ಣುಗಳು ನಾಲ್ಕೈದು,
ಬೆಲ್ಲ ರುಚಿಗೆ ತಕ್ಕಷ್ಟು
ತೆಂಗಿನ ಕಾಯಿ ತುರಿ ಒಂದು ತಟ್ಟೆ
ಯಾಲಕ್ಕಿ ೪-೫.

ತಯಾರಿಸೋ ವಿಧಾನ:-
ಬಾಗನ ಪಲ್ಲಿ ಆಪೂಸ್ ಅಥವಾ ಬೇರೆ ಯಾವುದೇ ಸಿಹಿಯಾದ ಹಣ್ಣುಗಳು. ಅಥವಾ ಹುಳಿ ಸಿಹಿ ಮಿಕ್ಸ್ ಕೂಡಾ ಮಾಡ ಬಹುದು
ಯಾಲಕ್ಕಿ ಬೆಲ್ಲ ಕಾಯಿ ತುರಿ ಅರೆದ ಮಿಶ್ರಣಕ್ಕೆ ಮಾವಿನ ಹಣ್ಣಿನ ತಿರುಳು ಸೇರಿಸಿದರಾಯ್ತು. ( ಕೆಲವರು ಮಾವಿನ ಹಣ್ಣನ್ನು ಕತ್ತರಿಸುತ್ತಾರೆ ಚಿಕ್ಕದಾಗಿ, ಇನ್ನು ಕೆಲವು ಕಡೆ ಹಿಸುಕಿ ರಸಾಯನ ಮಾಡುತ್ತಾರೆ)

ರೆಸಿಪಿ ಕೃಪೆ: ಶ್ರೀಮತಿ ಶಾಂತಿ ಗೋಪೀನಾಥ್

ಸುರಕ್ಷಾ ಸಾಧನ.. ಪಾಸ್ ವರ್ಡ್!!


"ಕೇಳಿದ್ರಾ, ನಂಗೊಂದು ಉಪಾಯ ಸಿಕ್ಕೇ ಬಿಡ್ತು ರೀ...
ನಮ್ಮ ಮರಿ ತ್ಯಾಂಪನ್ನ ಕಂಪೂಟರ್ ಕಂಟ್ರೋಲ್ ಮಾಡೋದು ಹೇಗೆ ಅಂತ"
ಮನೆಗೆ ಬಂದವಳೇ ತ್ಯಾಂಪಿ ಹೇಳಿದಳು.
ಆ ದಿನ ತ್ಯಾಂಪಿಗೆ ತಳಮಳ ಜಾಸ್ತಿಯಾಗಿತ್ತು, ಅವಳ ಕಿಟ್ಟಿ ಪಾರ್ಟಿಯಲ್ಲಿ ಮಕ್ಕಳು ಹಾಳಾಗಲು ಕಾರಣ ಈ ಅಂತರ್ಜಾಲ ಅಂತ ಮಾತಾಡಿಕೊಂಡಿದ್ದು ಕೇಳಿ.
ಹಾಗಂತ ಅವಳೂ ಹಾಗೇ ಸುಮ್ಮನೇ ಕೇಳಿಕೊಂಡು ಮನೆಗೆ ಬರಲಿಲ್ಲ.
ಅದಕ್ಕೇನೇನು ಮಾಡ ಬೇಕು ಹೇಗೆ ಮಕ್ಕಳು ಈ ಅಂತರ್ಜಾಲದಿಂದ ಹಾಳಾಗೋದನ್ನು ತಡೆಯ ಬೇಕು ಅಂತೆಲ್ಲಾ ಸಹಾ, ಆ ವಿದ್ಯಮಾನವನ್ನು ಅರಿತೇ ಮನೆಗೆ ಬಂದಿದ್ದಳು.
ಅದಕ್ಕೆ ಸುಲಭ ಮಾರ್ಗವೆಂದರೆ ಒಂದು ಆಂಟಿ ಸುರಕ್ಷಾ ಸಾಧನವನ್ನ ಕಂಪ್ಯೂಟರಿನಲ್ಲಿ ಅಳವಡಿಸಿದರಾಯ್ತು, ಅದಕ್ಕೆ ಒಂದು ಪಾಸ್ ವರ್ಡ್ ಕೂಡಾ ಹಾಕಬೇಕು. ಆ ಪಾಸ್ ವರ್ಡ್ ಇಲ್ಲದೇ ಮಕ್ಕಳು ಯಾವ ಬ್ಯಾಡದ ಕ್ಷೇತ್ರಕ್ಕೂ ಹೋಗುವಂತೆಯೇ ಇಲ್ಲ. 

ಇದಲ್ಲವೇ ಸರ್ವ ಸುರಕ್ಷಾ ವಿಧಾನ,
ಬಿದಿರೇ ಇಲ್ಲದಿದ್ದರೆ ಕೊಳಲೆಲ್ಲಿಂದ......?
ಅಲ್ಲವೇ???
ಅಂತೂ ತ್ಯಾಂಪನನ್ನು ಒಪ್ಪಿಸಿಯೇ ಬಿಟ್ಟಳು ನೋಡಿ.
ದಿನಾ ದಿನಾ ಅರ್ಧ ರಾತ್ರೆಯ ವರೆಗೆ ಮರಿ ತ್ಯಾಂಪ ಕಂಪ್ಯೂಟರಿನಲ್ಲಿ ಕುಳಿತಿರುತ್ತಿದ್ದ, ತ್ಯಾಂಪಿಗೆ ನಿದ್ದೆ ಜಾಸ್ತಿ.
ತ್ಯಾಂಪನಿಗೋ ಒಂದೂ ಅರ್ಥ ಆಗುತ್ತಿರಲಿಲ್ಲ, ಅಂತರ್ಜಾಲ ಅಳವಡಿಸಿದ ಮೊದ ಮೊದಲೆಲ್ಲಾ ತ್ಯಾಂಪನೂ ಮರಿತ್ಯಾಂಪನೊಟ್ಟಿಗೆ ಕುಳಿತೇ ಇದ್ದ.
ಅದು ತ್ಯಾಂಪಿಯ ಸಲಹೆ ಅಪ್ಪ ಅಮ್ಮ ಅಂತ ಯಾರಾದರೊಬ್ಬರು ಜತೆಗಿದ್ದರೆ ಮಕ್ಕಳು ಬ್ಯಾಡದ ಸೈಟಿಗೆಲ್ಲಾ ಹೋಗಲ್ಲ. ಅಲ್ಲವೇ,
ರಾತ್ರೆ ಒಂಬತ್ತಕ್ಕೇ ನಿದ್ರೆ ಕೂರುವ ತ್ಯಾಂಪಿಗಂತೂ ಮರಿ ತ್ಯಾಂಪನೊಂದಿಗೆ ಏಗುವುದು ಸಾಧ್ಯವಾಗದ ಮಾತು , ಉಳಿದವರಾರು
ಬಡ ತ್ಯಾಂಪನೇ.
ಆತನಿಗೂ ನಿದ್ದೆ ಒಂಬತ್ತಕ್ಕೇ ಬಂದರೂ ತೂಕಡಿಸಿಕೊಂಡೇ ಮರಿಯ ಜತೆಯಲ್ಲಿ ಕುಳಿತಿರುತ್ತಿದ್ದ.
ಮಧ್ಯೆ ಮಧ್ಯೆ ಎಚ್ಚರವಾದಾಗಲೆಲ್ಲಾ... ಮರಿ ತ್ಯಾಂಪನನ್ನು ಗದರಿಸಿದರೂ ಗದರಿಸಿದ ತ್ಯಾಂಪ
ಆದರೇನು? ಒಂದೇ ಕ್ಷಣದಲ್ಲಿ -ಮಾಡುತ್ತಿದ್ದ/ ನೋಡುತ್ತಿದ್ದ - ಎಲ್ಲಾ ಕಾರ್ಯಕ್ರಮಗಳೂ ಮಕ್ಕಳ ಕಾರ್ಯಕ್ರಮಗಳೇ ಎಂದು ಪ್ರೂವ್ ಮಾಡಿ ತೋರಿಸುತ್ತಿದ್ದ ಮರಿ ತ್ಯಾಂಪ.
ಅವನ ವಾದದೆದುರು ತ್ಯಾಂಪಿಗೇ ಜಾಗವಿಲ್ಲ ಇನ್ನು ಬಡ ತ್ಯಾಂಪನ ಹೆಸರೆಲ್ಲಿಂದ..?
ಅಂತೂ ಇಂತೂ ಆ ಆತ್ತೆ ಸುರಕ್ಷಾ ಸಾಧನ ಅಲ್ಲಲ್ಲ ಆಂಟೀ ಸುರಕ್ಷೆ ಅಳವಡಿಸಿಕೊಂಡೇ ಬಿಟ್ಟರು.
ಅವತ್ತು ತ್ಯಾಂಪ ಕಂಪ್ಯೂಟರ್ ತೆರೆದ, ಪಾಸ್ ವರ್ಡ್ ಹಾಕ ಬೇಕಲ್ಲ.... ಏನು ಮಾಡಿದರೂ ಪಾಸ್ ವರ್ಡ್ ನೆನಪಿಗೇ ಬರಲೊಲ್ಲದು....
ಇನ್ನು...? ಕಂಪ್ಯುಟರ್ ತೆರೆಯಲೇ ಸಾಧ್ಯವಿಲ್ಲವಲ್ಲ....
ಆದರೂ ತ್ಯಾಂಪ ತ್ಯಾಂಪಿ ಖುಷಿಯಲ್ಲಿದ್ದಾರೆ..
ಯಾಕೆಂದರೆ ಇಂದು ಕಂಪ್ಯೂಟರ್ ತೆರೆಯಬೇಕಾದರೆ ಮರಿ ತ್ಯಾಂಪ ತ್ಯಾಂಪನಲ್ಲೋ ತ್ಯಾಂಪಿಯಲ್ಲೋ ಕೇಳಲೇ ಬೇಕಲ್ಲ ಆ ಖುಲ್ ಜಾ ಸಿಮ್ ಸಿಮ್ ಪದ...
ಮತ್ತೆ ಇನ್ನು ಮೂರು ನಾಲ್ಕು ದಿನ ಅವರಿಬ್ಬರೂ ಮರಿ ತ್ಯಾಂಪನಿಗೆ ಆ ಪಾಸ್ ವರ್ಡ್ ಮರೆತು ಹೋಗಿದೆ ಅಂತ ಹೇಳೋದು, ಆತ ಅತ್ತು ಕರೆದೂ ರಂಪ ಮಾಡಿದ ಮೇಲೆ ನೋಡಿದರಾಯ್ತು ಅಂತ ತೀರ್ಮಾನಿಸಿ ಠರಾವು ಹೊಡೆಸಿಕೊಂಡರು.
ಆ ದಿನ ಸಂಜೆ ಮರಿ ತ್ಯಾಂಪ ಶಾಲೆಯಿಂದ ಬಂದ, ಊಟ ಮುಗಿಸಿ ಎಂದಿನಂತೆ ಕಂಪ್ಯೂಟರ್ ತೆರೆದ
ಅದರಲ್ಲೇ ಮುಳುಗಿದ.
ಅರ್ಧ ಗಂಟೆ ಆಯ್ತು, ಮುಕ್ಕಾಲಾಯ್ತು ಎರಡು ಗಂಟೆ ಆಯ್ತು,
ತ್ಯಾಂಪ ತ್ಯಾಂಪಿ ಇಬ್ಬರೂ ಕಾದದ್ದೇ ಬಂತು.
ಮರಿ ತ್ಯಾಂಪ ಕರೆಯಲೇ ಇಲ್ಲ ಇವರಿಬ್ಬರನ್ನ...
ಕೊನೆಗೆ ಬೇಸತ್ತ ಗಂಡ ಹೆಂಡತಿ ಇಬ್ಬರೂ ಮರಿ ತ್ಯಾಂಪನ ರೂಮಿಗೇ ಹೋದರು.
ಆಶ್ಚರ್ಯ ಪರಮಾಶ್ಚರ್ಯ ಮರಿತ್ಯಾಂಪ ಆರಾಮವಾಗಿ ತನ್ನ ಅಂತರ್ಜಾಲದ ಆಟ ಆಡಿಕೊಂಡೇ ಇದ್ದಾನೆ...
ಹಾಗಾದರೆ ... ಆ ಪಾಸ್ ವರ್ಡ್...?
ಸ್ವಲ್ಪ ತಡೆದು ಕೇಳಿದರೆ....
ಇಲ್ಲವಲ್ಲಾ...
ಕಂಪ್ಯೂಟರ್ ತನಗೇ ಕೇಳಲೇ ಇಲ್ಲ ಪಾಸ್ ವರ್ಡ್
ಮತ್ತೆ .... ಅರೇ.... ಯಾಕೆ ಯಾಕೆ ಹಾಗಾಯ್ತು..? ತ್ಯಾಂಪ ತ್ಯಾಂಪಿ ಇಬ್ಬರೂ ಬೆರಗಾದರು....
ಏನು ಕೇಳಿದ ಮರಿ ತ್ಯಾಂಪ...
ತ್ಯಾಂಪ ತ್ಯಾಂಪಿ ಎಲ್ಲ ವಿವರಿಸಿದರು. ಒಂದು ಸುರಕ್ಷಾ ಸಾಧನ ಅಳವಡಿಸಿದ್ದೆವು. ಅಂತರ್ಜಾಲದ ಸುರಕ್ಷೆಗಾಗಿ.. ಅಂತ.
ಮರಿ ತ್ಯಾಂಪ ಹೇಳಿತು. ಅತ ಅಳವಡಿಸಿದ್ದೇನೋ ಹೌದು ಅದು ನಿಮ್ಮಿಬ್ಬರ ಖಾತೆಯಲ್ಲಿ ..
ಯಾಕೆ ಹಾಗಾಯ್ತು..?
ಆಗ ಮರಿ ತ್ಯಾಂಪನೆಂದ..
ಪಪ್ಪಾ ಮಮ್ಮೀ ನನ್ನ ಖಾತೆಯ ಸುರಕ್ಷೆಗಾಗಿ ಆಗಲೇ ಪಾಸ್ ವರ್ಡ್ ಹಾಕಿ ಯಾಗಿದೆ, ಅದನ್ನ ಯಾರೂ ಓಪನ್ ಮಾಡೋ ಹಾಂಗೇ ಇಲ್ಲ.
.......................................
ಕಥೆ ಹೈಲ್ ಆಯ್ತಲ್ಲಾ....

