Saturday, March 7, 2015

ವ್ಯೂಹ

ಮಿಲಿಂಡ್ ನ ಹೊಸ ಕಥೆ





೧. ಸಂಶಯ



 "ಮಂಜೂ ನನ್ನ ಡೈರಿ ತೆಗೆದ್ಯಾ…….???"

"ಇಲ್ಲ ಸರ್, ನಾನ್ಯಾಕೆ ನಿಮ್ ಡೈರಿ ತೆಗೀಲಿ ಸಾರ್.."

"ಅಲ್ಲಪ್ಪಾ .. ಇಲ್ಲೇ ಮೇಜಿನ ಮೇಲೇ ಇಟ್ಟಿದ್ದೆ, ನೀನೇನಾದರೂ ನೋಡಿದ್ಯಾ ಅಂತ ಕೇಳಿದ್ದೆ ಅಷ್ಟೆ. ಅದು ಬೇಕೇ ಬೇಕು ಎಲ್ಲಾಡಿಟೈಲ್ಸ್ ಬೇರೆ ಅದರಲ್ಲೇ ಬರೆದಿಟ್ಟಿದ್ದೆ. ಇನ್ನು ಸೀನಿಯರ್ ಕಲ್ಲೂರಾಮ್ ಕರೆದ್ರೆ ಮುಗ್ದೇ ಹೋಯ್ತು ನನ್ನ ಕಥೆ. ಎಲ್ಲಾದರೂಸಿಕ್ಕಿದ್ರೆ ಹೇಳು ಆಯ್ತಾ."

ಕರೆಕರೆ ವಾಣಿ ಗುರ್ರ್ರೆಂತು. ಹೋಮ್ ಮಿನಿಸ್ಟರ್.ಅರ್ಥಾತ್ ನನ್ನ ಧರ್ಮ ಪತ್ನಿ…

"ಏನ್ರೀ..??"

"ಆಯ್ತು…. ಈ ಸಾರಿ ಮಗನ  ಜನ್ಮ ದಿನಕ್ಕೆ ಒಂದು ಒಳ್ಳೆಯ ಲ್ಯಾಪ್ ಟಾಪ್ ಕೊಡಿಸ ಬೇಕು ಅಷ್ಟೆ ತಾನೇ. ಸರಿ ಕೊಡಿಸೋಣಬಿಡು. ಸರಿ... ಮಧುಗೇ ಹೇಳ್ತೀನಿ ೧೪ ನೇ ತಾರೀಖು ತಾನೇ ಅಷ್ಟರೊಳಗೇ ತರಿಸೋಣ ಆಯ್ತಾ.  ಓಕೆ,  ನಾನುಅಫೀಸಲ್ಲಿದ್ದೇನೆ, ಬಾಸ್ ಕರೀತಾ ಇದ್ದಾರೆ, ಇಡಲಾ ".

ಹೇಳಿದ್ದೇ ನಿಜವಾಯ್ತು.

ಮಂಜು ಬಂದ  " ಏನಪ್ಪಾ, ಡೈರಿ ಸಿಕ್ಕಿತಾ..??"

"ಸರ್,  ಕಲ್ಲೂರಾಮ್  ಸಾರ್ ಕರೀತಾ ಇದ್ದಾರೆ, ಅರ್ಜೆಂಟ್ ಬರಬೇಕಂತೆ"

"ಏನಪ್ಪಾ ವಿಷಯ..?"

"ಗೊತ್ತಿಲ್ಲ ಸಾರ್, ಡೈರಿ ಅವರ ಹತ್ತಿರವೇ ಇದ್ದಿರಬಹುದು ಸಾರ್, ಕಳೆದ ಸಾರಿ ನೀವು ಮಾತನಾಡಲು ಹೋದವರು ಅಲ್ಲಿಯೇಬಿಟ್ಟು ಬಂದದ್ದು ನೆನಪಿದೆಯಾ..??"

ಹೋದೆ.

"ಏನ್ರೀ, ಮಿಲಿಂಡ್ ಒಬುಳ ರೆಡ್ಡಿಯ ಬಿಲ್ ಕಥೆ ಏನಾಯ್ತು..? ಒಂದು ತಿಂಗಳಾಯ್ತಲ್ರೀ ಅವರು ಬಿಲ್ಲ್ ಕಳುಹಿಸಿ, ಇನ್ನೂ ನೀವುಅದನ್ನ ಇಟ್ಟುಕೊಂಡು ಕುಳಿತಿದ್ದೀರಲ್ಲಾ.  ಅಲ್ಲಾ ಆತ ಏನಾದ್ರೂ ಕೋರ್ಟಿಗೆ ಹೋದರೆ ನಮ್ಮ ಕಂಪೆನಿ ಬಡ್ಡಿ ಸಮೇತ ಹಣಕೊಡಬೇಕಾಗುತ್ತದೆ ಗೊತ್ತಲ್ವಾ..? "

"ಅದೇ, ಸರ್!  ಅದರ ಡಿಟೈಲ್ಸ್ ಎಲ್ಲಾ ನನ್ನ ಡೈರಿಯಲ್ಲಿ ಬರೆದಿಟ್ಟಿದ್ದೆ… ಡೈರಿನೇ ಸಿಕ್ತಾ ಇಲ್ಲ."

"ಅಲ್ಲಾರೀ ಒಂದ್ ಡೈರಿ ನಿಮಗೆ ಇಟ್ಕೊಳ್ಳೊಕ್ ಆಗ್ತಾ ಇಲ್ಲ,  ನೀವೆಂತ ಮೆನೇಜರ್ ರೀ..??"

"ಯಾಕೆ ಸಾರ್!  ಡೈರಿ ಕಳೆದ್ ಹಾಕ್ಕೊಳ್ದೇ ಇರೋರು ಮಾತ್ರ ಮೆನೇಜರ್ರಾ ಸರ್.."

"ನನ್ನ ಹತ್ತಿರ ವಾದ ಮಾಡ್ಬೇಡಿ.  ಅಂದ ಹಾಗೇ ಆ ಕೆ ಕಂಪೆನಿಯ ಪಿ ಏ ಇದ್ದಾನಲ್ಲ ಏನು ಅವನ ಹೆಸರು..??"

"ಮಧು ಸರ್."

"ಅವನಿಗೆ ಹೇಳಿ,  ನಮ್ಮ ಡೈರೆಕ್ಟರ್ ಕರಿಯಪ್ಪನವರು ಅವರ ಎಮ್ ಡಿ ಯನ್ನು  ಇವತ್ತು ಐದು ಗಂಟೆಗೆ ಕರೆದಿದ್ದಾರೆ."

"ನಂಬರ್ ತಗೊಳ್ಳಿ ಸಾರ್, ನೀವೇ ಹೇಳಿ ಬಿಡಿ."

"ಸರಿ ಸರಿ, ಅಂದ ಹಾಗೆ ದೈನಂದಿನ ವರದಿ ಸರಿಯಾಗಿ ಬರ್ತಾ ಇದೆಯಲ್ಲಾ..?  ಎಲ್ಲಾ ನನಗೆ ಈಗಲೇ ಕಳುಹಿಸಿಕೊಡಿ ".

"ಅಂದ ಹಾಗೇ ನನ್ನ ಡೈರಿ ನೋಡಿದಿರಾ ಸಾರ್..?"

 "ಇಲ್ಲವಲ್ಲ.. "  ಕಲ್ಲೂರಾಮ್ ಎತ್ತಲೋ ನೋಡುತ್ತಿದ್ದ ಹಾಗೆ ಕಂಡಿತು.

ನನ್ನ ಚೇಂಬರಿಗೆ ಬಂದೆ. ಮಧುಗೆ ಫೋನ್ ಮಾಡಿದೆ.

"ಏಯ್ ಮಧೂ, ಏನಪ್ಪಾ ನಮ್ಮನ್ನೆಲ್ಲಾ ಮರೆತ ಹಾಗಿದೆ, ಇತ್ತೀಚೆಗೆ ಸಿಗಲೇ ಇಲ್ಲ. ನೆನಪಿದೆಯಲ್ಲಾ. ನಾಡಿದ್ದು ೧೪ ನೇತಾರೀಖು ನನ್ನ ಅನೂನ ಜನ್ಮ ದಿನ ಕಣೋ. ಈ ಸಾರಿ ಖಂಡಿತಾ ಲ್ಯಾಪ್ ಟಾಪ್ ಕೊಡ್ಸ್ತೀನಿ ಅಂದಿದ್ದೆ. ಅದಕ್ಕೇ ನೀನು ಎಚ್ ಪಿಕಂಪೆನಿಯ ಹೌದೂ ಒಂದು ಒಳ್ಳೆಯ ಲ್ಯಾಪ್ ಟೋಪ್… ಏನೂ…   ಸುಮಾರು ೬೫ ರಿಂದ ೭೦ ಸಾವಿರ ಆಗುತ್ತೆ ಅಂತೀಯ.ಆದರೆ ನಿನಗೇನು ಬಿಡು, ನೀನು ಕ್ರೆಡಿಟ್ ಕಾರ್ಡ್ ನಲ್ಲಿ ಅಲ್ಲವಾ ಪೇ ಮಾಡೋದು. ಅದೆಲ್ಲಾ ಆಮೇಲೆ ನೋಡಿಕೊಳ್ಳೋಣ,  ಸರಿಅಂತೀಯಾ ಒ ಕೆ ಆದರೆ ವಿಷಯ ತುಂಬಾ ಸೀಕ್ರೇಟ್ ಆಗಿರಲಿ ಬೇರೆ ಯಾರಿಗೂ ಗೊತ್ತಾಗುವುದು ಬೇಡ."

ಯಾರೋ ಕಿಟಿಕಿಯ ಬಳಿ ಸುಳಿದ ಹಾಗಾಯ್ತು. ದಿಗ್ಗನೆದ್ದೆ. ಯಾರಾದರೂ ಕೇಳಿಸಿಕೊಂಡರಾ ನನ್ನ ಮಾತು..? ಎದೆಯಲ್ಲಿ ಕಂಪನಶುರು ಆಯ್ತು. ಪಕ್ಕನೆ ಎದ್ದು ಬಾಗಿಲಿಗೆ ಬಂದೆ. ಹೌದೋ ಅಲ್ಲವೋ ಅನ್ನುವಷ್ಟು ನೋಡಿದ್ದೆ, ಅಷ್ಟರಲ್ಲಿ ಆಕೃತಿ ಮರೆಯಾಗಿತ್ತು.

ರುದ್ರ!!!…

ಕಲ್ಲೂರಾಮ್ ನ ಪಕ್ಕಾ ಚಮಚ ಆತ. ಆಫೀಸಲ್ಲಿ ಕುಳಿತುಕೊಂಡು ಎಲ್ಲರಿಗೂ ಕೇಳುವ ಹಾಗೆ ಮಧುವಿಗೆ ಲ್ಯಾಪ್ ಟಾಪ್ ತರಲುಹೇಳುವುದು ಬೇಡವಿತ್ತು. ರುದ್ರನೇ ಆಗಿದ್ದರೆ ಕಲ್ಲೂರಾಮ್ ಗೆ ವಿಷಯ ಇಷ್ಟರಲ್ಲೇ ರವಾನೆ ಆಗಿರತ್ತೆ. ಆಗಿರದೇ ಇರಲಿ ದೇವರೇಅಂದು ಕೊಂಡೆ. ಎಲ್ಲಾ ನಾವು ಎಣಿಸಿದ ಹಾಗೇ ಆದರೆ ಎಷ್ಟು ಚೆನ್ನ. ಹಾಗಾಗುತ್ತಾ…

ಯಾವನಿಗ್ಗೊತ್ತು..??


೨. ಭೇಟಿ  
೧೩.೦೪.೨೦೧೨



ಗೇಟ್ ನವನು ತಡೆದ  " ಸರ್ ರಿಜಿಸ್ಟರ್ ನಲ್ಲಿ ಬರೆದಿಟ್ಟು ಹೋಗಿರಿ ಸಾರ್"

"ಇಲ್ಲಪ್ಪಾ ನಾನು ಬೇಗನೇ ವಾಪಾಸ್ಸು ಬರುತ್ತೇನೆ," ನಾನೆಂದೆ

"ಇಲ್ಲ ಸರ್, ನೀವು ಹಾಗೆ ಮಾಡದೇ ಇದ್ದರೆ ಸೀನಿಯರ್ಸ್ ನಮ್ಮನ್ನು ಕೇಳುತ್ತಾರೆ ಸರ್"

ಕೇಳಲೇ ಬೇಕು, ಅವನ ಹತ್ತಿರ ವಾದಮಾಡುವ ಹಾಗಿಲ್ಲ,
ಸಮಯ ನೋಡಿದೆ ಆಗಲೇ ಮೂರೂ ಹತ್ತು.
ಈ ಗುರುತು ತೋರಿಸಿ ಬಾಗಿಲು ತೆಗೆಯುವ ವ್ಯವಸ್ಥೆಯ ದ್ವಾರದಲ್ಲಿ, ಬೇರೆ ಏನೂ ಮಾಡಲು ಸಾಧ್ಯವಿಲ್ಲ. ಬರೆದು ಸಹಿ ಹಾಕಿದೆ.ಗುಂಡಿ ಒತ್ತಿದ ಕೂಡಲೇ ಗಾಜಿನ ಬಾಗಿಲು ತೆರೆದುಕೊಂಡಿತು.
ಗಾಡಿಯಲ್ಲಿ ಕೂತಿಲ್ಲ,

ಆಗಲೇ ಕಲ್ಲೂರಾಮ್ ಕರೆ " ಮಿಲಿಂಡ್ ತೊಂದರೆ ಏನೂ ಇಲ್ಲವಲ್ಲ, ನೀವಲ್ಲಿಯೇ ಇದ್ದೀರಲ್ಲ?"

"ಹೌದು ಸಾರ್". ಉತ್ತರಿಸಿದೆ.

ಕಾಂಕ್ರೀಟ್ ಸಿದ್ಧ ಪಡಿಸಿ ಕಳುಹಿಸುವ ಪ್ಲಾಂಟ್ ನಲ್ಲಿ ತೊಂದರೆ ಯಾದುದರಿಂದ ಕಾಂಕ್ರೀಟ್ ೨-೩ ಗಂಟೆಗಳ ಕಾಲ ನಡೆಯುತ್ತಿಲ್ಲ.
ಆಫೀಸಿನಲ್ಲಿ ಕುಳಿತಿರುವ ಅವರಿಗೆ ಹೇಳಿ ಏನು ಪ್ರಯೋಜನ.
ಅದಕ್ಕೇ ಸ್ವಕಾರ್ಯಕ್ಕಾಗಿ ಹೊರಟಿದ್ದೆ.
ಬರೇ  ಹತ್ತು ನಿಮಿಷ ಅಷ್ಟೇ.
ನಾನು ಕೆ ಕಂಪೆನಿಯ ದ್ವಾರದಲ್ಲಿದ್ದೆ.

ವಿಸಿಟರ್ಸ್ ಬುಕ್ ನಲ್ಲಿ ಸಹಿ ಹಾಕಿ ವಿಸಿಟರ್ಸ್ ಪಾಸು ಪಡೆದು ಒಳ ಬಂದೆ.

"ನಮಸ್ತೇ "

"ಬನ್ನಿ ಮಿಲಿಂಡ್, ನೀವು ಆಫೀಸಿನಲ್ಲಿ ಹೀಗೆ ಸಿಗುವುದು ನನಗೆ ಸರಿ ಕಾಣಲಿಲ್ಲ"

’"ನನಗೆ ಗೊತ್ತು .....ಆದರೂ..... "
"ಆದರೂ ಜಾಗ್ರತೆಯಲ್ಲಿರಿ. ಎಂದೆ .... ಮತ್ತೆ ಏನು ವಿಶೇಷ..?"

"ನನ್ನ ಮೈಲ್ ಬಂತಾ ..?"

"ಹೌದು ಬಂದೂ ಆಯ್ತು, ನಮ್ಮ ಸ್ಟಾಫ್ ಅದರಲ್ಲಿ ಆಗಲೇ ಒನ್ ದ ಜಾಬ್."

"ಅದು ಎಲ್ಲಾ ರೆಡಿ ಮಾಡಿ ಇಟ್ಟು ಇಲ್ಲಿಗೆ ಬಂದೆ....‌ಅಂದ ಹಾಗೆ ನನ್ನ ಗಿಫ್ಟ್..?"

"ಅದೂ ರೆಡಿ ಇದೆ ಮಿಲಿಂಡ್, ಮಧುಗೆ ಹೇಳಿಯಾಗಿದೆ..ಪ್ರಾಯಶಃ...
ಇರಿ ಒಂದೇ ನಿಮಿಷ..............ಮಧು .."

"ಯೆಸ್ ಸರ್ ,"

"ನಾನು ಕೇಳಿದ್ದ ಗಿಫ್ಟ್ ರೆಡಿ ಇದೆ ತಾನೇ"

"ಎಸ್ ಸರ್, ನೀವು ಹೇಳಿದ ಕೂಡಲೇ ತರಿಸಿದ್ದೆ ಸರ್."

"ಸರಿ ಸಂಜೆ ನಾನು ಹೇಳಿದಲ್ಲಿಗೆ ತಲುಪಿಸಿ ಬಿಡಿ"

"ಥ್ಯಾಂಕ್ಸ್ , ಅಂದ ಹಾಗೇ ಈ ಸಾರಿ ನೀವು ಮಾಡ ಬೇಕಾಗಿರೋದು ಇಷ್ಟೇ...............................................................

."ಓಹ್ ಆಗಲೇ ೫ ಗಂಟೆ , ನಾನಿನ್ನು ಬರುತ್ತೇನೆ ಸರ್ ಇಲ್ಲವಾದರೆ ಉಳಿದವರಿಗೆ ಸಂಶಯ ಬರಬಹುದು.

ಸರಿ ಇನ್ನೊಂದು ಕಾಫಿ..?

ಬೈ ಆಲ್ ಮೀನ್ಸ್ ಸರ್ಅಂದ ಹಾಗೇ ಪ್ರೊಜೆಕ್ಟ್ ಎಫ್ ಕಥೆ ಏನು
"ಅದರ ವಿಷಯವೇನೂ ಗೊತ್ತಾಗಲಿಲ್ಲ,"

"ಓಕೆ ಬಾಯ್ ದೆನ್".
ವಾಪಾಸ್ಸು ಬಂದೆ
ಗೇಟಿನವನನ್ನು ಕೇಳಿದೆ
."ನನಗಾಗಿ ಯಾರದ್ದಾದರೂ ಫೋನ್ ಬಂದಿತ್ತಾ.."
"ಇಲ್ಲ ಸರ್..."
ಯಾರಾದರು ಬಂದಿದ್ದಾರ ಅಂತ ಕೇಳಲಿಲ್ಲ,
ಕೇಳಿದ್ದರೆ ಗೊತ್ತಾಗುತ್ತಿತ್ತು.

ನನ್ನ ಎಲ್ಲಾ ಚಟುವಟಿಕೆಗಳನ್ನು ಯಾರೋ ಗುಪ್ತವಾಗಿ ಅವಲೋಕಿಸುತ್ತಿದ್ದಾರೆ ಅಂತ.





೩. ಸಾಕ್ಷಾಧಾರ
  
೧೬.೦೪.೨೦೧೨


"ಬನ್ನಿ ಮಿ ಕಲ್ಲೂರಾಮ್"    ಮಿ ಕಾರಿಯಪ್ಪ ಕರೆದರು


"ಅದೇ ಸರ್, ಪ್ರೂಫ್ ಬೇಕು ಅಂದಿದ್ದೀರಲ್ಲ ಸರ್??"


"ಯಾವ ಪ್ರೂಫ್..?"


"ಅದೇ ಸಾರ್ ನಮ್ಮ ಮಿಲಿಂಡ್.."


"ನಿಜ ನಿಜ...  ಈಗ ಏನು ಮಾಡ್ತಿದ್ದಾನೆ ನಮ್ಮ ಮೆನೇಜರ್ ಮಿಲಿಂಡ್..?"


"ಸಾರ್ ಕಳೆದ ವಾರ ೧೩ನೇ ತಾರೀಖು ಈತ ನಮ್ಮ "ವಯನಾರ್ ಪ್ರೋಜೆಕ್ಟ್" ಸೈಟಿನಲ್ಲಿ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದರೂ ವೈಯ್ಯಕ್ತಿಕವಾಗಿ ಯಾರಿಗೂ ಹೇಳದೇ ಕೆ ಕಂಪೆನಿಗೆ ಹೋಗಿದ್ದಾನೆ ಸಾರ್."


"ಅಲ್ಲಿಗೆ ಹೋಗಿದ್ದ ಎಂದು ನಿಮಗೆ ಹೇಗೆ ಗೊತ್ತಾಯ್ತು..?"


"ಸರ್ ನೋಡಿ... ಇದು ವಯನಾರ್ ಕಂಪೆನಿಯ ವಿಸಿಟರ್ಸ್ ರಿಜಿಸ್ಟರ್, ಇದರಲ್ಲಿ ಮಿಲಿಂಡ್ ೩.೧೫ ಕ್ಕೆ ಔಟ್ ಆಗಿದ್ದಾರೆ ಮತ್ತು ನಂತರ ಒಳ ಬಂದಿರೋದು ೫.೩೦ ಗೆ ಸಾರ್."


"ಅಲ್ಲರಿ ..........ಅವನು ಕೆ ಕಂಪೆನಿಗೇ.. ಹೋದ... ಬಗ್ಗೆ....."


"ಇಲ್ಲಿದೆ ನೋಡಿ ಸರ್ , ಇದು ಕೆ ಕಂಪೆನಿಯ ರಿಜಿಸ್ಟರ್ ನ ಯಥಾ ನಕಲು ಸರ್. ಇದರಲ್ಲಿ ಮಿಲಿಂಡ್ ೩.೩೦ ಗೆ ಇನ್ ಆಗಿ ೫.೧೫ ಕ್ಕೆ ಔಟ್ ಆಗಿದ್ದು ಧಾಖಲಾಗಿದೆ. ಇದರ ಜತೆಯಲ್ಲೇ ಅವನ ಯಾವುದೋ ರಿಪೋರ್ಟ್ ನ ಹಸ್ತ ಪ್ರತಿ ಲಗತ್ತಿಸಿದ್ದೇನೆ ಸರ್. ಅವನ ಕೈ ಬರಹವನ್ನು ಇದರಲ್ಲಿ ನೀವು ಪರಿಶೀಲಿಸಬಹುದು ಸರ್."