photo : Internet

Friday, April 17, 2015

ರಾತ್ರಿ ಪಯಣವೆಂಬ ಮಾಯಾಲೋಕದಲ್ಲಿ


ನನಗೆ ಅಚ್ಚರಿ ತರುವ ಅನೇಕ ವಿಷಯಗಳಲ್ಲಿ ಧೂಮ್ರ ಶಕಟದಲ್ಲಿನ ನಿಶಾಚರ (ರಾತ್ರೆ ಬಸ್ಸಿನ ) ಪಯಣವೂ ಒಂದು. ಇದರಲ್ಲೇನಿದೆ ಮಹಾ ಅಂತ ನೀವು ಹುಬ್ಬೇರಿಸಿದಿರಾದರೆ ಈ ಬರಹ ಪೂರ್ತಿಯಾಗಿ ಓದಿ  ತಿಳಿಸಿ. ಅಂದರೆ ಬರೇ ಲೆಕ್ಕಾಚಾರದ ಸರಾಸರಿಗಾಗಿ  ೩೦ ಅಂಕಣಗಳಲ್ಲಿ ಗಂಟೆಗೆ ೫  ಬಸ್ಸು  ಅಂತ ಗಣನೆಗೆ ತೆಗೆದುಕೊಂಡರೂ ರಾತ್ರಿಯಲ್ಲಿ ೧೫೦೦ ಬಸ್ಸುಗಳು ಅಂದರೆ ಸರಾಸರಿ ಒಂದು ಬಸ್ಸಿನಲ್ಲಿ ೪೦ ಜನ ಅಂದುಕೊಂಡರೂ ೬೦ ಸಾವಿರ ಜನ ರಾತ್ರೆ ಸಂಚರಿಸುವರು ಈ ಬಸ್ಸುಗಳಲ್ಲಿ. ನಾನು ತುಂಬಾನೇ ಸಾಧಾರಣವಾಗಿ ಈ ಲೆಕ್ಕಹಾಕಿದ್ದೇನೆ. ಇದರ ತಪ್ಪು ಸರಿಯ ವಿಮರ್ಶೆಯ ಗೋಜಲಿನಲ್ಲಿ ನಿಮ್ಮನ್ನು  ಸಿಕ್ಕಿಸುವದು ನನ್ನ ಉದ್ದೇಶವಲ್ಲ. ಅದು ಸಾಧುವೂ ಅಲ್ಲ.

ಎಲ್ಲೆಲ್ಲಿಂದ ಎಲ್ಲೆಲ್ಲಿಯವರೆಗು ಅತ್ತಿಂದಿತ್ತ ಇತ್ತಿಂದತ್ತ ಸಂಚರಿಸುತ್ತಿರುವ ಈ ನಿಶಾಚರ ಧೂಮ್ರ ಶಕಟಗಳಲ್ಲಿ ನಿದ್ದೆಯಮಲಲ್ಲಿ ಮುಳುಗೇಳುತ್ತಲೇ ಉದಯಕ್ಕೆ ಕರಾರುವಾಕ್ಕಾಗಿ ಅವರವರ ಗಮ್ಯ ಸೇರಿಸುವ ಉದ್ದಿಶ್ಯದ ಗಹನ ಸಹಜ ಕ್ರಿಯೆಯ ಪಾಲುದಾರರಾದ ಸಂಚಾಲಕ ಹಾಗೂ ನಿರ್ವಾಹಕರೇ ನನ್ನ ಮೊದಲ ಅಚ್ಚರಿ. ನಾವೆಲ್ಲಾ ನಿದ್ದೆಯ ಮಹಾ ( ಕೆಲವು ಮಹಾನುಭಾವರ ಗೊರಕೆ ಪೊರಕೆಯ ಹೊರತಾಗಿಯೂ) ಅಮಲಲ್ಲಿ ತೇಲಾಡುತ್ತಿರುವಾಗ, ಅಲ್ಲಲ್ಲಿ ಕೆಲವು ಅಪವಾದಗಳಿದ್ದರೂ ಕೂಡಾ.  ಇವರಿಬ್ಬರೂ ಎಚ್ಚರವಿದ್ದು ನಮ್ಮನ್ನು ನಮ್ಮ ನಮ್ಮ ಗಮ್ಯಕ್ಕೆ ಅನೂಚಾನವಾಗಿ ತಲುಪಿಸಿ ಬಿಡುವರು. ನಾವು ನಮ್ಮದೇ ಮಯಕದಲ್ಲಿ ಬಸ್ಸು ಹತ್ತಿ ನಮ್ಮ ನಮ್ಮ ಅಧಿಕೃತ ಆಸನಗಳಲ್ಲಿ ಆಸನಾರೂಢರಾಗಿ ಬಸ್ಸು ಹೊರಡುವವರೆಗೆ ನಮ್ಮದೇ ಊಹಾ ಸಾಮ್ರಾಜ್ಯದಲ್ಲಿದ್ದು ಕಣ್ಣು ಮುಚ್ಚಿದರೆ, ಪುನಃ ಕಣ್ಣು ಬಿಟ್ಟಾಗ ಬೆಳಗಾಗಿ ನಮ್ಮ ಗಮ್ಯವನ್ನು ತಲುಪಿಯೇ ಬಿಟ್ಟಿರುತ್ತೇವೆ.


ನನಗೆ ಈ ನಿಶಾ ಮಾರ್ಗದ ಮಧ್ಯೆಯಲ್ಲಿ ಪ್ರಕೃತಿಯ ಕರೆಗೆ ಹೋಗುವ ಅಭ್ಯಾಸವುಳ್ಳ ಹಲವರಂತೆ ನನಗೂ ಇದೆ. ಸೀದಾ ಬಸ್ಸಿಳಿದು ಯಾವುದಾದರೂ ಪರದೆ / ಅಡ್ಡ ಇದೆಯಾ ಅಂತ ಹುಡುಕಿ ಭಾರ ಇಳಿಸಿದರೆ ಆಯ್ತು. ಆ ನಿಶೆಯಮಲಲ್ಲಿ ಯಾರದ್ದೋ ಬಾಗಿಲು ಹಾಕಿದ್ದ ಮನೆಯ, ಅಂಗಡಿಯ ಗೋಡೆಯ ಅಥವಾ ಬಾಗಿಲ ಪಕ್ಕ ಹೀಗೆ ಎಲ್ಲೆಂದರಲ್ಲಿ ನಿಂತು ಜಿಪ್ ತೆಗೆಯುವ ಮಹಾನುಭಾವರನ್ನೂ ಕಂಡಿದ್ದೇನೆ. ಪಾಪ ಬೆಳಗೆದ್ದು ಅವರೆಲ್ಲಾ ಆ ಶಗಡಿಗೆ ಎಷ್ಟು ಬಯ್ಕೊಂಡರೋ ಏನೋ. ಕೆಲವೊಮ್ಮೆ ನಾಯಿಗಳೆದ್ದು ಗಲಾಟೆ ಮಾಡಿ ಅವುಗಳ ಮಾಲೀಕರನ್ನೆಬ್ಬಿಸಿದಾಗ ಅರ್ಧದಲ್ಲೆ ಈ ಮಹಾನುಭಾವರು ಬೇರೆಡೆಗೆ ಓಡುವುದೂ ಉಂಟು...ರಾತ್ರೆ ನಿದ್ದೆ ಮತ್ತಿನ  ಪ್ರಯಾಣದ ಈ ಕಾರ್ಯ ವೈಖರಿಯೇ ಅಂತಹದ್ದು ಬಿಡಿ. ಗಂಡಸು ಮಕ್ಕಳದ್ದು ಈ ಪರಿಯಾದರೆ ಮಹಿಳೆಯರಿಗೆ ಅದರಲ್ಲೂ ಹಿರಿಯ ಮಹಿಳೆಯರಿಗೆ ಯಮ ಯಾತನೆ. ನಮ್ಮ ಹಾಗೆ ಎಲ್ಲೆಂದರಲ್ಲಿ ಹೊರ ಹೋಗುವಂತಿಲ್ಲ. ಇದನ್ನೂ ನನ್ನ ಮನೆಯ ಗೃಹಲಕ್ಷ್ಮಿಯವರು ಒಮ್ಮೊಮ್ಮೆ ಗಂಡಸರ ಈ ಸೌಕರ್ಯವನ್ನು ಸಂಕಲನಕ್ಕೂ ಒಮ್ಮೊಮ್ಮೆ ವ್ಯವಕಲನಕ್ಕೂ ಉಪಯೋಗಿಸುದುಂಟು. ಹೀಗಾಗಿ  ನಮ್ಮ ಸಂಸಾರ ಸಮೇತದ ಪಯಣಗಳಲ್ಲೆಲ್ಲಾ ನಾನೇ ಕಂಡಕ್ಟರ್ ಮತ್ತು ವಾಹನ ಚಾಲಕರಿಗೆ ರಿಕ್ವೆಶ್ಟ್ ಮಾಡಿ ಹೋಟೆಲ್ ನಲ್ಲಿ ನಿಲ್ಲಿಸಿದ್ದೂ ಉಂಟು. ಹೋಟೆಲ್ಲಿನ ಜವಾಬ್ದಾರಿಯ ಮತ್ತೊಂದು ಕಥೆ ಸರಕಾರೀ ವಾಹನಗಳಿಗೆ ಅವರವದ್ದೇ ಆದ ಅಡ್ಡಾ ಇದೆ. ಮೂಲಭೂತ ಸೌಕರ್ಯವೇ ಇಲ್ಲದ ಕೆಲವಾದರೆ ಪಯಣಿಗರನ್ನು ಸಿಕ್ಕಾಪಟ್ಟೇ ವಸೂಲಿ ಮಾಡುವವರು ಇನ್ನು ಕೆಲವರು ಆದರೂ ನಮ್ಮ ಅವಶ್ಯ ಕಥೆ ಪೂರೈಸೀತಲ್ಲ ಎಂದು ಸಂತೋಷ ಪಟ್ಟುಕೊಳ್ಳುವವರು ಎಲ್ಲರೂ.


ಹಲಕೆಲವೊಮ್ಮೆ ರಾತ್ರೆ ಹೀಗೆ ಸಂಚರಿಸುವಾಗ ನನಗೆ ಪ್ರಕೃತಿ ಕರೆಯಿಂದಾಗಿಯೋ ಸಹಚಾಲರ ಮರುಗುಗೊರಗುವಿನ ಪ್ರಕಟನೆಯಿಂದಾಗಿಯೋ ಎಚ್ಚ್ರಗೊಂಡಾಗ ಅರೆ ನಿದ್ದೆ ಅರೆ ಎಚ್ಚ್ರದ ಅಯೋ ಮಯ ಸ್ಥಿತಿಯಲ್ಲೇ ಆ ಕತ್ತಲೆಯ ರಾತ್ರೆಯ ಬಸ್ಸಿನ ಹೆಡ್ ಲೈಟ್ಗಳ ಬೆಳಕಿನಲ್ಲಿ ಸುತ್ತಲ ಪರಿಸರವೇ ಅದೆಷ್ಟೋ ಅರಾಜಕತೆ ಸೃಷ್ಟಿಸ ಬಲ್ಲುದು. ಕೆಲವೊಮ್ಮೆಯಂತೂ ನಾನು ಬಸ್ಸಿನಲ್ಲಿರುವೆನೋ ಅಥವಾ ಯಾವುದೋ ಮಾಂತ್ರಿಕ ವಾಹನದಲ್ಲಿ ಆಕಾಶಯಾನದಲ್ಲಿರುವೆನೋ ಎಂಬ ಭ್ರಮೆಯೂ. ಕೆಲವೊಮ್ಮೆ ರಾಮಾಯಣದ ಮಯೂರ ವಿಮಾನದಲ್ಲಿ ಕಾಡಿನ ದೊಡ್ಡ ದೊಡ್ಡ ವೃಕ್ಷಗಳನಡುವೆ ಇನ್ನೇನು ದಾರಿಯಲ್ಲಿ ರಾಕ್ಷಸರಂತೆ ನಿಂತು ನಮ್ಮ ದಾರಿಯಡ್ದಗಟ್ಟಿದವರಂತೆ, ಅಥವಾ ಇನ್ನೇನು ನಮ್ಮ ಕಥೆಯೇ ಮುಗಿಯಿತು ಅನ್ನುವ ಭ್ರಮೆಯೂ, ಅಥವಾ ಆಕಾಶದಲ್ಲಿ ತೇಲುತ್ತಾ ಮೋಡಗಳ ಮಧ್ಯೆ ತೂರಿಕೊಂಡು   ಮುಂದೋಡುತ್ತಿರುವ ಪುಷ್ಪಕ ವಿಮಾನವೋ  ಎಂಬ ಭ್ರಮೆಯೂ. ಒಮ್ಮೊಮ್ಮೆ ಕುಂಬಾರ ಹ್ಯಾರಿಯ ಹಾರುವ ಪೊರಕೆಯಂತೆಯೂ ಕಂಡುದುಂಟು. ನೀವೇನೋ ನಾನು ಕಥೆ ಪುಸ್ತಕ ಓದಿದ್ದು ಜಾಸ್ತಿಯಾಯ್ತೋ ಅಥವಾ ಸೀನನೆಂದ ಹಾಗೆ ಮಾವಿನ ಕಾಯಿಯ ತಂಬುಳಿಯ ಮಹಿಮೆ ಅಂದರೂ ನಾನು ಏನೂ ಅಡ್ಡ ಹೇಳುವುದಿಲ್ಲ ಬಿಡಿ.

ಈ ನಿಶಾ ಪಯಣದ  ಪಜೀತಿಗಳನ್ನೂ ನಿಮ್ಮ ಮುಂದಿಡಬೇಕೆನ್ನಿಸಿತು.  
ಒಮ್ಮೆ ನಾನು ಸಂಸಾರ ಸಮೇತನಾಗಿ ಊರಿಗೆ ಹೋಗುತ್ತಿದ್ದೆ. ರಸ್ತೆ ಮಧ್ಯೆ ನಡುರಾತ್ರಿಯಲ್ಲಿ ಒಂದು ಕಡೆ ಪ್ರಕೃತಿಯ ಕರೆಗೆಂತ ಬಸ್ಸು ನಿಲ್ಲಿಸಿದ್ದರಿಂದ ಇಳಿದೆ. ಯಾವುದೊ ನಿಯತ ಕಾಲಿಕೆ ಕಂಡಿತು ಪಕ್ಕದ ಅಂಗಡಿಯಲ್ಲಿ. ಅದನ್ನು ತಕ್ಕೊಂಡು ಪಕ್ಕದ ಹೋಟೆಲ್ಲಿಗೆ ನುಗ್ಗಿದೆ. ಕಂಡಕ್ಟರ್ ಡ್ರೈವರ್ ಕಾಣಿಸುವ ಹಾಗೆ ನಾನು ಕುಳಿತು ನನ್ನ ಕಾಫಿ ಹೀರುತ್ತಿದ್ದೆ. ನನ್ನ ಹಳೇ ಸ್ನೇಹಿತರೊಬ್ಬರು ಸಿಕ್ಕಿ ಹಿಂದಿನ ನೆನಪನ್ನು ಜ್ಞಾಪಿಸಿಕೊಂಡೆವು. ನನ್ನ ದೃಷ್ಟಿಯಿಂದ ಕಿಂಚಿತ್ತೂ ನಾನು ನಮ್ಮ ನಿರ್ವಾಹಕ, ಚಾಲಕರನ್ನು ಅತ್ತಿತ್ತ ಅಲುಗಾಡಗೊಟ್ಟಿರಲಿಲ್ಲ. ಅದೇಕೋ ನಮ್ಮ ನೆನಪೆಲ್ಲಾ ತಾಜಾ ಆಗಿ ಮುಗಿದಾಗ ಅವರೇ ಕೇಳಿದ್ದರು ಎಲ್ಲಿಗೆ ಹೊರಟಿರಿ ಅಂತ. ಆಗಲೇ ನೆನಪಾಗಿ ಇದಿರಿಗೆ ನೋಡುತ್ತೇನೆ ನಾನು ದೄಷ್ಟಿಯನ್ನೆಟ್ಟು ಇಟ್ಟವರು  ಅಲ್ಲಿಯೇ ಇದ್ದರೂ ಯಾವ ಮಾಯಕದಲ್ಲೋ ನಾನು ಬಂದ ಬಸ್ಸು ಮಾತ್ರ ಮಂಗ ಮಾಯವಾಗಿಬಿಟ್ಟಿತ್ತು. ನನ್ನ ಹತ್ರ ಅಂದಿನ ಟಿಕೆಟೂ ಇಲ್ಲ, ಊರಿಗೆ ಹೋಗಲು ಹಣವೂ. ಅವೆಲ್ಲ ಪೂರಾ ಕ್ಯಾಷಿಯರ್ ಆದ ನನ್ನ ಗೃಹ ಮಂತ್ರಿಯವರ ಹತ್ರವೇ ಉಳಿದು ಬಿಟ್ಟಿತ್ತು. ಇನ್ನೇನು ಮಾಡುವುದು ನನ್ನ ಸ್ನೇಹಿತರು ನನಗೂ ನಿನ್ನ ಹಾಗೇ ಆದರೆ ಕಷ್ಟ ಮಾರಾಯಾ ಅಂತ ಅವರ ಬಸ್ಸು ಹತ್ತಿಯೇ ಬಿಟ್ಟರು. ನನ್ನ ಕಥೆ..? ಅಂತೂ ರಸ್ತೆಯ ಪಕ್ಕ ಬಂದು ನಿಂತೆ, ನನ್ನ ದೇವರು ನನ್ನ ಕೈ ಬಿಟ್ಟಿರಲಿಲ್ಲ, ಯಾವನೋ ಪುಣ್ಯಾತ್ಮ ಕಾರಿನಲ್ಲಿ ಬರುತ್ತಿದ್ದವ ನಿಲ್ಲಿಸಿ ನನ್ನ ಅಹವಾಲು ಕೇಳಿ ನನ್ನನ್ನು ಕೂರಿಸಿಕೊಂಡು ಕನಸ್ಸಿನಲ್ಲಿನ ಹಾಗೇ ಮುಂದಿನ ಊರಿನಲ್ಲೇ ಆ ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿದ, ನನ್ನ ಮಗನೂ ಶ್ರೀಮತಿಯವರ ಅಳುಮುಖ ಬಸ್ಸಿನಲ್ಲಿ ಕೂಗಾಡುತ್ತಿದ್ದವರ ಗಲಾಟೆ ಎಲ್ಲವೂ ನನ್ನ ನೋಡಿದ ಕೂಡಲೇ ಮಂಗ ಮಾಯವಾಯ್ತು. ಅದು ನನ್ನ ಮಗನ ಗಲಾಟೆಯಿಂದಾಗಿ ಅವರ ನಿದ್ರೆ ಗೆ ತೊಂದರೆಯಾದುದರಿಂದ ಕೂಡಾ ಇರಬಹುದು.