"ಮತ್ತೆ ಏನಾದರೂ..?"


"ನಮ್ಮ ಎರಡನೇ ಪ್ರೊಜೆಕ್ಟ್ ಬಿಡ್ಡಿಂಗ್ ಕೊನೇ ದಿನ ೧೪ ನೇ ತಾರೀಖು ಸರ್, ೧೩ ನೇ ತಾರೀಖು ಮಧ್ಯಾಹ್ನ ಒಂದೂವರೆಗೆ ಆತ ಕೆ ಕಂಪೆನಿಗೆ ಈ ಮೈಲ್ ಕಳುಹಿಸಿದ್ದ ಸರ್. ಇದರಲ್ಲೊಂದು ಕಾನ್ಫಿಡೆನ್ಷಿಯಲ್ ಫೈಲ್ ಕೂಡಾ ಆತ ಅವರಿಗೆ ಕಳುಹಿಸಿಕೊಟ್ಟಿದ್ದಾನೆ. ಮತ್ತೆ ಸಾರ್ ಕೆ ಕಂಪೆನಿಯ ಎಮ್ ಡಿಯ ಪಿ ಎ ಮಧು ಮಿಲಿಂಡ್ ಮಗನಿಗೆ ಕೊಟ್ಟ ಗಿಫ್ಟ್ ನ ಬಿಲ್ ಸಹಾ ಇದರ ಜತೆ ಇಟ್ಟಿದ್ದೇನೆ ಸರ್. ಅದಕ್ಕೆ ಮಧು ತನ್ನ ಕ್ರೆಡಿಟ್ ಕಾರ್ಡ್ ನಿಂದ ಪೇ ಮಾಡಿದ್ದಾನೆ ಸರ್ ಜತೆಯಲ್ಲಿ ಅದರ ರಶೀದಿ ಕೂಡ ಇಟ್ಟಿದ್ದೇನೆ. . ಅಲ್ಲದೇ ೧೪ ನೇ ತಾರಿಖು ಮಿಲಿಂಡ್ ನ ಮಗನ ಬರ್ತ್ ಡೇ ಕೂಡಾ ಸರ್".


"ಇಲ್ಲಿಯವರೆಗೆ ಬಂತಾ..??  ಇದೆಲ್ಲ  ನೋಡುವಾಗ ಓಬುಳ ರೆಡ್ಡಿ ಹೇಳಿದ್ದು ಸರಿ ಎನ್ನಿಸುತ್ತಿದೆ ನನಗೆ""ಏನಂದ ಸರ್ ಆತ..??"


"ಅವನ ಬಿಲ್ಲ್ ರೆಕಮೆಂಡ್ ಮಾಡಲು ಮಿಲಿಂಡ್ ಅವನ ಹತ್ತಿರ ಲಂಚ ಕೇಳಿದ್ದನಂತೆ."


"ಓಹ್!! ಹೌದು ಸಾರ್ ನೀವು ಹೇಳಿದ ಹಾಗೆಯೇ ಇದ್ದರೂ ಇರಬಹುದು."


"ಮಿ ಕಲ್ಲೂರಾಮ್ ತುಂಬಾ ವಿಷಯ ಶೇಖರಿಸಿರುವಿರಿ. ಮಿಲಿಂಡ್ ಬಗ್ಗೆ... ಥ್ಯಾಂಕ್ಸ್.ಅಂದ ಹಾಗೆ ಅವನಿಗೆ ಏನಾದರೂ ವೈಯ್ಯಕ್ತಿಕ ಸಮಸ್ಯೆಗಳಿವೆಯೇ... ಕೇಳಿದ್ದೀರಾ..?"


"ಅದೆಂತ ಇಲ್ಲ ಸರ್!!  ನಮ್ಮ ಕಾಂಟ್ರೆಕ್ಟ್ ಸೆಕ್ಷನ್ ನಲ್ಲೂ ಸಮಸ್ಯೆ ಮೂಡಿಸುತ್ತಿದ್ದಾನೆ ಸರ್ ಇತ್ತೀಚೆಗೆ."


"ಯಾಕೆ ಏನಾಯ್ತು..?"


"ಹಿಂದಿನ ಎಲ್ಲಾ ಟೆಂಡರ್ ಗಳ ಕರಸ್ಪಾಂಡೆನ್ಸ್ ನೋಡುತ್ತಿದ್ದಾನೆ ಸರ್."


"ಯಾಕಂತೆ..??"        "ನಮ್ಮಲ್ಲಿಯೇ ಯಾರೋ ಮಾಹಿತಿ ಲೀಕ್ ಮಾಡುತ್ತಿದ್ದರೆಂದು ಸಂದೇಹ ಬಂದಿದೆ ಅಂತ ಕಾಣುತ್ತೆ ಸರ್.""ನಮ್ಮಲ್ಲಿ ಯಾರು ಅಂತವರಿದ್ದಾರೆ..?"


"ಗೊತ್ತಿಲ್ಲ  ಸರ್, ಆದರೆ ಅಂತದ್ದೇನೂ ನಡೆಯುತ್ತಿಲ್ಲ ಅಂತ ನನ್ನ ಅಭಿಪ್ರಾಯ."


"ಸರಿ ...ಇವಿಷ್ಟು ಬೇಕಾದಷ್ಟಾಯ್ತು,.. ಇನ್ನುಳಿದದ್ದು. ನಾನು ನೋಡಿಕೊಳ್ಳುತ್ತೇನೆ. ಎಮ್ ಡಿ ಗೆ ಹೇಳಿ ಅವನನ್ನು ಕೆಲಸದಿಂದ ತೆಗೆಸಿಯೇ ಬಿಡೋಣ."


"ಸರಿ ಸಾರ್ ನಾನಿನ್ನು ಬರ್ತೇನೆ."


೪   ಮೋಸ

೧೭.೦೪.೨೦೧೨


ಪದ್ಮನಾಭಯ್ಯ ಎಮ್ ಡಿ
ಅದು ಆ ಗ್ಲಾಸ್ ಡೋರ್ ನ ಹೊರಗಡೆ ತೋರುತ್ತಿದ್ದ ಫಲಕ.
೯.೫೮ ಎ ಎಮ್.
ಅವರು ಆ ಅಫೀಸಿಗೆ ಬರುವ ಸಮಯವದು.ಸುಮಾರು ದಿನಗಳಿಂದ ಅವರಿಗೆ ಒಂದು ಸಮಸ್ಯೆ ಬ್ರಹದಾಕಾರವಾಗಿ ಕಾಡುತ್ತಿತ್ತು.ಯಾರೋ ಮೋಸ ಮಾಡುತ್ತಿದ್ದಾರೆ ಕಂಪೆನಿಗೆ ಅನ್ನಿಸುತ್ತಿತ್ತು,. ಆದ್ರೆ ಯಾರು ಅಂತ ಗೊತ್ತಾಗುತ್ತಿಲ್ಲ. ಟೆಂಡರ್ ಫೈನಲಿಸ್ ಮಾಡುವ ಸಮಯದಲ್ಲೇ ಎಲ್ಲೋ ಮೋಸ ನಡೆದಿದೆ ಅಂತ ಅನುಮಾನ ಬರತೊಡಗಿತ್ತು. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಅದು ಜಾಸ್ತಿಯಾಗತೊಡಗಿತ್ತು. ಕಳೆದ ತಿಂಗಳೇ ಇಬ್ಬರನ್ನು ಕಂಪೆನಿಯಿಂದ ತೆಗೆದು ಹಾಕಲಾಗಿತ್ತು. ಆದರೆ ವಿಷಯ ಅದಲ್ಲ. ಇವರಿಗೆ ಅನುಮಾನ ಬಂದದ್ದು ಅನಿವಾರ್ಯವಾಗಿ ತನ್ನ ಒಳ್ಳೆಯ ಸ್ಟಾಫ್ ಗಳನ್ನು ತಾನು ತೆಗೆದು ಹಾಕಿದ್ದೇನೋ ಅನ್ನಿಸಿತ್ತು. ಒಬ್ಬ ಅವರ ನಂಬಿಗಸ್ಥ ಅಂದುಕೊಂಡಿದ್ದ ಅವರ ಚಾಲಕ. ಇನ್ನೊಬ್ಬ ಕಾಂಟ್ರೇಕ್ಟ್ ಸೆಕ್ಷನ್ನಿನ ಕ್ಲರ್ಕ್. ಇವರಿಬ್ಬರನ್ನೂ ಪದ್ಮನಾಭಯ್ಯನೇ ಕೆಲಸಕ್ಕೆ ತೆಗೆದು ಕೊಂಡಿದ್ದರು. ಅದೇಕೋ ತಾನು ಒಮ್ಮೆಲೇ ಮುದುಕನಾದೆನಾ ಅನ್ನಿಸುವಂತೆ ಮಾಡಿತ್ತು ಆ ಘಟನೆ.
ಎಲ್ಲಿ ತಪ್ಪಾಯ್ತು ಅಂತ ಗೊತ್ತಾಗುವುದರೊಳಗೆ ಕೆಲಸವೇ ಆರಂಭವಾಗಿತ್ತು.
ಅರ್ಧ ಮುಗಿಯುವಾಗ ಎಲ್ಲಿಯೋ ತಪ್ಪು ನಡೆದಿದೆ ಅನ್ನಿಸಲು ಆರಂಭವಾಯ್ತು.
ಕೆಲಸದಲ್ಲಿನ ಲಾಭ ನಷ್ಟಗಳ ಚಿಂತೆ ಅವರಿಗಿಲ್ಲ. ಆದರೆ ತನ್ನಿಂದಾಗಿ ಇನ್ನೊಬ್ಬರಿಗೆ ಅನ್ಯಾಯವಾಗಬಾರದಲ್ಲ.ಪಕ್ಕದಲ್ಲಿನ ಕಾನ್ಫರೆನ್ಸ್ ಹಾಲ್ ಇವತ್ತಿನ ಒಂದು ವಿಶೇಷ ಚರ್ಚೆಗಾಗಿ ಕಾದಿರಿಸಲಾಗಿದೆ.
ಎ ಎನ್ ಕಂಪೆನಿ ಯ ನಾಲ್ಕು ಡೈರೆಕ್ಟರುಗಳೂ ಬರುತ್ತಿರುವುದು ಇವತ್ತಿನ ವಿಷೇಷ. ನಾಲ್ಕು ಡೈರೆಕ್ಟರುಗಳು, ಕಲ್ಲೂರಾಮ್, ಸಹಾ ಕುಳಿತಾಗಿದೆ.
 ಒಂದೇ ಸೀಟು ಖಾಲಿಯಿದೆ. ಅದು ಎಮ್ ಡಿಯದ್ದು.ಇದಿರಿನ ಗೋಡೆ ಗಡಿಯಾರ ಢಣ್ ಢಣ್  ಬಡಿಯಲು ಆರಂಭ ಮಾಡುತ್ತಿದ್ದಂತೆ ಗ್ಲಾಸ್ ಡೋರ್ ಓಪನ್ ಆಯ್ತು.
ಒಳ ಬರುತ್ತಲೇ "ನೋ ಫಾರ್ಮಾಲಿಟಿಸ್, "  ಎಂದರಾತ.
ಕಾನ್ಫರೆನ್ಸ್ ಶುರುವಾಯ್ತು. ಕಾರಿಯಪ್ಪನವರೆಂದರು.
"ಇವತ್ತಿನ ಕಾನ್ಫರೆನ್ಸ್ ನಮ್ಮ ಸೇರಿದ ಎರಡು ತಿಂಗಳಲ್ಲಿಯೇ ಅತ್ತ್ಯುತ್ತಮ ಮೆನೇಜರ್ ಅಂತ ಶಾಭಾಶ್ ಗಿರಿ ಪಡೆದವರೊಬ್ಬರ ಬಗ್ಗೆ ಒಂದು ಕಾನ್ಫಿಡೆನ್ಷಿಯಲ್ ರಿಪೋರ್ಟ್ ಬಂದಿದ್ದರಿಂದ ಕರೆಯಲಾಗಿದೆ."
ಕಲ್ಲೂರಾಮ್ ಮಾತಾಡಲಿಲ್ಲ.
ಮೊದಲು ಡೈರೆಕ್ಟರ್ ಹೇಳತೊಡಗಿದರು, ಒಬ್ಬೊಬ್ಬರಾಗಿ.

"ಸರ್ ಈತ ನಮ್ಮ ಕಂಪೆನಿಗೆ ಸೇರಿದ ಎರಡೇ ತಿಂಗಳಲ್ಲಿ ತನ್ನ ಕಾರ್ಯ ದಕ್ಷತೆಗೆ ಹೆಸರುವಾಸಿಯಾದ. ನಮ್ಮ ಕಂಪೆನಿಯ ನಿಯಮಗಳಂತೆ ಕ್ವಾಲಿಟಿ, ಬಿಲ್ಲಿಂಗ್ ಮತ್ತು ಮೆನೆಜ್ ಮೆಂಟ್ ಮೂರೂ ವಿಂಗ್ ಗಳ ಕೆಲಸಗಳಲ್ಲಿ ಎಲ್ಲಾ ಪ್ರೊಭೆಶನರಿ ವರದಿಗಳಲ್ಲಿಯೂ ಔಟ್ ಸ್ಟಾಂಡಿಂಗ್ ಫಲಿತಾಂಶ ತಂದಿದ್ದಾನೆ."

"ಆತನ ಈ ಮೂರು ವರ್ಷಗಳ ಅವಧಿಯ ನಾಲ್ಕೈದು ಪ್ರೊಜೆಕ್ಟ್ ಗಳಲ್ಲಿಯೂ ನಮಗೆ ಒಳ್ಳೆಯ ಲಾಭ ತಂದು ಕೊಟ್ಟಿದ್ದಾನೆ."
"ಆದರೆ ಆತ ಇತ್ತೀಚೆಗೆ ಬದಲಾಗಿದ್ದ ಹಾಗೆ ಕಂಡು ಬಂದು ನಮ್ಮ ಹಿಂದಿನ ಆ ಆಭಿಮಾನವನ್ನು ಕುಂಠಿತಗೊಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆಕಳೆದ ಆರು ತಿಂಗಳಿನಿಂದ ಅವನ ಚಟುವಟಿಕೆಗಳೇ ಸ್ವಲ್ಪ ಸಂದೇಹಾಸ್ಪದವಾಗಿಸಿದೆ.
ಇಲ್ಲಿಯವರೆಗೆ ಎಲ್ಲರ ಮಾತು ಕೇಳುತ್ತಿದ್ದ ಪದ್ಮನಾಭಯ್ಯನವ ರೆಂದರು
 "ಇಷ್ಟೆಲ್ಲ ನಮಗೆ ಲಾಭ ತಂದುಕೊಟ್ಟಿರುವ ಆತನ ಮೇಲೆ ಸಂದೇಹ ಬರಲು ಕಾರಣ..?."

 ಅವರ ಆಲೋಚನೆಯ ದಿಸೆಯೇ ಅಂತಹದ್ದು,
ಯಾರನ್ನೂ ಯಾವುದನ್ನೂ ತಮ್ಮ ಅನುಭವದ ನೇರಕ್ಕೆ ಸಿಗದೇ ನಂಬುವರಲ್ಲ.
"ಕಾರಣ ಹಣ ಸರ್ ದುಡ್ಡು," ಮೊದಲು ಮಾತನಾಡಿದ ಡೈರೆಕ್ಟರ್ ಕಾರಿಯಪ್ಪ ಹೇಳಿದರು.
 "ಇಡೀ ಪ್ರಪಂಚವೇ ಅದರ ಮೇಲೆ ನಿಂತಿದೆ.
 ಈತನಿಗೂ ಅದರ ಸವಿರುಚಿಯ ಅನುಭವವಾಯ್ತು ಅನ್ನಿಸುತ್ತೆ.
"ಸುಮ್ಮನೇ ಎಲ್ಲರ ಮೇಲೆ ರೇಗುವುದು, ಕಾರಣವಿಲ್ಲದೇ ಎಲ್ಲರನ್ನೂ ಸಂಶಯಿಸುವುದು. ಅವನ ಹುಟ್ಟು ಗುಣಗಳು.
 ನಮ್ಮ ಓಬುಳರೆಡ್ಡಿ ಪ್ರೊಜೆಕ್ಟ್ನಲ್ಲಿ ಸಹಾ ಅವರ ಬಿಲ್ಲ್ ನಿಲ್ಲಿಸಿ ಬಿಟ್ಟಿದ್ದಾನೆ,
ಈಗ ಬರುತ್ತಿರುವುದು ಅವರ ಆರನೆಯ ಬಿಲ್ಲು,
ಹಿಂದಿನ ರಿಪೋರ್ಟ್ ಸರಿಯಿಲ್ಲ ಅಂತ ಈಗಿನದ್ದು ನಿಲ್ಲಿಸಿದ್ದಾನೆ,
ಅವರು ಈಗ ಕೆಲಸ ನಿಲ್ಲಿಸುವ ಧಮ್ಕಿ ಹಾಕಿದ್ದಾರೆ.
ಕೆಲಸ ನಿಲ್ಲಿಸಿದರೆ ಮೊದಲೇ ತಡವಾಗಿರುವ ಈ ಪ್ರೊಜೆಕ್ಟ್ ಕ್ಲುಪ್ತ ಸಮಯದಲ್ಲಿ ಮುಗಿಸಲು ಸಾಧ್ಯವೇ ಇಲ್ಲ.
ಬಿಲ್ಲು ಆತ ನಮಗೆ ಕೊಟ್ಟು ಆಗಲೇ ತಿಂಗಳಾಗಿದೆ.
ಕ್ಷುಲ್ಲಕ ಕಾರಣ ಕೊಟ್ಟು ಬಿಲ್ ನ ಪೇಮೆಂಟ್ ನಿಲ್ಲಿಸಿದ್ದಾನೆ.
ಕಾಂಟ್ರೇಕ್ಟರ್ ಕಂಪ್ಲೈಂಟ್ ಕೊಟ್ಟಿದ್ದಾನೆ ಸರ್. ಅಲ್ಲದೇ ಓಬುಳ ರೆಡ್ಡಿ ನಮ್ಮೊಂದಿಗೆ ಸುಮಾರು ೮-೧೦ ವರ್ಷಗಳಿಂದ ಇದ್ದಾರೆ ಸರ್.
ಅವರೀಗ ಹಣ ಸಂದಾಯವಾಗುವುದು ತಡವಾಗುತ್ತಿರುವುದಕ್ಕಾಗಿ ಬಡ್ಡಿ ಕೇಳುತ್ತಿದ್ದಾರೆ ಸರ್."
"ಅವರ ಕಾಂಟ್ರಾಕ್ಟ್ ಪ್ರಕಾರ ಎಷ್ಟು ದಿನಕ್ಕೆ ಬಿಲ್ಲು ಪಾವತಿ ಮಾಡಬೇಕು..?" ಪದ್ಮನಾಭಯ್ಯ.

"ಏಳೇ ದಿನಕ್ಕೆ ಸರ್." ಕಾರಿಯಪ್ಪ.
ಈಗ ಎರಡನೆಯ ಡೈರೆಕ್ಟರ್ :"ಸರ್ ನನ್ನ ಅಭಿಪ್ರಾಯ ಎಂದರೆ ಈಗಿಂದೀಗ ಓಬುಳರೆಡ್ಡಿಯ ಬಿಲ್ ನ ೭೫ ಪ್ರತಿಶತ ಹಣ ಅವನಿಗೆ ಸಾಂಕ್ಷನ್ ಮಾಡಿಸೋಣ, ಉಳಿದದ್ದು ನಂತರ ಕೊಟ್ಟರಾಯ್ತು.
"ಎಲ್ಲರ ಮುಖ ನೋಡಿದರು ಪದ್ಮನಾಭಯ್ಯ,
 "ಎಲ್ಲರದ್ದೂ ಅದೇ ಅಭಿಪ್ರಾಯವಾದರೆ ಸರಿ ಹಾಗೇ ಮಾಡಿ, ಬಟ್ ಐ ವಾನ್ಟ್ ಪ್ರೂಫ್ ಫಾರ್ ಎವ್ವರಿ ಥಿಂಗ್ !!"
ಕುಳಿತಲ್ಲಿಂದ ಎದ್ದು ನಿಂತರು ಅವರು.

ಅಲ್ಲಿಗೆ ಮುಗಿಯಿತು ಇವತ್ತಿನ ಕಾನ್ಫರೆನ್ಸ್.
ಮತ್ತು
ಮಿಲಿಂಡ್ ನ....ನಿಜವಾಗಿ..?