ಇನ್ನೊಮ್ಮೆ ಹೀಗೇ ಚಾಲಕ ಮಾತ್ರ ವಿರುವ ಬಸ್ಸಿನಲ್ಲಿ ಮಹಾಶಯರೊಬ್ಬರು ಬೆಳಿಗ್ಗೆ ಬಸ್ಸಿನಿಂದ ಇಳಿದಾಗಲೇ ಗೊತ್ತಾಗಿದ್ದುದು  ತಾನು ಹತ್ತಿದಲ್ಲಿಗೇ ವಾಪಾಸ್ಸೂ ಬಂದಿರುವೆ ಅಂತ, ನನ್ನ ಅಣ್ಣನ ಮಗನ ಉಪನಯನಕ್ಕೆಂತ ಹೊರಟ ನಾವಂತೂ ಮಧ್ಯೆ ಮಧ್ಯೆತೊಂದರೆಯಾಗಿ , ತಡವಾಗಿ ಎಲ್ಲರ ಕೊನೆಯ ಪಂಕ್ತಿಯ ಊಟವೂ ಮುಗಿದು ಕಲ್ಯಾಣ ಮಂಟಪದವರು ಬಾಗಿಲು ಹಾಕುವ ಸಮಯಕ್ಕೆ ಹೋಗಿ ತಲುಪಿದ್ದೆವು.

ಇದಕ್ಕಿಂತಲೂ ಮಜವಾಗಿರುವ ಇನ್ನೊಂದು ಘಟನೆ.  ರಜೆ ಮುಗಿಸಿ ಮಂಗಳೂರಿನ ಬಸ್ ನಿಲ್ದಾಣದಿಂದ ಎಂದಿನಂತೆ ನಾವು ಮೂವರೂ ಬೆಂಗಳೂರಿನ ಬಸ್ ಆ ರಾತ್ರೆ ಹತ್ತಿದೆವು. ೧೫,೧೬,೧೭ ಟಿಕೆಟ್ ನೋಡಿ ಅದರಲ್ಲಿ ಗೆರೆಯೆಳೆದ ಮೇಡಮ್ ಕಂಡಕ್ಟರ್ ನಮ್ಮ ನಮ್ಮ ಜಾಗದಲ್ಲಿ ಕುಳ್ಳೀರಿಸಿದಳು. ಸ್ವಲ್ಪವೇ ಸಮಯದಲ್ಲಿ ನಮ್ಮ ಧೂಮ್ರ ಶಕಟ ಕಂಕನಾಡಿಯಲ್ಲಿ ನಿಂತಿತು. ಅಲ್ಲಿಂದ ನಮ್ಮ ಹಾಗೇ ಮೂವರ ಸಂಸಾರವೊಂದು ಬಸ್ ಹತ್ತಿತು. ಈಗ ಬಂತು ನೋಡಿ ತಕರಾರು. ಅವರದ್ದೂ ಅದೆ ೧೫, ೧೬, ೧೭ ನಂಬ್ರದ ಟಿಕೆಟು. ಈಗ ಮಾಡುವುದೇನನ್ನು?. ಕಂಡಕ್ಟರಮ್ಮ ಮತ್ತು  ನಾನು, ಹೀಗಾಗಲು ಸಾಧ್ಯವೇ ಇಲ್ಲವಲ್ಲ ಅಂದರೂ, ಈ ಅವಾಂತರಕ್ಕೇನು ಮಾಡೋಣ. ಇನ್ನೊಮ್ಮೆ ಅವರ ಟಿಕೇಟುಗಳನ್ನು ಪರಿಶೀಲಿಸಿದ್ದಾಯ್ತು, ನೂರು ಪ್ರತಿಶತ ಅವರ ಟಿಕೇಟುಗಳು ಸರಿಯಾಗಿಯೇ ಇವೆ, ಉಳಿದದ್ದು ನಮ್ಮ ಟಿಕೇಟು..?   ಈಗ ನೋಡಿದರೆ ಅದು ಅವತ್ತಿನದ್ದಲ್ಲದೇ ಮಾರನೆಯ ರಾತ್ರಿಯ ಟಿಕೇಟ್ ಆಗಿ ಹೋಗ ಬೇಕೇ ಶಿವ ಶಿವಾ..? ಅಂದರೆ ನಾವು ನಾಳೆಯ ಸರೀ ರಾತ್ರೆಯ ಬಸ್ಸಿನ ಬದಲು ಇವತ್ತೇ ಹತ್ತಿ ಕುಳಿತಿದ್ದೆವು. ಸರ್ದಾರ್ಜಿ ಆಗುವದೆಂದರೆ ಹೀಗೆಯೇ.. ಅಲ್ಲವೇ? ಕಂಡಕ್ಟರಮ್ಮ ನನಗೆ ಇಳಿಯಲು ಹೇಳಿತು, ಆದರೆ ನಮ್ಮ ಮುಂದಿನ ಆಸನಗಳು ಖಾಲಿ ಇದ್ದುದನ್ನು ನೋಡಿ ನಾನು ಬೆಂಗಳೂರಿನ ಟಿಕೇಟುಗಳನ್ನು ತೆಗೆದುಕೊಂಡು ಕೆಂಪೇಗೌಡ ನಿಲ್ದಾಣದಲ್ಲಿ ನನ್ನ ಮೊದಲ ಮೂರೂ ಟಿಕೇಟುಗಳನ್ನು ರದ್ದು ಮಾಡಿಸಿದ್ದೆ ಮಾರನೆಯ ಬೆಳಿಗ್ಗೆ.
ಅಂತೂ ಅಡಿಗೆ ಬಿದ್ದರೂ...!

ಈಗ  ಪ್ರತಿ ಪ್ರಯಾಣದಲ್ಲಿಯೂ ಸ್ವಲ್ಪ ಹಣ ಇಟ್ಟುಕೊಳ್ಳ ಬೇಕೆಂತಲೂ ಪಯಣದ ಟಿಕೇಟುಗಳನ್ನು ಸರಿಯಾಗಿ ಪರೀಕ್ಷಿಸಿದ ನಂತರವೇ ಹೊರಡುವದೆಂತಲೂ ಸುಗ್ರೀವಾಜ್ಞೆ ಹೊರಡಿಸಿಕೊಂಡಿದ್ದೇನೆ.




ಬಂದ್- ಹೀಗೂ ಒಂದು ಮುಷ್ಕರ



ಜಪಾನ್ ನಲ್ಲೊಂದು ಚಪ್ಪಲಿ ಅಥವಾ ಶೂ ಮಾಡುವ ಪ್ಯಾಕ್ಟರಿಯೊಂದಿತ್ತು.
ಅಲ್ಲಿನ ಕೆಲಸಗಾರರು ಒಮ್ಮೆ ಬೇಡಿಕೆಯೊಂದು ಮುಂದಿಟ್ಟರು.

ಆದರೆ ಆ ಕಂಪೆನಿಯ ಮುಖ್ಯಸ್ಥರು ಒಪ್ಪಿಗೆ ನೀಡಲಿಲ್ಲ.

ಎಲ್ಲಾ ಕೆಲಸಗಾರರೂ ಸೇರಿ ಮುಷ್ಕರ ಹೂಡಲು ನಿರ್ಧರಿಸಿ ಕಂಪೆನಿಗೆ ಮುಂದಾಗಿಯೇ ತಿಳಿಸಿದರು.

ಮ್ಯಾನೇಜ್ಮೆಂಟ್ ಚಕಾರ ಎತ್ತಲಿಲ್ಲ.

ಮುಷ್ಕರದ ದಿನ ಬಂತು.

ಆದಿನ ಎಂದಿನಂತೆ ಕೆಲಸಗಾರರೆಲ್ಲರೂ ಸಮಯಕ್ಕೆ ಮುಂಚೆಯೇ ಕಂಪೆನಿಯ ಪ್ರಾಂಗಣದಲ್ಲಿ ಹಾಜರಿದ್ದರು.

ಸಮಯಕ್ಕೆ ಸರಿಯಾಗಿಯೇ ಎಂದಿನಂತೆ ತಮ್ಮ ಕೆಲಸ ಆರಂಭ ಮಾಡಿದರು.

ಅವರ ಈ ಮುಷ್ಕರ ನಾಲ್ಕು ದಿನದ ವರೆಗೆ ಮುಂದುವರಿಯಿತು.

ಆದರೆ ಐದನೇ ದಿನ ಹೌಹಾರಿದ ಕಂಪೆನಿಯ ಅಧಿಕಾರಿಗಳಿಗೆ ಅವರ ಬೇಡಿಕೆ ಈಡೇರಿಸಲೇ ಬೇಕಾಯ್ತು .

ಕಾರಣ ಗೊತ್ತೇ..?

ಕಂಪೆನಿಯ ಕೆಲಸಗಾರರು ಮುಷ್ಖರ ನಡೆಸಿದ ಅಷ್ಟೂ ದಿನವೂ ಒಂದೇ ಕಾಲಿನ ಶೂ ತಯಾರಿಸುತ್ತಿದ್ದರು.
ನಾಲ್ಕನೆಯ ದಿನಕ್ಕೆ ಎಂಟು ಸಾವಿರ ಶೂ ಅದೂ ಎಡಗಾಲಿನದ್ದೇ...
ಒಂದೇ ಕಾಲಿನ ಶೂ ಎಷ್ಟು ತಯಾರಾದರೇನು..?

ನೋಡಿ ಗೆಳೆಯರೇ..?

ಇದಲ್ಲವಾ..?

ನಿಜವಾದ ಮುಷ್ಕರ ಎಂದರೆ..?

ಹೀಗೆ ಉತ್ಪಾದನೆಯಲ್ಲಿ ಅಥವಾ ವ್ಯಾಪಾರ ವಹಿವಾಟಿನಲ್ಲಿ ನಮಗೆ ನಷ್ಟ ಮಾಡಿಕೊಳ್ಳದೇ ಮುಷ್ಕರ ನಡೆಸಲು ಯೋಚಿಸಿದರೆ
ಈ ಮುಷ್ಕರದಿಂದ ಇಡೀ ರಾಷ್ಟ್ರಕ್ಕಾಗುವ ಹಾನಿ ತಪ್ಪಿಸಬಹುದಲ್ಲವೇ..?