೫. ಆರಂಭ
೧೯.೦೪.೨೦೧೨


"ಹಾಯ್ ಸ್ವೀಟಿ ತುಂಬಾನೇ ಚೆಂದ ಕಾಣ್ತಾ ಇದ್ದೀ ಇವತ್ತು..??"
"ಹೌದಾ ಸರ್ ಥ್ಯಾಂಕ್ಸ್.
""ಒಳಗೇನು ನಡೀತಾ ಇದೆ.
. ಸುನೀ? ದೊಡ್ದ ಬಾಸ್ ಕೂಡಾ ಇರೋ ಹಾಗಿದೆ..??"
"ಹೌದು ಸರ್ , ನಿಮ್ಮ ಬಗ್ಗೇನೇ ಮಾತು ಕಥೆಯಾಗ್ತಾ ಇದೆ.."
"ಏನು ಮತ್ತೊಂದು ಪ್ರಮೋಷನ್ನಾ..??"
"ಇಲ್ಲ ಸಾರ್ ನಿಮ್ಮನ್ನು ಕೆಲಸದಿಂದ ತೆಗೆಯುವ ಬಗ್ಗೆ ಚರ್ಚೆಯಾಗ್ತಾ ಇದೆ."
"ಹೌ ಪಿಟಿ ನಿಜವಾಗಿಯೂ..??"
"ದೇವರಾಣೆ ನಿಜ"
"ಅರೆರೇ ಆ ದೇವರನ್ನು ಮಧ್ಯೆ ಯಾಕೆ ತರುತ್ತೀಯಾ..??"
"ಸರಿ ಅಂದ ಹಾಗೆ ಕಲ್ಲೂರಾಮ್"
"ಎಂದಿನಂತೆ ನ್ಯೂಟ್ರಲ್ ಸರ್"
"ಮತ್ತೆ ಕಾರಿಯಪ್ಪಾ..??"
"ಅವರೇ ಮುಖ್ಯ ಇವತ್ತು , ಒಳಗಿನ ವರ್ತಮಾನದಂತೆ ಅವರ ಬಳಿ ಜಬ್ಬರದಸ್ತ್ ಸಾಕ್ಷಿಗಳಿಯೆಯಂತೆ ನಿಮ್ಮ ವಿರುದ್ದ. ಏನ್ಮಾಡ್ತೀರಿ ಸರ್..??
ನಿಜವಾಗ್ಲೂ ಐ ಪಿಟೀ ಆನ್ ಯು."
" ಸುನೀ... ಅಂದ ಹಾಗೆ  ರೆಕ್ಸ್ ನಲ್ಲಿ ಹೊಸ ಸಿನೇಮಾ ಯಾವುದು ಬಂದಿದೆ..?"
"ತಮಾಷೆ ಅಲ್ಲ ಸರ್,"
"ನೆವರ್ ಮೈಂಡ್ ಈ ಕೆಲ್ಸ್ ಅಲ್ಲದಿದ್ದರೆ ಇನ್ನೊಂದು, ಕೆಲಸ ಮಾಡೊ ತಾಕತ್ ಇರೋರಿಗೆ ಎಲ್ಲಾ ಕಡೆ ಕೆಲಸವೇ, .....ಚಮ್ಚಾಗಳಿಗಲ್ಲ."
"ನಮ್ಮ ಆಫೀಸ್ ಸ್ಟಾಫೆಲ್ಲಾ ಬೇಸರದಲ್ಲಿದ್ದಾರೆ ಸರ್, ನಿಮಗೆ ಬೇಸರವಿಲ್ಲವಾ..??ನಿಮ್ಮ ಹಾಗಿನ ಮೆನೇಜರ್ ಎಲ್ಲಿಂದ ತರ್ತಾರೆ ಸರ್..??"
"ಥ್ಯಾಂಕ್ಸ್ ಸುನೀ ಫಾರ್ ದ ಕನ್ಸರ್ನ್, ಅಂಡ್ ರೆಸ್ಪೆಕ್ಟ್.
ಅಂದ ಹಾಗೆ ದೊಡ್ಡ ಬಾಸ್ ಏನಂತಾರೆ..??"
"ನಾಟ್ ರಿವೀಲ್ಡ್ ಯೆಟ್."
"ಅಂದ ಹಾಗೆ ಈ ನಾಟಕದಲ್ಲಿ ನನ್ನ ಪ್ರವೇಶ ಯಾವಾಗ..??"
"ಆದಷ್ಟು ಬೇಗ ಸರ್.. ಇಲ್ಲೇ ಇರಿ ಅಂತ ಆರ್ಡರ್ ಬಂದಿದೆ."
"ಸರಿ ಓ ಕೆ ಹಾಗಾದ್ರೆ ಒಂದು ಗರಮಾ ಗರಮ್ ಕಾಫಿ ಸಿಪ್ ಮಾಡಿ ಬರ್ತೀನಿ."


೬. ಕಣ

"ಮಿಲಿಂಡ್ ಅವರೇ ಬನ್ನಿ, ನೋ ನೋ , ಆ ಸೀಟಲ್ಲ, ಈ ಕಡೆ ಬನ್ನಿ ಇದಿರಿಗೆ ಕಾಣುತ್ತಿದೆಯಲ್ಲಾ ಆ ಸೀಟಲ್ಲಿ ಕುಳಿತುಕೊಳ್ಳಿ."ಕಾರಿಯಪ್ಪನವರು ತೋರಿಸಿದ ಕಡೆ ಕುಳಿತುಕೊಳ್ಳುತ್ತಾ ನುಡಿದೆ "ಓ ಕೆ ಸಾರ್."

"ಕಳೆದ ಎರಡು ತಿಂಗಳಿನಿಂದ ನಿಮ್ಮನ್ನು ನಾವು ಕೂಲಂಕುಶವಾಗಿ ಗಮನಿಸ್ತಾ ಇದ್ದೇವೆ." ಕಾರಿಯಪ್ಪ ತಮ್ಮ ಮಾತು ಆರಂಬಿಸಿದರು, ಆ ಕಾರ್ಯಕ್ರಮವನ್ನೂ.

"ನಿಮ್ಮ ಚಟುವಟಿಕೆಗಳು ಕಂಪೆನಿಯ ಅಧಿಕೃತ ನಿಯಮಾವಳಿಗೆ ವಿರುದ್ಧವಾಗಿ ನಡೆಯುತ್ತಿದೆ ಅನ್ನುವ ಅನುಮಾನ ನಮಗೆಲ್ಲಾ ಬರತೊಡಗಿದೆ. ನಮ್ಮ ಅನುಭವದಂತೆ ಹಿಂದೆ ಎಂದೂ ನೀವು ಈ ರೀತಿಯಾಗಿ ನಡೆದ ವರದಿಗಳಿಲ್ಲ.ನಮ್ಮ ಕಂಪೆನಿಯ ನಿಯಮಾವಳಿಗಳನ್ನು ನೀವು ಸರಿಯಾಗಿ ಓದಿದ್ದೀರಲ್ಲಾ?? ನಿಮ್ಮ ಒಪ್ಪಿಗೆ ಸಹಿ ನಮ್ಮ ಆಫೀಸಿನ ಕಡತಗಳಲ್ಲಿದೆ. ನಿಮಗೆ ಬೇಕಿದ್ದಲ್ಲಿ ಈಗಲೇ ತರಿಸಿ ಕೊಡುವೆ."

"ಓದಿದ್ದೇನೆ , ಈಗ ತರಿಸೋದು ಬೇಡ ಸಾರ್" ಮಿಲಿಂಡ್

"ಇವತ್ತು ಇಲ್ಲಿ ನಮ್ಮೆಲ್ಲಾ ಬೋರ್ಡ್ ಆಫ್ ಡೈರೆಕ್ಟರುಗಳೂ, ನಿಮ್ಮ ನೇರ ಹಿರಿಯರು ಹಾಗೂ ಮಾನ್ಯ ಎಂ ಡಿ ಜಸ್ಟೀಸ್ ಪದ್ಮನಾಭಯ್ಯನವ್ರೂ ನಿಮ್ಮ ದೇ ಆಫೀಸಿನ ಕಿರಿಯರೂ ನೆರೆದಿದ್ದೇವೆ. ನಿಮಗೆ ಉತ್ತರಿಸಲು ಸಾಕಷ್ಟು ಸಮಯ ಈಗಾಗಲೇ ಕೊಟ್ಟಾಗಿದೆ. ನಮ್ಮ ಕಂಪೆನಿಯ ನಿಯಮಾವಳಿ ಪ್ರಕಾರ ನಿಮಗೂ ಸಮಾನ ಅವಕಾಶ ಕೊಡಲಾಗುತ್ತಿದೆ , ನಿಮ್ಮಅನಿಸಿಕೆಗಳನ್ನು ಪಾರದರ್ಶಕವಾಗಿಡಲು ಶ್ರಮಿಸುವ ಸಲುವಾಗಿ ಈ ಎಲ್ಲಾ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ. ಆದರೆ ನಿಮ್ಮ ಉತ್ತರ ಸಮರ್ಪಕವಾಗಿರದಿದ್ದಲ್ಲಿ ಹಾಗೂ ಇಲ್ಲಿ ನೆರೆದಿರುವ ನಮ್ಮ ಬೋರ್ಡ್ ಆಫ್ ಡೈರೆಕ್ಟರುಗಳಿಗೆ ಸರಿ ಎನಿಸದ ಪಕ್ಷದಲ್ಲಿ ಕಂಪೆನಿಯ ನಿಯಮಾವಳಿಗನುಸಾರವಾಗಿ ನಿಮ್ಮನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯಲಾಗುವುದು."

ಈಗ ಪಧ್ಮನಾಭಯ್ಯ ನುಡಿದರು " ಕಾರಿಯಪ್ಪನವರೇ ನಿಮ್ಮ ಭಾಷೆ ಮತ್ತು ದನಿಯ ಓಘ ಸ್ವಲ್ಪ ನಮ್ರವಾಗಿರಲಿ." ಅವರು ನಿವ್ರತ್ತ ನ್ಯಾಯಾಧೀಶರೇ, ಯಾರೇ ಆಗಿರಲಿ ತಪ್ಪು ಮಾಡಿರೋದು ರುಜುವಾತಾದ ಮೇಲೆಯೇ ಮುಂದಿನ ಮಾತು."ಇಲ್ಲ ಸರ್ ಅವರು ಸರಿಯಾಗಿಯೇ ಹೇಳುತ್ತಿದ್ದಾರೆ, ನನಗೇನೂ ಅಭ್ಯಂತರವಿಲ್ಲ". ನಾನೆಂದೆ " ತಪ್ಪು ಯಾರದ್ದೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು"

ಕಾರಿಯಪ್ಪ ತಮ್ಮ ಮಾತು ಮುಂದುವರಿಸಿದರು "ನಿಮ್ಮ ಮೇಲಿನ ಆಪಾದನೆಗಳು ಹೀಗಿವೆ ,ಜತೆಯಲ್ಲಿಯೇ ಅವಕ್ಕೆಲ್ಲಾ ಸಾಕ್ಷಾಧಾರಗಳನ್ನೂ ಅನುಕೃಮಣಿಕೆಯಾಗಿ ಲಗತ್ತಿಸಲಾಗಿದೆ

೧. ನಿಮ್ಮ ಸೀನಿಯರ್ಸ್ಗಳಿಗೆ ನೀವು ಸರಿಯಾದ ಗೌರವ ಕೊಡ್ತಾ ಇಲ್ಲ, ಅವರ ಮಾತೆಂದರೆ ನಿಮಗೆ ಅಸಡ್ಡೆ. ಅಲ್ಲದೇ ಇತ್ತೀಚೆಗೆ ಸುಳ್ಳು ಬೇರೆ ಹೇಳುತ್ತಿದ್ದೀರಂತೆ. ( ಅನುಕೃಮಣಿಕೆ ೧)

೨. ಸೈಟಿನಲ್ಲಿ ಇರಬೇಕಾದ ನೀವು ಕೆಲಸದ ಸಮಯದಲ್ಲೂ ಯಾರಿಗೂ ಇನ್ಫಾರ್ಮ್ ಮಾಡದೇ ನಿಮ್ಮಷ್ಟಕ್ಕೆ ನೀವು ಗೈರು ಹಾಜರಾಗುತ್ತಿದ್ದೀರಿ. ( ಅನುಕೃಮಣಿಕೆ ೨)

೩. ನಮ್ಮ ವೆಂಡರ್ ಜತೆ ಅಗತ್ಯಕ್ಕಿಂತ ಹೆಚ್ಚಾದ ಸಂಭಂಧ ಇಟ್ಟುಕೊಳ್ಳುವುದು ನಮ್ಮ ಕಂಪೆನಿ ನಿಯಮಾವಳಿ ನಂಬ್ರ ೮ ಅನುಚ್ಛೇದ ೪ ರಂತೆ ಅಕ್ಷಮ್ಯ ಅಪರಾಧ. ( ಅನುಕೃಮಣಿಕೆ ೩)

೪. ತಾ ೧೩.೦೪.೨೦೧೨ ರಂದು ೨.೩೦ ಯಿಂದ ೫.೩೦ ಯ ವರೆಗೆ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದರೂ, ಕೆಲಸ ನಡೆಯುತ್ತಿದ್ದ ಜಾಗದಿಂದ ಗೈರು ಹಾಜರಾಗಿದ್ದೀರಿ. ನೀವು ಹೊರ ಹೋಗಿದ್ದು ಈ ವಯನಾರ್ ಕಂಪೆನಿ ವಿಸಿಟರ್ಸ್ ಪುಸ್ತಕದ ಪುಟ ೭೮ ರಲ್ಲಿ ಧಾಖಲಾಗಿದೆ . (ಅದರ ನೊಣಂಪ್ರತಿ ಅನುಕೃಮಣಿಕೆ ೪ ಲಗತ್ತಿಸಲಾಗಿದೆ)

೫. ಅದೇ ದಿನ ಒಂದೂವರೆಗಂಟೆಗೆ ನೀವು ನಮ್ಮ ಹೊಸ ಪ್ರೊಜೆಕ್ಟ್ ೧೧೨೩ ಯ ಟೆಂಡರ್ ಡಿಟೈಲ್ಸ್ ನ್ನು ನಮ್ಮ ಕಾಂಪಿಟೀಟರ್ ಕೆ ಕಂಪೆನಿಗೆ ನಿಮ್ಮ ಇ ಅಂಚೆಯಲ್ಲಿ ಕಳುಹಿಸಿದ್ದೀರಾ, ಮತ್ತು ಅದೇ ಕೂಡಲೇ ಅದನ್ನು ಡಿಲೀಟ್ ಸಹ ಮಾಡಿದ್ದೀರಾ, ಆದರೆ ನಮ್ಮ ಆಫೀಸ್ ಮಾಸ್ಟರ್ ರೆಕಾರ್ಡ್ ನಲ್ಲಿ ಧಾಖಲಾಗಿತ್ತು. ( ಅನುಕೃಮಣಿಕೆ ೫ ಇದರ ನಕಲು.)

೬. ನೆನಪಿಡಬೇಕಾದ ವಿಷಯವೆಂದರೆ ತಾ ೧೪.೦೪.೨೦೧೨ ಸಂಜೆಯ ೫ ಗಂಟೆ ಮೇಲಿನ ಟೆಂಡರ್ ತುಂಬಬೇಕಾಗಿದ್ದ ಕೊನೆಯ ತಾರೀಖು. ಈ ಹಿನ್ನೆಲೆಯಲ್ಲಿ ನಿಮ್ಮ ತಾ ೧೩.೦೪.೨೦೧೨ ರ ನಮ್ಮ ಕಾಂಪಿಟೀಟರ್ ಕೆ ಕಂಪೆನಿಯ ಭೇಟಿ ವಿಶೇಷ ಮಹತ್ವ ನೀಡುತ್ತದೆ. ( ಅನುಕೃಮಣಿಕೆ ೬ )

೭. ನಮ್ಮ ಕಾಂಪಿಟೀಟರ್ ಕೆ ಕಂಪೆನಿಯ ಎಮ್ ಡಿ ಯ ಪಿ ಏ, ಮಧು ೧೪.೪.೨೦೧೨ ರಂದು ನಿಮ್ಮ ಮನೆಯಲ್ಲಿ ನಡೆದ ನಿಮ್ಮ ಮಗನ ಜನ್ಮದಿನದ ಸಮಾರಂಭದಲ್ಲಿ ಒಂದು ಹೊಚ್ಚ ಹೊಸ ಲ್ಯಾಪ್ ಟಾಪ್ ಗಿಫ್ಟ್ ಕೊಟ್ಟಿದ್ದಾನೆ. ಅದರ ಬಿಲ್ಲ್ ನಂಬರ್ ಎಚ್ ಪಿ ೧೦೦೫೭೫೮ ದಿನಾಂಕ ೧೪.೦೪.೨೦೧೨ ಪ್ರತಿ ಜತೆಯಲ್ಲಿ ಲಗತ್ತಿಸಲಾಗಿದೆ.(ಅನುಕೃಮಣಿಕೆ ೭)

೮. ಮತ್ತು ಮಿ ಮಧುವಿನ ಕ್ರೆಡಿಟ್ ಕಾರ್ಡ್ ನಿಂದ ಆ ಹಣ ಪಾವತಿಯಾದಂತೆ ಕಾರ್ಡನ ರಶೀದಿ ಲಗತ್ತಿಸಲಾಗಿದೆ (ಅನುಕೃಮಣಿಕೆ ೮)

೯. ನಮ್ಮ ಕಂಪೆನಿಯ ಜತೆ ಸೌಹಾರ್ದವಾ‌ಗಿ ೮-೧೦ ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿದ್ದ ಮೆಸರ್ಸ್ ಓಬುಳರೆಡ್ದಿ ಬಿಲ್ ನ್ನು ಕ್ಷುಲ್ಲಕ ಕಾರಣಕ್ಕಾಗಿ ತಡೆ ಹಿಡಿದು, ಅವರಿಗೆ ನಷ್ಟ ಉಂಟು ಮಾಡಿದ್ದೀರಾ, ಅಲ್ಲದೇ ಅವರೀಗ ಕೋರ್ಟ್ ಗೆ ಹೋದರೆ ನಮ್ಮ ಕಂಪೆನಿ ಅವರಿಗೆ ಹೆಚ್ಚುವರಿಯಾಗಿ ಬಡ್ಡಿ ಹಣ ಕೊಡಬೇಕಾದ ಅನಿವಾರ್ಯತೆ ಕೂಡಾ ಬರಬಹುದು.

ಮೇಲಿನ ಎಲ್ಲಾ ವಿಷಯಗಳನ್ನು ನಿಮಗೆ ೭೨ ಗಂಟೆಗಳ ನೋಟಿಸ್ ಕೊಟ್ಟು ಉತ್ತರಿಸುವಂತೆ ಕೋರಿಕೊಳ್ಳಲಾದ ಪತ್ರಕ್ಕೆ ನೀವು ಯಾವುದೇ ಉತ್ತರವನ್ನೂ ನೀಡಿರಲಿಲ್ಲ. ೭೨ ಗಂಟೆಗಳ ನಂತರವೂ ನಿಮ್ಮಿಂದ ಯಾವುದೇ ಪ್ರತಿಕ್ರೀಯೆ ಬರದೇ ಇದ್ದುದ್ದರಿಂದ ಈ ಅಧಿವೇಶನ ಕರೆಯಲಾಗಿದೆ. ಇದು ನಿಮಗೆ ಕಂಪೆನಿ ಕೊಡುತ್ತಿರುವ ಕೊನೆಯ ಅವಕಾಶ. ಪಾರದರ್ಶಕತೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮೊದಲೇ ತಿಳಿಸಿದಂತೆ ವಿಡಿಯೋರೆಕಾರ್ಡಿಂಗ್ ಮಾಡಲಾಗುತ್ತಿದೆ. ನಿಮ್ಮಿಂದ ಯಾವುದೇ ಸಮರ್ಪಕವಾದ ಉತ್ತರ ಬಾರದಿದ್ದಲ್ಲಿ ಅಥವಾ ನೀವು ಈ ಮೇಲಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡದಿದ್ದಲ್ಲಿ ಈ ಹಿಂದೆಯೇ ತಿಳಿಸಿದಂತೆ ನಿರ್ದಾಕ್ಷಿಣ್ಯವಾಗಿ ಯಾವುದೇ ರೀತಿಯ ಸೌಲಭ್ಯ ಕೊಡದೇ ನಿಮ್ಮನ್ನು ಕಂಪೆನಿಯಿಂದ ಹೊರಗಟ್ಟಲಾಗುವುದು.

ಕೊನೆಯ ಅವಕಾಶ ಮಿಲಿಂಡ್ ಅವರೇ ನಿಮಗೆ ಹಾಗೆ ನಮ್ಮ ಕಂಪೆನಿಯ ನಿಯಮಾವಳಿಗಳಲ್ಲಿ ಯಾವುದೇ ಸಡಿಲಿಕೆ ಇಲ್ಲದಿದ್ದರೂ ನಿಮ್ಮ ಹಿಂದಿನ ವರ್ಷಗಳ ಪ್ರಾಮಾಣಿಕ ಕೆಲಸದ ವರದಿಯ ಮೇಲಿನಿಂದ ನಮ್ಮ ಯಾರದ್ದಾದರೂ ಸಹಾಯ ಅಪೇಕ್ಷಿಸುವುದಾದರೆ ಅದನ್ನು ಪೂರೈಸುವ ಭರವಸೆಯನ್ನು ನಾವು ಕೊಡುತ್ತೇವೆ."

ಎಂದಿನಂತೆ ತಮ್ಮ ಮಾತುಗಳನ್ನು ನಾಟಕೀಯ ರಾಗದಲ್ಲಿ ಮುಗಿಸುತ್ತಾ ಎಲ್ಲರೆಡೆ ಕೈ ತೋರಿಸಿದರು "ಈಗ ನಿಮ್ಮ ಸರದಿ"

ನನಗೆ ಗೊತ್ತಿತ್ತು. ಇದಿರಲ್ಲಿರುವ ಇಪ್ಪತ್ತು ಜೋಡಿ ಕಣ್ಣುಗಳು ನನ್ನ ಉತ್ತರಕ್ಕಾಗಿ ಕಾತರದಿಂದ ಕಾಯುತ್ತಿವೆ. ನನ್ನ ಉತ್ತರ ಅಥವಾ ಪ್ರತಿಕ್ರೀಯೆಯಲ್ಲಿಯೇ ನನ್ನ ಇರವು ಅಡಗಿದೆ. ಗಂಟಲು ಸರಿಪಡಿಸಿಕೊಂಡೆ.