Thursday, April 16, 2015

ಸತ್ತರೆ ಸಾಯಲಿ ಬಿಡಿ ನಮ್ಮ


ರೈತ ಮತ್ತು ಯೋಧ ನಮ್ಮ ಜೀವನದ ಪ್ರಾಮುಖ್ಯ ಬ್ರಹಸ್ಪತಿಗಳು.
ಒಬ್ಬ ಅನ್ನದಾತ ಇನ್ನೊಬ್ಬ ನಮ್ಮನ್ನು ಕಾಯುವವ.
ಇವರಿಬ್ಬರೂ ಸಂತಸದಿಂದರೆ ನಾವೂ ಸಂತಸದಿಂದಿದ್ದೇವು. ನಾವು ತಿನ್ನುವ ಅನ್ನ ಇವರೀರ್ವರ ಋಣದಲ್ಲಿದೆ.
ಆ ಋಣವನ್ನು ತೀರಿಸುವ ಅವಕಾಶವೆಂದರೆ ಇವರಿಬ್ಬರನ್ನು ಸಂತಸದಿಂದಿರುವಂತೆ ಮಾಡುವುದು ಅವರ ಕನಿಷ್ಟ ಅವಶ್ಯಕಥೆ ಪೂರೈಸುವ ಮೂಲಕ.
ಆದರೆ ನಾವು ಹಾಗೆ ಮಾಡುತ್ತಿದ್ದೇವೆಯೇ..?
ನಮ್ಮ ರಾಜಕೀಯ ಮುತ್ಸದ್ದಿಗಳು ಮತ್ತು ವ್ಯಾಪಾರೀ ದುರಂಧರರು ಮತ್ತು ಇವರ ಬಾಲಬಡುಕರನ್ನು ಸಾಕುವುದರಲ್ಲಿಯೇ ನಮ್ಮೆಲ್ಲಾ ಬೆವರು ಆವಿಯಾಗುತ್ತಲಿದೆ.
ಅಲ್ಪ ಸ್ವಲ್ಪ ಉಳಿದ ಸಮಯ ನಮ್ಮ ಸ್ವಾರ್ಥಕ್ಕೆ...
ಪ್ರತಿಕ್ಷಣ ಅವರೀರ್ವರ ಕಗ್ಗೊಲೆಯಾಗುತ್ತಲಿದೆ...    
ಅವರನ್ನು ಉಳಿಸಲು ಸಮಯ ಮನಸ್ಸು ಛಾತಿ ನಮ್ಮಲ್ಲಿದೆಯೇ..?
ಸಾವಿನ ಕ್ಷಣಗಳು

ರೈತನ
ಈ ಕ್ಷಣದ ಹಸಿವಿನ ಜತೆ
ಗ್ರೀಷ್ಮದ ಕರಿ ನೆರಳು
ಸ್ವಾರ್ಥ ಸಂಸಾರದ
ಈ ನನ್ನ ಬದುಕಿನಲ್ಲಿ
ಕಸುವಿಲ್ಲದ ಕೈಗಳಿಗೆ ಸಿಗುವುದು
ತನ್ನವರ ಆಸರೆಯಿಲ್ಲದ
ವಿಷಾದದ ಮರಳ ಸೊಉಧ
ಕದಡುತ್ತಿರುವ ಜಾಗತೀಕರಣದ ಜಗದಲ್ಲಿ
ಬಾಚಿಕೊಂಡ ಶೋಷಣೆಯ ಕರಾಳ ಕೈಗಳು,
ಕಲುಷಿತ ಬೀಜದ,ಸಾಲಸೋಲದ
ನೆಪದಲ್ಲಿ ನೆಲ,ಜಲ
ಮಣ್ಣು, ಕಲ್ಲು, ಮರ, ಲೂಟಿ
ಬೆಟ್ಟದಂತಿರುವ ಕಷ್ಟಗಳೆಡೆಯಲ್ಲೇ
ದಿಕ್ಕೆಟ್ಟ ಏಕಾಂಗಿಯ
ಸ್ಥಬ್ದವಾದ ಗತಿ

ಸಾಕೆನಿಸಿತು ನನಗೆ
ಈ ಸೈನೀಕ ಜೀವನದ

ಸಾವು ಬದುಕಿನ ಜೂಜು
ವಾಸ್ತವಿಕತೆಯ ಇದಿರು ನಾಳಿನ
ಕನಸುಗಳು ಅರ್ಥವಿಹೀನ
ಬಾವುಕ ಆತ್ಮ ಸಮರ್ಪಣೆ
ಸಂಸಾರ,ದೇಶ ಪ್ರೇಮಗಳೆಲ್ಲ
ಜೀವನದ ಅರ್ಥಗಳಾಗಿಯೂ
ಜತೆಯಲ್ಲೇ ವ್ಯರ್ಥ ಸಾಯುತ್ತಿವೆ
ಗತಿ ಪ್ರಾಪ್ತಿಗೆ ಕಾಯುತಿರುವ
ಸಾವಿರಾರು ದಿಕ್ಕೆಟ್ಟ, ರಕ್ತ ಸಿಕ್ತ
ಅರೆ ಬರೆ ದೇಹಗಳು
ನಿದ್ದೆಯೂ ಸಮೀಪಿಸಲು ಹೆದರುತಿಹ
ಸುತ್ತಲಿನ ನಗ್ನಾತಿನಗ್ನ ಮಲೆಗಳು
ಹೆಪ್ಪುಗಟ್ಟಿದ ಬಿಳಿ ಮಂಜು
ಗತಿ ಶೀಲ ಎಲರು

ಜೀವನ ಕ್ಷಣಿಕವಾಗುತ್ತಿದೆ
ಎಲ್ಲವೂ ಕ್ಷಣದಲ್ಲೇ ಸ್ಥಬ್ದವಾಗಲು
ಇನ್ನೂ ಉಳಿದು ಮಾಡುವದೇನನ್ನು
ಸತ್ತರೆ ಸಾಯಲಿ ಬಿಡಿ ನನ್ನ
ಮತ್ತೆ ಹುಟ್ಟಿ ನಿಮ್ಮ ಋಣ ತೀರಿಸಲು

Wednesday, April 15, 2015

ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳ್ಗೆ ಆಗರಂ ಆದ ಮಾನಿಸರೆ ಮಾನಿಸರ್"



ಜೀವನದ ಮೌಲ್ಯಗಳಿಗಾಗಿ ಬದುಕುವ ದೊಡ್ಡವರ ಕಥೆಗಳು

ಮೂರು ಹೃದಯ ಸ್ಪರ್ಶಿ ಘಟನೆಗಳು

ಒಂದು:


ಪಿ ಕಾಳಿಂಗರಾಯರು ಕನ್ನಡದ ಮೇರು ಗಾಯಕರು.ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಗೀತೆಗಳನ್ನು ಹಾಡಿ ನಾಡಿನ ಅಭಿಮಾನ ಬೆಳೆಸಿದವರು.
ಒಮ್ಮೆ ಪಿ ಕಾಳಿಂಗರಾಯರನ್ನು ಅರಸೀಕೆರೆ ಹತ್ತಿರದ ಹಳ್ಳಿಯೊಂದಕ್ಕೆ ಕಾರ್ಯಕ್ರಮ ನೀಡಲು ಆಹ್ವಾನಿಸಲಾಗಿತ್ತು. ಅದಕ್ಕಾಗಿ ಮುಂಗಡ ಸಹಾ ನೀಡಲಾಗಿತ್ತು.ಆವತ್ತು ಕಾಳಿಂಗರಾಯರಿಗೆ ಬೆಂಗಳೂರಿನಲ್ಲಿನ ಕಾರ್ಯಕ್ರಮ ಮುಗಿಯಲು ಕೊಂಚ ತಡವಾಯ್ತು. ದಾರಿಯಲ್ಲಿ ಕಾರು ಹಾಳಾಯಿತು.ಆಗೆಲ್ಲಾ ಈಗಿನಂತೆ ಮೊಬಯಿಲ್ ಸೌಕರ್ಯವಿರಲಿಲ್ಲ, ಸಂಗಡಿಗರು ವಿಳಂಬವಾಗುತ್ತದೆ ಹಿಂತಿರುಗೋಣ ಎಂದರೂ ರಾಯರದು ಒಂದೇ ಹಠ, ಮುಂಗಡ ಪಡೆದಾಗಿದೆ, ಕಾರ್ಯಕ್ರಮಕ್ಕೆ ಹೋಗಲೇ ಬೇಕು. ಸಂಜೆ ೬ ಗಂಟೆಗೆ ಆರಂಭವಾಗಬೇಕಾಗಿದ್ದ ಸ್ಥಳಕ್ಕೆ ತಲುಪಿದಾಗ ಮಧ್ಯರಾತ್ರಿ ದಾಟಿತ್ತು. ಅಲ್ಲಿ ಪ್ರೇಕ್ಷಕರಿರಲಿ, ಸಂಘಟಕರೂ ಇರಲಿಲ್ಲ.ಎಲ್ಲರೂ ಕಾದು ಕಾದು  ಸಾಕಾಗಿ ಮನೆಗೆ ಹಿಂತಿರುಗಿದ್ದರು. ಸಂಗಡಿಗರು ಪೆಚ್ಚಾಗಿ ಖಾಲಿ ವೇದಿಕೆ ನೋಡುತ್ತಿರುವಂತೆಯೇ ರಾಯರು ವೇದಿಕೆ   " ಏರಿಸಿ.. ಹಾರಿಸಿ ಕನ್ನಡ ಬಾವುಟ" ಎಂದು ಗೀತೆ ಆರಂಭಿಸಿಯೇ ಬಿಟ್ಟರು. ಮುಂಗಡ ಪಡೆದ ಮೇಲೆ ಹಾಡಲೇ ಬೇಕು ಎಂಬುದು ಅವರ ದೃಢವಾದ ನಂಬಿಕೆ. ಆಗಲೇ ಜರಗಿತು ಪವಾಡ, ರಾಯರ ಕಂಚಿನ ಕಂಠ ಕೇಳಿ ಮೊದಲ ಗೀತೆ ಮುಗಿಯುವುದರೊಳಗೆ ಹತ್ತಿರದ  ಮನೆಯವರು ಕೇಳಲು ಬಂದು ಕುಳಿತರು. ಸುದ್ದಿ ಹಬ್ಬಿ ಊರ ಜನಗಳು ಬರಲಾರಂಭಿಸಿದರು. ಸಂಘಟಕರು ವಿಷಯ ತಿಳಿದು ಓಡೋಡಿ ಬರುವಷ್ಟರಲ್ಲಾಗಲೇ ಅರ್ಧ ಸಭಾಂಗಣ ಭರ್ತಿಯಾಗಿತ್ತು. ಅವತ್ತು ರಾಯರು ಆವೇಶ ಬಂದವರಂತೆ ಸೂರ್ಯ ಮೂಡುವವರೆಗೂ ಕನ್ನಡ ಹಾಡುತ್ತಲೇ ಹೋದರು. ಅಷ್ಟು ಹೊತ್ತಿಗೆ ಸಭಾಂಗಣ ತುಂಬಿ ತುಳುಕುತ್ತಿತ್ತು. ರಾಯರು ನಂಬಿದ ಮೌಲ್ಯಗಳು ಗೆದ್ದಿದ್ದವು. ಅವರು ಅಕ್ಷರಶಃ ಕನ್ನಡ ಬಾವುಟ ಎತ್ತಿ ಹಿಡಿದಿದ್ದರು.
ಎರಡು:
ಜಿ ಪಿ ರಾಜರತ್ನಂ ಕನ್ನಡದ ಹಿರಿಯ ಬರಹಗಾರರು, ಪರಿಚಾರಕರು . ಅವರು ತಮ್ಮ  ಇಳಿವಯಸ್ಸಿನಲ್ಲಿ ಮಲ್ಲೇಶ್ವರಂ ನಲ್ಲಿನ ಗಾಂಧಿ ಸಾಹಿತ್ಯ ಸಂಘದಲ್ಲಿ ಮಕ್ಕಳನ್ನು ಕೂಡಿಸಿಕೊಂಡು ಕಥೆಗಳನ್ನು ಹೇಳುತ್ತಿದ್ದರು. ಒಮ್ಮೆ ಆ ಬಡಾವಣೆಯಲ್ಲಿ ಪ್ರೌಢಶಾಲಾ      ವಿದ್ಯಾರ್ಥಿಯೊಬ್ಬನಿಗೆ ಶಾಲೆಯಲ್ಲಿ "ನೃಪತುಂಗ"ನ ಕುರಿತು ಪ್ರಬಂಧ ಬರೆಯಲು ಹೇಳಿದರು. ಅವನ ಮನೆಯವರು ಹೆಚ್ಚು ಓದಿದವರಲ್ಲ.ಅವನಿಗೆ ಹೇಗೆ ಮಾರ್ಗದರ್ಶನ ಮಾಡಬೇಕು ತಿಳಿಯದೇ ಹೋದರು. ಪರಿಚಿತರಿಂದ ಜಿ ಪಿ ರಾಜರತ್ನಂ ಗಾಂಧಿ ಸಾಹಿತ್ಯ  ಸಂಘದಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾರೆ ಎಂದು ಮಾತ್ರ ತಿಳಿದಿದ್ದರು.ಅವರೆಷ್ಟು ದೊಡ್ಡ ಬರಹಗಾರರು ಎಂಬುದೂ ಗೊತ್ತಿರಲಿಲ್ಲ.
ಅವರ ಮಾತಿನಂತೆ ವಿದ್ಯಾರ್ಥಿ ಗಾಂಧಿ ಸಾಹಿತ್ಯ ಸಂಘಕ್ಕೆ ಸಂಜೆ ಆರು ಗಂಟೆಗೆ ಬಂದ. ಅವತ್ತು ರಾಜರತ್ನಂ ಕಾರ್ಯಕ್ರಮವೊಂದರಲ್ಲಿ  ಭಾಗಿಯಾಗಿದ್ದರು.ಹಾಗಾಗಿ ತಡವಾಗಿ ಬಂದರು. ರಾತ್ರಿ ಎಂಟರವರೆಗೂ ಕಾದು ಆ ಹುಡುಗ ಮನೆಗೆ ಹೋದ.ವಿಷಯ ತಿಳಿದ ರಾಜರತ್ನಂ ಆ ಹುಡುಗನ  ಮನೆ ಎಲ್ಲಿ ಎಂದು ಕೇಳಿದರು. ಗಾಂಧಿ ಸಾಹಿತ್ಯ ಸಂಘದವರಿಗೆ ಅವನ ಹೆಸರು ಮಾತ್ರ ಗೊತ್ತಿತ್ತು. ಅದನ್ನೇ ಆಧಾರವಾಗಿ ಹಿಡಿದ ರಾಜರತ್ನಂ ಅವರು ತಮ್ಮ ಆ ಇಳಿವಯಸ್ಸಿನಲ್ಲೂ ಒಂದು ಗಂಟೆ ಹುಡುಕಾಡಿ ಆ ಹುಡುಗನ ಮನೆ ಪತ್ತೆ ಮಾಡಿ ಅವನಿಗೆ ಪ್ರಬಂಧ ಬರೆಯಲು ಮಾರ್ಗದರ್ಶನ ನೀಡಿದರು.
ಮೂರು

೨೦೧೦ರಲ್ಲಿ ಶತಮಾನೋತ್ಸವ ಆಚರಿಸಿದ  
ಬಿ ಆರ್ ಪಂತಲು ಅವರ ಪದ್ಮಿನಿ ಪಿಕ್ಚರ್ಸ್ ನಲ್ಲಿ ಪ್ರತಿ ತಿಂಗಳೂ ೭ ನೇ ತಾರೀಖು ಯಾವ  ಕಾರಣಕ್ಕೂ ಸಂಬಳ ನೀಡುವುದನ್ನು ತಪ್ಪಿಸುತ್ತಿರಲಿಲ್ಲ, ಸಾಲ ಮಾಡಿಯಾದರೂ ಅವರು ಅದನ್ನು ನಡೆಸಿಕೊಂಡು ಬರುತ್ತಿದ್ದರು, ಏಳನೆಯ ತಾರೀಖು ಆರ್ಥಿಕ ಮುಗ್ಗಟ್ಟಿನಿಂದ ಸಂಬಳ ನೀಡಲಾಗಲಿಲ್ಲವೆಂದುಪಂತಲು ಅವರಿಗೆ ಎಂಟನೆಯ ತಾರೀಖು ತಿಳಿಯಿತು, ಅದು ಅವರ ಮೇಲೆ ಎಂತಹ ಪರಿಣಾಮ ಬೀರಿತು ಎಂದರೆ ತೀವ್ರ ಹೃದಯಾಘಾತದಿಂದ ಅವರು ನಿಧನರಾದರು.

ಬೆಳಗನು ಮುಸುಕೋ ಮಾಯೆಯ ಮಂಜು

ಬೆಳಗೋ ಬೆಳಗಿನ ಮುಸುಕೇ ಮಂಜೋ
ಮುಸುಕೋ ಮಂಜಿನ ದಾರಿಯೇ ಬೆಡಗೋ
ದಾರಿಯೋ ಬೆಡಗಿನ ಹೊಳೆಯೇ ಪಂಜೋ
ಹೊಳೆಯೋ ಪಂಜಿನ ತರವೇ ಬೆಳಗೋ

ತರವೋ ಬದುಕಿನ ದಾರಿಯ  ಹರಿವೋ
ದಾರಿಯೆ ಹರಿಯುವ ಬವಣೆಯ ಹರಹೋ
ಬವಣೆಯೋ ಹರಹಿನ ಪರಿಯೇ  ನಲಿವೋ
ನಲಿವಲೆ ಬದುಕುವ  ನವೆಯೇ ತರವೋ

ನವೆಯೋ ನಾವೆಯ ತೇಲುವ  ತೆವಲೊ
ತೇಲುವ ತೆವಲಿನ ಮಾಯೆಯ ಒಲವೋ
ಮಾಯೆಯೋ ಒಲವಿನ ದಾರಿಯ ಸೆಳವೋ
ದಾರಿಯ ಸೆಳೆತದ  ಕಾಲದ ನವೆಯೋ

ಕಾಲವೋ ಬೆಳಗಿನ ಕಳೆಯುವ ಸಾಲವೋ
ಕಳೆಯುವ ಸಾಲದೆ ಕಲೆತಿಹ ರಾಗವೋ
ಕಲೆತಿಹ  ರಾಗದ ಬಯಕೆಯ   ತಾನವೋ
ಬಯಕೆಯೆ ತಾನವೇ ಮುಸುಕಿನ ಕಾಲವೋ

ಮುಸುಕೋ ಮಂಜದು ಬೆಳಗಿನ ಪಂಜೋ
ಬೆಳಕಿನ ಪಂಜಿನ ಪರಿಯೇ ಮಂಜೋ
ಪರಿಯೋ  ಮಂಜಿನ ದಾರಿಯೆ ಬದುಕೋ
ದಾರಿಯೆ ಬದುಕಲಿ ಮಾಯೆಯ ಮಸುಕೋ

ಮಾಯೆಯ ಹೊಸಗೆಯು ಪ್ರಕೃತಿ ಛಾಯೆಯೋ
ಪ್ರಕೃತಿಯ ಛಾಯೆಯೇ ಬೆಳಗುವ  ಕಾಯೆಯೋ
ಬೆಳಕಿನ ಕಾಯೆಯ  ಈ  ಅಮೃತ  ಸಾಯೆಯೋ
ಅಮೃತ ಅದ್ಭುತ  ಪ್ರಕೃತಿಯ  ಮಾಯೆಯೋ

Tuesday, April 14, 2015

ಸೋತು ಗೆದ್ದ ಕಥೆ




ಯಾಕೋ ಕದನ ಮೂರನೆಯ
ಮಹಾಯುದ್ಧವೇ ಅನ್ನಿಸಿ ಬಿಟ್ಟಿತು
ಕಾರಣವಂತು ನೆನಪೇ
ಇಲ್ಲ ಈಗ ಬಿಡಿ
ಆದರೆ ಅರುತ್ತಾರು ಕೂಡಾ
ಬದಲಾಯ್ತು ಮುವತ್ತಾರಾಗಿ


ಬೆಳಿಗ್ಗೆ ಎಂದಿನಂತೆ
ಮೌನ ಗೌರಿದೇ ತಿಂಡಿ ಕಾಫಿ
ನನಗೂ ಕದನ ವಿರಾಮದ

ಮನಸ್ಸಿತ್ತಾದರೂ
ಇಷ್ಟು ಬಿಗುಮಾನ ಇರದಿದ್ದರೆ ಹೇಗೆ
ಪತಿ ದೇವನಾಗಿ
ಸರಿ ಮಾತಿಲ್ಲ ಕಥೆಯಿಲ್ಲ
ಪತ್ರ ಉ ಹುಂ ಇಲ್ಲ
ಹಿಂದಿನ ಕಾಲ ಕೆಟ್ಟು ಹೋಯ್ತಾ ..?
ಆದರೂ ಯಾವುದರಲ್ಲೂ ಮನಸ್ಸಿಲ್ಲ
ದಪ್ತರಿನಲ್ಲಿ ಒಂದಕ್ಕೊಂದು
ಆದರೂ
ಕೆಲಸದಲ್ಲಿ ಮರೆತಿದ್ದೆ ಎಲ್ಲಾ
ಯಾಕೋ ಮದ್ಯಾಹ್ನ ಒಮ್ಮೆ
ಕರವಾಣಿ ಎತ್ತಿ ನೋಡಿದೆ
ಆರು ಮಿಸ್ಕಾಲ್
ಎರಡು ಕ್ಲೈಂಟು ದು 
ಮೂರು
ಮತ್ತೊಂದು ಧರ್ಮ ಪತ್ನಿದು
ಕಾಲ್ ಮಾಡಿದ್ಯಾ ಕೇಳಿದೆ
ಗೆದ್ದ ಗತ್ತಿನಲ್ಲಿ
ಕಿಲ ಕಿಲನಕ್ಕ ಶಬ್ದ ಆ ಕಡೆ
ಯಾಕೆ ನಗು ಡೇಟ್ ನೋಡಿ ಕೊಳ್ಳಿ
ನೋಡಿದೆ ತುಥ್ ಮೊನ್ನೆದು
ನೆನಪಾಯ್ತು ನನ್ನ ಮೊಬಾಯಿಲ್
ಸಿಗಲಿಲ್ಲ ಅಂತ ನಾನೇ ಮಿಸ್ ಕಾಲ್ ಕೊಟ್ಟಿದ್ದು
ಮತ್ತೊಮ್ಮೆ ಅದೇ ನಿರಮ್ಮಳ ನಗು
ಆದರು ಗೆದ್ದದ್ದು
ಬಿಡಿ

ನಾನೇ ತಾನೇ

ಬ್ರೈನ್ ವಾಶ್ ಅಂಕ ೫... ತನಿಖೆ


ಮತ್ತೆ ನನಗೆ ನಾನೇ ಸಮಾಧಾನ ಮಾಡಿಕೊಂಡೆ.  ಬೇರೆ ಯಾವುದೇ ವಿಷಯ ನೆನಪಿಲ್ಲದೇ..
ನಾನು ಅಲ್ಲಿಗೆ ಹೋಗಿದ್ದರೆ ಮತ್ತೆ ಇಲ್ಲಿಗೆ ಹೇಗೆ ಬಂದೆ.
ಆದರೆ ನನ್ನ ಮನಸ್ಸಿನ ಸಮಾಧಾನ ವೂ ಜಾಸ್ತಿ ಸಮಯ ಉಳಿಯಗೊಡಲಿಲ್ಲ..
ಬೆಳ್ಳಂಬೆಳಗ್ಗೆಯೇ ಪೋಲಿಸು.
ಸಾಮಾನ್ಯ ಪೋಲೀಸ್ ಅಧಿಕಾರಿಗಳಿಗೆ ಮಿಲಿಟರಿಯ ಆಫೀಸಿನೊಳಕ್ಕೆ ಅಪ್ಪಣೆ ಇಲ್ಲದೇ ಪ್ರವೇಶವಿರುವುದಿಲ್ಲ.
ಹಾಗೆಲ್ಲಾ ಅವರು ಕೆಲಸವಿಲ್ಲದೇ ಬರುವುದೂ ಇಲ್ಲ. 
ಇದೊಂದು ಅಲಿಖಿತ ಒಪ್ಪಂದ ಅಷ್ಟೆ.
ಆದರೆ ಈಗ ಬಂದಿರೋದು ಅಸ್ಸಿಸ್ಟಂಟ್ ಕಮಿಶನರ್. 
ಆದರೂ ಹಾಗೆಯೇ ಸೀದಾ ಒಳಗೆ ಬರಲಿಲ್ಲ. ಮೊದಲು ತಮ್ಮ ಕಾರ್ಡ್ ಕಳುಹಿಸಿದರು.
ಕರ್ನಲ್ ವಿಶ್ವನಾಥನ್ ಸ್ವತಹ: ಹೊರ ಬಂದರು.
ಏನು ಕೌಲ್ ಸಾಹೇಬರು ಈ ಕಡೆ ದಯಮಾಡಿಸಿದ್ದು.
ದಯಮಾಡಿಸ ಬೇಕಾದ ಪ್ರಮೇಯ ಸಂಧರ್ಭ ಒದಗಿತಲ್ಲ.
ಕಲ್ಲಪ್ಪ ಅಸ್ಪತ್ರೆಯವರ ಕಂಪ್ಲೈನ್ಟ್ ನಮ್ಮಲ್ಲಿ ರಿಜಿಸ್ಟ್ರಿ ಆಗಿದೆ..
ಏನಂತೆ ?
ನಿಮ್ಮ ಆಫೀಸಿನ ಒಂದು ಜೋಂಗಾ ದಿಂದ ಅವರ ಆಸ್ಪತ್ರೆಯ ಮೂರು ಜನ ಜಖಂ ಆಗಿದ್ದಾರಂತೆ.
ಇದು ಯಾವಾಗ ನಡೆಯಿತು.
ನಿನ್ನೆ ರಾತ್ರೆ ಎರಡರಿಂದ ಮೂರು ಗಂಟೆಯ ಅವಧಿಯಲ್ಲಿ.
ಆದರೆ ಕೌಲ್ ಸಾಹೇಬರೇ ಅದು ಹೇಗೆ ನಮ್ಮದೇ ಆಫೀಸಿನ ಗಾಡಿ ಎಂಬ ನಿರ್ಣಯಕ್ಕೆ ಬಂದಿರಿ..?
ಕರ್ನಲ್ ಈ ಪಾರ್ಟಿ ಸಾಮಾನ್ಯವಾದುದಲ್ಲ. ನಿಮ್ಮ ಸಬ್ ಏರಿಯ ಆಫೀಸಿನಿಂದ ಮಾಹಿತಿ ಕಲೆ ಹಾಕಿಕೊಂಡೇ ನಮ್ಮಲ್ಲಿಯ ವರೆಗೆ ಬಂದಿದೆ ಈ ಸಮಾಚಾರ.
ಇಂತಹ ಮಾಹಿತಿಯಿಂದ ಏನು ಸಿದ್ಧ ಮಾಡುತ್ತಾರವರು..? ಇದೇ ಆಸ್ಪತ್ರೆಯ ಸಿಬ್ಬಂದಿಯಿಂದಲೇ ತಾನೇ ನಮ್ಮ ಅತ್ಯಂತ ಉತ್ತಮ ಅಧಿಕಾರಿಯ ಪತ್ನಿ ಮತ್ತು ಮಗ ಇನ್ನೂ ಕೋಮಾದಲ್ಲಿದ್ದಾರೆ..?
ಸ್ವರ ಏರಿಸ ಬೇಡಿ ಕರ್ನಲ್, ಆ ಕೇಸು ಮುಗಿದು ಹೋಗಿದೆ. ಕೋರ್ಟ್ ಅವರನ್ನು ನಿರಪರಾಧಿ ಅಂತ ನಿರ್ಧರಿಸಿತ್ತಲ್ಲಾ, ಅದನ್ನು ಮರೀ ಬೇಡಿ ನೀವು..
ನಿಮಗೆಷ್ಟು ಕೊಟ್ಟರವರು?
ಕರ್ನಲ್ ಮಾತು ರೊಚ್ಚಿಗೆಬ್ಬಿಸಿತು ಏಸಿಪಿಯನ್ನ.
ನಿಮ್ಮ ಲಿಮಿಟ್ ನಿಂದ ಹೊರ ಬರುತ್ತಿದ್ದೀರಾ ಕರ್ನಲ್... ನಾನು ಬಂದಿರೋದು ಇಲ್ಲಿ ಮಧ್ಯವರ್ತಿಯಾಗಿ...
ಏಸೀಪಿ, ನಿಮ್ಮ ಸಹಾಯ ನಮಗೆ ಅಗತ್ಯವಿಲ್ಲ.. ನೀವು ನಿಮ್ಮ ಕೆಲಸ ನೋಡಿಕೊಳ್ಳಿ ನಮಗೆ ನಮ್ಮ ಕರ್ತವ್ಯದ ಅರಿವಿದೆ.....ಹೊರ ಬಾಗಿಲು ಈ ಕಡೆ ಇದೆ.
ಪಶ್ಚಾತ್ತಾಪ ಪಡ್ತೀರಾ ಕರ್ನಲ್, ಲೋಕಲ್ ಜನರನ್ನು ವಿರೋಧಿಗಳನ್ನಾಗಿ ಮಾಡಿಕೊಂಡರೆ ನಷ್ಟ ಯಾರಿಗೆ ಗೊತ್ತಾಗುತ್ತೆ..
ಏಸೀಪಿ ಕೌಲ್ ಹೊರ ಹೊರಟರು...
ಅದನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ ಏಸೀಪಿ, ನಿಮ್ಮಂತೋರು ಸರಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರೆ ... ಭಾರತದ ನಕ್ಷೆಯೇ ಬದಲಾಗುತ್ತಿತ್ತು. ಹಾಗಾಗಿಲ್ಲ ಇದು ನಮ್ಮವರ ದುರದೃಷ್ಟ.
*****
ಅಂದರೆ ನನಗೆ ಬಂದ ಕನಸ್ಸು ನಿಜವಾಗಿಯೂ ಘಟಿಸಿಯೇ ಬಿಟ್ಟಿತ್ತು.
ಎಲ್ಲಿಯವರೆಗೆ ಅಂದರೆ ಆ ಕಲ್ಲಪ್ಪ ಹಾಸ್ಪಿಟಲ್ ಇದಿರಿಗೇ ನಡೆದ ಅಪಘಾತದಲ್ಲಿ ಒಬ್ಬ ಚಾಲಕ ಮತ್ತು ಒಬ್ಬ ಮೆಕೆನಿಕ್ ಗಾಯಗೊಂಡಿದ್ದಾರಂತೆ.
ನಮ್ಮ ಜೋಂಗಾದ ಚಿತ್ರ ಕೂಡಾ ತೆಗೆದುಕೊಂಡು ಬಂದಿದ್ದರು ಆ ಏಸಿ ಪಿ, ಪುರಾವೆಗೆ ಅಂತ.
ಇದ್ದ ಒಂದೇ ಒಂದು ಜೋಂಗದ ಫೋಟೊ ತೆಗೆದುಕೊಂಡು ಹೋಗಲು ಕೂಡಾ ಪರ್ಮಿಶನ್ ಕೊಟ್ಟಿದ್ದರು ಕರ್ನಲ್ ವಿಶ್ವನಾಥ್.
ವಿಚಿತ್ರ ಎಂದರೆ ಅವರ ಫೋಟೊದಲ್ಲಿದ್ದ ಜೋಂಗಾ ನಮ್ಮಲ್ಲಿರೋ ಜೋಂಗದ ನಂಬರ್ ಅಲ್ಲ.
ಅದರ ನಂಬರ್ ಕೂಡಾ ಇನ್ನೊಮ್ಮೆ ಪರೀಕ್ಷಿಸಿ ಹೊರಟು ಹೋಗಿದ್ದರಂತೆ ಆ ಏಸಿಪಿ ಕೌಲ್.
ಆ ಆಸ್ಪತ್ರೆಯವರು ರಾಜಕೀಯವಾಗಿಯೂ ಬಲವಾದ ಕುಳವೇ ಆದುದ್ದರಿಂದ ಈ ಕೇಸು ದೊಡ್ಡದಾಗಬಹುದೆಂತಲೂ ಕೋರ್ಟ್ ಕಟ್ಟೆ ಹತ್ತಬಹುದೆಂತಲೂ ಎಚ್ಚರಿಸಿದ್ದರು.
ಆದರೆ ವಿಶ್ವನಾಥ್ ಅವರದ್ದು ಒಂದೇ ಉತ್ತರ. ಅದು ನಮ್ಮ ಗಾಡಿ ಅಲ್ಲವೇ ಅಲ್ಲ ಅಂತ.
ಅದೇನೇ ಇರಲಿ ರಾತ್ರೆ ಗಾಡಿ ಹೊರ ಹೋದುದಂತೂ ನಿಜ ಅಂತಾಯ್ತು.
ನನಗೆ ಒಂದು ಸಂಶಯ.
ಯಾಕೆಂದರೆ ಆ ರಾತ್ರಿ ನಾನು ನೋಡುವಾಗ ಎರಡು ಜೋಂಗ ಇದ್ದದ್ದು ನಿಜ ನಾನೇ ನೋಡಿದ್ದೇನೆ.
ಮತ್ತೆ ಇದು ಹ್ಯಾಗಾಯ್ತು..?
ಹಾಗಾದರೆ ನಾನು ಹೊರಗೆ ಹೋಗಿದ್ದು ನಿಜವಾ..?
ಮಧ್ಯಾಹ್ನ ಎರಡು ಗಂಟೆಯಿಂದ ನಾಲ್ಕರ ವರೆಗೆ ಸ್ವಲ್ಪ ಅಲ್ಲಿನ ವಾತಾವರಣವೇ ಮಂದವಾಗಿರುತ್ತದೆ.
ಅಧಿಕಾರಿಗಳು ತಮ್ಮ ತಮ್ಮ ಮನೆಗೆ ಹೋಗಿರುತ್ತಾರೆ. ಕಚೇರಿಯಲ್ಲಿ ಆ ಸಮಯ ಹೆಚ್ಚು ಕೆಲಸ ನಡೆಯುವದಿಲ್ಲ.
ಅದಕ್ಕೆಂದೇ ಕಚೇರಿಯ ವಾತಾವರಣವೂ ಬಿಕೋ ಎನ್ನುತ್ತಿರುತ್ತದೆ.
ಗೇಟ್ ನಲ್ಲೂ ಇಬ್ಬರೇ ಕುಳಿತಿದ್ದರು ಯಾವುದೋ ಹಳೆಯ ಜೋಕನ್ನು ಹಸಿರು ಮಾಡಿಕೊಳ್ಳುತ್ತಾ.....
ನನಗೇಕೋ ಇತ್ತೀಚೆಗೆ ಈ ಶಾಂತ ವಾತಾವರಣದ ಕಲ್ಪನೆಯೇ ಮುಂದಿನ ದೊಡ್ಡ ಅನಾಹುತಕ್ಕೆ ದಾರಿ ಎಂಬಂತೆ..
ಹೊರಗಡೆ ನೋಡುವಾಗದಾಗ ಅನ್ನಿಸಿದ್ದು...ಏನೋ ನಡೀತಾ ಇದೆ ಇಲ್ಲಿ ಅಂತ
ಯಾವುದೋ ಜೀಪ್ ಬಂದು ನಿಂತಿತು.. ಮಿಲಿಟರಿ ಜೀಪ್ ನ ಹಾಗೇ ಇದೆ..
ಅದರಿಂದ ಮಿಲಿಟರಿ ಧಿರುಸು ಹಾಕಿದ ಇಬ್ಬರು ಇಳಿದರು....
ಏನಾಯ್ತೆಂದು ಯೋಚಿಸುವುದರೊಳಗೆ.....
ಢಮಾರ್!!!
ನೋಡ ನೋಡುತ್ತಿದ್ದಂತೆ ದೊಡ್ಡ ಶಬ್ದದೊಂದಿಗೆ ನನ್ನ ಇದಿರಿನ ಇಟ್ಟಿಗೆಯ ಗೋಡೆಯೇ ನೆಲಸಮವಾಯ್ತು, ಜತೆಗೇ ಧೂಳೂ ಕಟ್ಟೋಣದ ಎರಡರಷ್ಟು ವ್ಯಾಪಿಸಿತು.
ಇಟ್ಟಿಗೆಯ ಗೋಡೆಯೊಡೆದ ಶಬ್ದ... ಆ ಧೂಳು ನನ್ನ ಕಣ್ಣುಗಳು ಅನಾಯಾಸವಾಗಿ ಮುಚ್ಚಿಕೊಂಡವು..
ಮುಖದ ಮೇಲೆ ನೀರು ಬಿತ್ತೇ.... ಅಥವಾ ಅದು ಸುಗಂಧ ದೃವ್ಯವೋ
ಗೊತ್ತಿಲ್ಲ...
ನಿಧಾನವಾಗಿ ಮಂಪರು ಆವರಿಸಿತು..
ಆ ಮಂಪರಿನಲ್ಲೂ ನನ್ನನ್ನೆತ್ತಿದ ಇಬ್ಬರಲ್ಲೊಬ್ಬ ಮತ್ತೊಬ್ಬನಿಗೆ
ಚಲೋ ಕಾಮ್ ಹೋಗಯಾ...
ಅಂದದ್ದು ಸ್ಪಷ್ಟವಾಗೇ ಕೇಳಿಸಿತು.