"ಧನ್ಯವಾದಗಳು, ಮಾನ್ಯ ಎಮ್ ಡಿ ಜಸ್ಟಿಸ್ ಪದ್ಮನಾಭಯ್ಯನವರೇ, ಹಾಗೂ ನೆರೆದ ಡೈರೆಕ್ಟರುಗಳೆ, ಕನ್ಯಾಲ್ ಸುನಿ, ಕಲ್ಲೂರಾಮ್ ಹಾಗೂ ಕಿರಿಯರೇ, ಕಾರಿಯಪ್ಪನವರೇ ನೀವು ನನ್ನ ಮೇಲಿಟ್ಟಿರುವ ಕಕ್ಕುಲಾತಿಗೆ ನನ್ನ ಹೃತ್ಪೂರ್ವಕ ನಮನ. ನನಗೇನಾದರೂ ಸಹಾಯ ಬೇಕಿದ್ದಲ್ಲಿ ನಾನು ಕೋರಿಕೊಳ್ಳುತ್ತೇನೆ, ನೀವೇ ನನಗೆ ಸಹಾಯ ಮಾಡಬೇಕು." ನಾನೆಂದೆ

"ನೋಡಿ ಮಿಲಿಂಡ್ ಆದರೆ ನನ್ನಿಂದ ಏನೂ ಕಾನೂನಿನ ಅಥವಾ ನಿಯಮಾವಳಿಗಳ ಹೊರಗಿನ ಸಹಾಯಕ್ಕೆ ಕರೆಯ ಬೇಡಿರಿ. ನನ್ನ ಸಹಾಯ ಈ ಬಂಧದ ಒಳಗೇ ಇರಬೇಕು. ಇಂತಹಾ ವಿಷಯಗಳಲ್ಲಿ ನಾನು ತುಂಬಾ ಸ್ಟ್ರಿಕ್ಟು ಯು ನೋ." ತನ್ನದೇ ಶೈಲಿಯಲ್ಲಿ ಹೇಳುತ್ತ ಎಲ್ಲರತ್ತ ನೋಡಿದರು ಕಾರಿಯಪ್ಪ.

"ಸರಿಸರ್"


೭. ಬಾಣ


ಮೊದಲ ಪ್ರಶ್ನೆಗೆ ನನ್ನ ಉತ್ತರ:


"ನನ್ನ ಕಂಪೆನಿ ಕೊಟ್ಟ ಡೈರಿ ೧೦ ನೇ ತಾರೀಖೇ ಕಳೆದು ಹೋಗಿತ್ತು. ನಮ್ಮ ಆಫೀಸಿನ ಮಂಜುವಿನಿಂದ ನೀವು ಈ ವಿಷಯವನ್ನು ಕನ್ಫರ್ಮ್ ಮಾಡಿಕೊಳ್ಳಬಹುದು.ಮತ್ತೆ ಇದು ಸಿಕ್ಕಿದ್ದು ೧೪ ನೇ ತಾರೀಖು, ಅದೂ ಮಿ ಕಲ್ಲೂರಾಮ್ -ನನ್ನ ಸೀನಿಯರ್ ನ ಮೇಜಿನ ಡ್ರಾವರ್ ನಲ್ಲಿ. ಅಂದರೆ ನೀವೇ ಊಹಿಸಿಕೊಳ್ಳಿ ನನ್ನ ಡೈರಿ ಅಲ್ಲಿಗೆ ಹೇಗೆ ಬಂತು??.ಅದನ್ನು  ಅವರು ೧೦ ನೇ ತಾರೀಖೇ ಯಾಕೆ ನನಗೆ ಕೊಟ್ಟಿರಲಿಲ್ಲ?. ಕಾರಣ ಸ್ಪಷ್ಟ. ನನ್ನನ್ನು ಸಿಕ್ಕಿಸಿ ಹಾಕಲು. ಅದರಲ್ಲಿನ ಕೈ ಬರಹ ನನ್ನದಲ್ಲ. ಯಾವುದೇ ಕೈ ಬರಹ ತಜ್ಞರಲ್ಲಿ ಈ ವಿಷಯವನ್ನು ಪರೀಕ್ಷಿಸಿಕೊಳ್ಳಬಹುದು.ಅದರಲ್ಲಿನ ಅ,ಎ,ಇ,ಒ,ಉ ಅಕ್ಷರಗಳನ್ನು ನೀವು ಪರಿಶೀಲಿಸಿದರೆ ನನ್ನ ಅಕ್ಷರಗಳಲ್ಲಿನ ವ್ಯತ್ಯಾಸ ನಿಮಗೆ ಬರಿಗಣ್ಣಿನಿಂದಲೇ ಗೊತ್ತಾಗುತ್ತದೆ . ನನ್ನ ಅಕ್ಷರಗಳು ಬಲಗಡೆಗೆ ಮಾಲಿಕೊಂಡಿರುತ್ತವೆ."ಕಲ್ಲೂರಾಮ್ ಏನೋ ಹೇಳಲು ಹೊರಟರು ಎಮ್ ಡಿ ಅವರನ್ನು ಸುಮ್ಮನಿರಿಸಿದರು ಕಣ್ಣಲ್ಲೇ. ಅದನ್ನು ನಾನು ನೋಡಿದೆ, ಆದರೆ ಯಾಕೆ ಅಂತ ಅರ್ಥವಾಗಲಿಲ್ಲ.


ಎರಡನೇ ಪ್ರಶ್ನೆಗೆ ನನ್ನ ಉತ್ತರ


"ನೀವು ಕೊಟ್ಟಿರುವ ವಿಸಿಟರ್ಸ್ ಪುಸ್ತಕದಲ್ಲಿನ ಅಕ್ಷರಗಳನ್ನು ಗಮನಿಸಿದರೆ ಕೂಡಾ ನಿಮಗೆ ಸರಿಯಾಗಿ ಅರ್ಥವಾಗುತ್ತದೆ, ಇದನ್ನೂ ನನ್ನ ವಿರುದ್ಧ ಬೇಕೆಂತಲೇ ತಯಾರು ಮಾಡಲಾಗಿದೆ. ಇದು ನನ್ನ ಕೈ ಬರಹ ಅಲ್ಲವೇ ಅಲ್ಲ. ಅಲ್ಲದೇ ನಾನು ಆ ಸಮಯದಲ್ಲಿ ಸೈಟಿನಲ್ಲೇ ಇದ್ದೆ. ಆ ದಿನ ಎರಡೂವರೆಯಿಂದ ಏಳೂವರೆಯ ಅವಧಿಯಲ್ಲಿ ಬಂದ ೮ ಕಾಂಕ್ರೀಟ್ ಗಾಡಿಗಳ ಎಲ್ಲಾ ಬಿಲ್ಲುಗಳನ್ನೂ ನೀವು ಪ್ರತ್ಯಕ್ಷ ತರಿಸಿ ನೋಡ ಬಹುದು. ಪ್ರತಿಯೊಂದರಲ್ಲೂ ನನ್ನ ಸಹಿ ಮತ್ತು ಸಹಿ ಮಾಡಿದ ಸಮಯವನ್ನೂ ನಮೂದಿಸಿದ್ದನ್ನು ನೀವೇ ನೋಡ ಬಹುದು. ದೈನಂದಿನ ವರದಿಯಲ್ಲಿಯೂ ಗಾಡಿಗಳ ಇನ್ ಟೈಮ್ ಮತ್ತು ಔಟ್ ಟೈಮ್ ಸಿಗುವುದು. ಮಿ ಕನ್ಯಾಲ್ ೧೪, ೧೫ ತಾರೀಖಿನ ನನ್ನ ದೈನಂದಿನ ವರದಿಯನ್ನು ತೋರಿಸ ಬಹುದೇ..??""ಶ್ಯೂರ್...ಸರ್..!!" ಕನ್ಯಾಲ್.ಇದಿರಿನ ಪರದೆಯಲ್ಲಿ ದೊಡ್ದದಾಗಿ ದೈನಂದಿನ ವರದಿಯನ್ನು ತೋರಿಸಲಾಯ್ತು. ಅದರಲ್ಲಿ ಎರಡೂವರೆಯಿಂದ ಅರ್ದರ್ದ ಗಂಟೆಯ ಅವಧಿಯಲ್ಲಿ ಬಂದ ಎಲ್ಲಾ ಕಾಂಕ್ರೀಟ್ ಗಾಡಿಗಳ ಸಂಪೂರ್ಣ ಡಿಟೈಲ್ ಕೊಡಲಾಗಿತ್ತು ಎಲ್ಲದರಲ್ಲಿಯೂ ನನ್ನ ಸಹಿ ಇದ್ದವು ಹಾಕಿದ ಸಮಯ ಕೂಡಾ .


ಇನ್ನು ಮೂರನೆಯ ಮತ್ತು ನಾಲ್ಕನೆಯ ಪ್ರಶ್ನೆಗಳಿಗೆ ಉತ್ತರ "ನಾನು ಆದಿನ ಕೆಲಸ ನಡೆಯುತ್ತಿದ್ದ ಜಾಗದಲ್ಲೇ ಇದ್ದುದರಿಂದ ಬೇರೆ ಜಾಗದಲ್ಲಿದ್ದ ವೆಂಡರ್ ನ ನೋಡುವ ಪ್ರಮೇಯವೇ ಬರುವುದಿಲ್ಲ. ಆದುದರಿಂದ ಕಂಪೆನಿಯ ನಿಯಮಾವಳಿ ಯ ವಿಷಯವೇ ಇಲ್ಲಿ ಅಪ್ರಸ್ತುತ."


ಐದನೆಯ ಪ್ರಶ್ನೆಗೆ ಉತ್ತರಕ್ಕಾಗಿ  "ನಾನು ಅಧಿಕ್ರತ ಅಡ್ಮಿನಿಶ್ಟಟ್ರೇಟರ್ ಆದ ಸುನಿಯನ್ನು ಒಂದು ಪ್ರಶ್ನೆ ಕೇಳ ಬಹುದೆ..??