(ಮುಂದುವರಿಯುವುದು )

Monday, April 13, 2015

ಕಾರಿರುಳ ದಾರಿಯ ಮಿಂಚು



ಕತ್ತಲೆಯ ದಾರಿಯಲಿ
ಕಂಡ ಮಿಂಚು ನೀನು
ಮರಳ ನೆಲದಲಿ ಬಸಿದ
ಆ ಪ್ರೀತಿಯೊರತೆ

ಮನದ ಕೋಟೆಯ ಬಿತ್ತಿ
ಮತ್ತೆ ನೆನಪಲಿ ಮುತ್ತಿ
ಮಳೆಯ ಮುಂದಿನ ಹಸಿಯ
ಹುಲ್ಲ ನೆನಪು

ನಡೆದ ದಾರಿಯ ನೆನಸೆ
ಮತ್ತೆ ಬಸಿದಾ ವರತೆ
ನಿನ್ನ ನೆನಪಿನ ಸುತ್ತಿ
ತೆರೆದ ಕವಿತೆ

ಮೂಡಿ ನಲಿಯಿತು ನೆನಪು
ಮನದ ಬಾನಲಿ ನನ್ನ
ನವಿಲ ನೃತ್ಯದ ಮಿಹಿಯ
ಮೊದಲ ಮಳೆಯ

ಬದುಕಿನಿರುಳಲಿ ಮತ್ತೆ
ಮಿಂಚಬಾರದೇ ನೀನು
ಇರುಳ ದಾರಿಯಲಿ
ಅಂದು ಬೆಳಗಿದಂತೆ

ಆಸರೆಯ ಮನದಿನಿಯೆ
ಕಾತರದೆಕಾದಿಹಳು
ಮೊದಲ ಮಳೆಹನಿಗೆ
ಬುವಿ ಕಾಯುವಂತೆ

ನಿಯಮಿತ



೧ ಆದಿ

ಮೃಗಾಲಯದ ಒಂದು ದೊಡ್ಡ ಮರ
ಅದರ ಕೆಳಗೆ ಸುಂದರ ಸಂಸಾರ
ಕೋಳಿ ಮತ್ತು ಮರಿಗಳು ನಾಲ್ಕು
ಚಿಲಿಪಿಲಿಗುಟ್ಟುತ್ತಿವೆ ಹಸಿವೆಯಲಿ
ಬೋನಿನವ ಇವಕ್ಕೆ ಕಾಳು ಹಾಕೋದೇ ಮರೆತಂತಿದ್ದ
ತಾಯಿ ತಾನೂ ಹಸಿದಿದೆ
ಮಕ್ಕಳಿಗೆಲ್ಲಿ ಕೊಟ್ಟೀತು ಪಾಪ

೨ ಮಧ್ಯ

ಹಸಿವೆಯ ತೀವೃತೆಯಿಂದಕಂಗೆಟ್ಟ
ಮರಿಯೊಂದು ಬಿದ್ದೇ ಬಿಟ್ಟಿತು ನೆಲಕ್ಕೆ
ಅದನ್ನೇ ಕಾಳೆಂದುಕೊಂಡು ಕುಕ್ಕಿದವು ಉಳಿದವು
ಅದರ ರಕ್ತ ಮಾಂಸವನ್ನೇ ಮತ್ತೆ ಮತ್ತೆ!
ತಾಯಿ ಪಾಪ ಏನು ಮಾಡೀತು ಸ್ವಲ್ಪ ಹೊತ್ತಿನಲ್ಲೇ
ಅದೂ ಮಕ್ಕಳ ಜತೆಗೇ ಸೇರಿತು

೩ ಅಂತ್ಯ

ಅದೇ ಮರದ ಮೇಲೆ ಮಲಗಿದೆ ಆ ಹೆಬ್ಬಾವು
ಉದ್ದಕ್ಕೆ ನೆಲದವರೆಗಿದೆ ಸತ್ತಿಲ್ಲ,
ಅದು ಇರೋದೇ ಹಾಗೆ ನಿಧಾನ ನಿಶ್ಚಲ
ಎಲ್ಲವಕ್ಕೂ ಅಂತ್ಯ ಬರೆದ ಬ್ರಹ್ಮ
ಈ ಕಥೆಗೂ ಬರೆದಿದ್ದ
ಆ ನಿಶ್ಚಲ ಮಹೋರಗ
ನಿದ್ದೆಯಿಂದ ಎದ್ದಿತು ಪಾಪ ಅದಕ್ಕೂ
ಹಸಿವಾಗಿತ್ತುಆದರೆ ಈ ಸಾರಿ ಮಾತ್ರ
ಆತ ಮರೆತಂತಿರಲಿಲ್ಲ

೪ ನೇಪಥ್ಯ

ಆ ಬೊನಿನಾಚೆಯ ಜೀವನ
ಇದಕ್ಕಿಂತ ಸ್ವಲ್ಪ ದೊಡ್ಡ ಮಟ್ಟು
ಪ್ರತಿ ದಿನ ಪ್ರತಿ ಕ್ಷಣ ನಾನಾ ಕಾರಣದೆ
ಮಾನಸಿಕವಾಗಿ ದೈಹಿಕವಾಗಿ
ತಮ್ಮವರನ್ನೇ ಕೊಲ್ಲುವರು ಕೆಲವರು
ಎಲ್ಲವ ನುಂಗಿ ಇರಿಕೆ ಹಾಕಿ ನೊಣೆವರು
ನಿಯಮಿತವಾಗಿ ಹಲವರು