ಸ್ವಲ್ಪ ಕುತೂಹಲ ಭರಿತ ದನಿಯಲ್ಲಿ  ಎಮ್ ಡಿ ಯೇ ಅಂದರು
"ಸರಿ ಕೇಳಿ"
"ಸುನಿ ನನ್ನ ಈ ಅಂಚೆಯನ್ನು ನನ್ನ ಬದಲು ಬೇರೆ ಯಾರಾದರೂ ಕಳುಹಿಸುವ ಸಾಧ್ಯತೆ ಇದೆಯೇ..?"
"ಇಲ್ಲ....ಇಲ್ಲ"
"ಯಾಕೆ..??"
"ಯಾಕೆಂದರೆ ನೀವು ಹೊಸ ಅಂಚೆ ಯನ್ನು ಕಂಪೋಸ್ ಮಾಡುತ್ತಲೇ ಅದರಲ್ಲಿ ನಿಮ್ಮ ವಿದ್ಯುನ್ಮಾನ ಸಹಿ ಮತ್ತು ಡೆಸಿಗ್ನೇಷನ್ ಬಂದು ಬಿಡುತ್ತದೆ."
"ಅಂದರೆ ಬೇರೆ ಯಾವುದೇ ಕಂಫ್ಯೂಟರಿನಿಂದ ಕೂಡಾ ನನ್ನ ಅಂಚೆಯನ್ನು ಕಳುಹಿಸಲು ಸಾಧ್ಯವಾಗುತ್ತದೆ?"
"ಅಂದರೆ   ಅರ್ಥವಾಗಲಿಲ್ಲ ಸರ್."
"ಔಟ್ ಲುಕ್ ನ್ನು ಹಾಕಿಸಿಕೊಳ್ಳುವುದರ ಮೂಲಕ " ನಾನೆಂದೆ " ಅಂದರೆ ಬೇರೆ ಯಾರೂ ಕೂಡಾ ನನ್ನ ವಿದ್ಯುನ್ಮಾನ ಸಹಿ ಇರುವ ಮೈಲ್ ನ್ನು ಕಳುಹಿಸಬಹುದೆಂದಾಯ್ತಲ್ಲ."
"ಆದರೆ ಸರ್"  ಸುನಿ ಯ ಸಂಶಯ  " ಅದನ್ನು ನಾವು ಕಂಡು ಹಿಡಿಯ ಬಹುದು. ಪ್ರತಿ ಕಂಫ್ಯೂಟರಿಗೂ ಅದರದ್ದೇ ಆದ ಐ ಪಿ ವಿಳಾಸವಿರುತ್ತದೆ."
"ಹೌದು, ಥ್ಯಾಂಕ್ಸ್  ಸುನಿ, ಅದೇ ನನಗೆ ಬೇಕಾಗಿದ್ದುದು.. .ಸರ್ ನನ್ನ ಹೆಸರಲ್ಲಿ ಬೇರೆ ಯಾರೋ ಈ ಅಂಚೆ ಕಳುಹಿಸಿಕೊಟ್ಟಿದ್ದಾರೆ. ಮೈಲ್ ಕಳುಹಿಸಿದ ಕಂಪ್ಯೂಟರಿನ ಐ ಪಿ ವಿಳಾಸ ನೋಡಿದರೆ ಈ ಮಾತನ್ನು ನೀವು ಖಚಿತ ಪಡಿಸಿಕೊಳ್ಳಬಹುದು. ಸುನೀ , ಈ ಮೈಲ್ ಕಳುಹಿಸಿದ ಕಂಪ್ಯೂಟರಿನ ಐ ಪಿ ವಿಳಾಸ ಕಂಡು ಹಿಡಿಯಲು ಎಷ್ಟು ಸಮಯ ಬೇಕಾಗಬಹುದು..??."
"ಬರೇ ಐದು ನಿಮಿಷ ಸರ್".ಸುನಿ ಎಂದಳು ಉತ್ಸಾಹದಲ್ಲಿ.
ಕರಿಯಪ್ಪನೆಂದರು "ಇದರ ಅವಶ್ಯಕಥೆಯಿಲ್ಲ ಸರ್, ನಿಜ.,   ಬೇರೆ ಯಾರೋ ಕಳುಹಿಸಿಕೊಟ್ಟಿರುವ ಸಾಧ್ಯತೆ ಇದೆ "

"ಥ್ಯಾಂಕ್ಸ್ ಕಾರಿಯಪ್ಪ ಸರ್" ನಾನೆಂದೆ


ಏಳನೆಯ ಮತ್ತು ಎಂಟನೆಯ ಪ್ರಶ್ನೆಗೆ ಉತ್ತರ "೧೪ ನೇ ತಾರೀಖು ನಡೆದ ನನ್ನ ಮಗನ ಜನ್ಮದಿನಕ್ಕೆ ಮಧು  ಒಂದು ಹೊಚ್ಚ ಹೊಸ ಲ್ಯಾಪ್ ಟೋಪ್  ಗಿಫ್ಟ್ ಕೊಟ್ಟದ್ದು ನಿಜ ಸರ್,  ಮತ್ತು ಆ ಕ್ರೆಡಿಟ್ ಕಾರ್ಡ್ ಮಧುವಿನದ್ದೇ   ಹೌದು. ಈ ವಿಷಯ ನಾನು ಎಲ್ಲರೆದುರಿಗೆ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದೇನೆ."
ಎಮ್ ಡಿಯವರ ಕಣ್ಣುಗಳಲ್ಲಿನ ಆಶ್ಚರ್ಯ ನನಗೆ   ಈಗ  ಸ್ಪಷ್ಟವಾಗಿ ಕಂಡಿತು.

ನಾನು ಕಾರಿಯಪ್ಪನವರ ಕಡೆ ತಿರುಗಿ ವಿನಂತಿಸಿದೆ"ಈಗ ನಾನು ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬಹುದೇ ಕಾರಿಯಪ್ಪ ಸರ್."
ಕಾರಿಯಪ್ಪನವರ ಮುಖ ಪ್ರಸನ್ನತೆಯಿಂದ ಬೆಳಗಿತು.
ಕೇಸು ಮುಗಿಸಿದ ಖುಷಿಯಲ್ಲಿ ಅವರೆಂದರು
 "ಯೆಸ್ ಒಫ್ ಕೋರ್ಸ್!!!

ಬ್ರೆಕ್ ನ ನಂತರ

"ನೋಡಿ ಸರ್"  ಕಾರಿಯಪ್ಪನವರು ಆರಂಭ ಮಾಡಿದರು.
 " ಮಿಲಿಂಡ್ ತಮ್ಮ ತಪ್ಪು ಒಪ್ಪಿಕೊಂಡಿದ್ದರಿಂದ ಹಾಗೂ.........

"ನಾನು ಮಧ್ಯೆ ಅವರ ಮಾತನ್ನು ತುಂಡರಿಸುತ್ತಾ ಹೇಳಿದೆ.
."ಕಾರಿಯಪ್ಪಾ ಸರ್ ನೀವು ತಪ್ಪು ತಿಳಿದಿದ್ದೀರಿ. ನಾನು ಆ ಲ್ಯಾಪ್ಟೋಪ್ ಮಧು ಕೊಟ್ಟದ್ದು ಎಂದೆನೇ ವಿನಹ ಕೆ ಕಂಪೆನಿಯ ಪಿ ಎ ಕೊಟ್ಟದ್ದು ಅಂತ ಹೇಳಲಿಲ್ಲವಲ್ಲ."

"ಅಂದರೆ ಏನು ನಿಮ್ಮ ಮಾತಿನ ಅರ್ಥ..?" ಕಾರಿಯಪ್ಪನವರ ಮುಖದಲ್ಲಿ ಗಲಿಬಿಲಿ ಮತ್ತು ಸಿಟ್ಟು ಎದ್ದು ಕಾಣುತ್ತಿತ್ತು.

"ನಿಜ ಸರ್, ಈ ಮಧು ನನ್ನ ಹೆಂಡತಿಯ ತಮ್ಮ ಸರ್. ಕಾಕತಾಳೀಯವಾಗಿ ಕೆ ಕಂಪೆನಿಯ ಪಿ ಏ ಹೆಸರೂ ಕೂಡಾ ಮಧು. ಆತ ನ ಕ್ರೆಡಿಟ್ ಕಾರ್ಡ್ ಡಿಟೈಲ್ಸ್  ಮತ್ತು ಕಳೆದ ತಿಂಗಳ ಬಿಲ್ಲ್ ಇಲ್ಲಿದೆ ಸಾರ್ ಅದರಲ್ಲಿನ ವಿಳಾಸ ಮತ್ತು ನಂಬರ್ ನೀವು ಚೆಕ್ ಮಾಡಿಕೊಳ್ಳಬಹುದು.
"ನಿಮ್ಮ ಒಂಬತ್ತನೆಯ ಪ್ರಶ್ನೆಗೆ ಉತ್ತರ. "ಇಷ್ಟೆಲ್ಲಾ ಒತ್ತಡಗಳ ನಡುವೆಯೂ ನಾನು ಓಬುಳರೆಡ್ಡಿಯ ಬಿಲ್ಲನ್ನು ತಡೆ ಹಿಡಿದಿದ್ದಕ್ಕೆ ಬಲವಾದ ಕಾರಣವಿದೆ ಸರ್.
ಸಾಮಾನ್ಯವಾಗಿ ಯಾವುದೇ ಪ್ರೊಜೆಕ್ಟ್ ನಲ್ಲಿ ಅಡಿಪಾಯದ ಮೊತ್ತ ಹೆಚ್ಚೆಂದರೆ  ಪ್ರೊಜೆಕ್ಟ್ ನ ಮೊತ್ತದ ೨೦ ಪ್ರತಿಶತ ಮಾತ್ರ ಇರುತ್ತದೆ.
ಇಲ್ಲಿ ಆ ಮೊತ್ತ  ಜಾಸ್ತಿಯಾದದ್ದು ಮೇಲ್ನೋಟಕ್ಕೇ ಕಂಡು ಬಂತು.
 ನನ್ನ ಸಂದೇಹಗಳನ್ನು ಪರಿಹರಿಸಲು ಓಬುಳ ರೆಡ್ಡಿ ಅಸಮರ್ಥನಾದಾಗ  ಸಹಜವಾಗಿ ಅವನ ಮೇಲಿನ ಸಂದೇಹ ಇನ್ನೂ ಜಾಸ್ತಿಯಾಯ್ತು. ೫೦ ಸಾವಿರ ವರ್ಗ ಮೀಟರ್ ನ ಕಾಂಕ್ರೀಟ್ ನೆಲ ಹಾಸಿಗೆಗೆ ಆತ ನಕ್ಷೆಯ ಪ್ರಕಾರ ೨೦ ಸೆ ಮೀ ದಪ್ಪದ ಕಾಂಕ್ರೀಟ್ ಹಾಕಬೇಕಿತ್ತು,
ಹಾಗೆಯೇ ಹಾಕಿದ್ದ ಕೂಡಾ. ಆದರೆ ಆತ ಬಿಲ್ಲು ಕಳುಹಿಸಿದ್ದು ೨೨ ಸೆ ಮಿ ಗೆ ಅಂದರೆ ಎರಡು ಸೆ ಮೀ ಹೆಚ್ಚಿಗೆ. ಈ ಹೆಚ್ಚಳಕ್ಕೆ ಸಮರ್ಪಕ ಆಧಾರವನ್ನೂ ಆತ ಕೊಟ್ಟಿರಲಿಲ್ಲ. ಅದಕ್ಕೇ ನಾನೇ ಸ್ವತಃ ಕೆಲಸ ನಡೆದಿರುವ ಜಾಗಕ್ಕೆ ಹೋಗಿ ೧೫-೨೦ ಬೇರೆ ಬೇರೆ ಜಾಗಗಳಲ್ಲಿ  ಚೆಕ್ ಮಾಡಿ ನನ್ನ ಸಂದೇಹವನ್ನು ಧೃಢಪಡಿಸಿಕೊಂಡೆ. ಆತ ಎಲ್ಲಿಯೂ ೨೦ ಸೆ ಮೀ ಗಿಂತ ಜಾಸ್ತಿ ಕಾಂಕ್ರೀಟ್ ಹಾಕಿಸಿರಲೇ ಇಲ್ಲ . ಅಲ್ಲದೇ ಇದಕ್ಕಾಗಿ ಹೆಚ್ಚಿನ ೪೦ ಲಕ್ಷ ರೂಪಾಯಿ ಸುಳ್ಳು ಬಿಲ್ಲನ್ನು ಬೇರೆ ಕಳುಹಿಸಿದ್ದಾನೆ. ಕಂಪೆನಿಗೆ ನಷ್ಟವಾಗ ಬೇಕಾಗಿದ್ದ ಈ ಹಣವನ್ನು ನಾನು ಉಳಿಸಿದ್ದೇನೆ ಸರ್, ನನ್ನ ತಪ್ಪು ಇದರಲ್ಲೇನಾದರೂ ಇದ್ದರೆ ತಾವು ಖಂಡಿತವಾಗಿಯೂ ನನ್ನನ್ನು ಶಿಕ್ಷಿಸ ಬಹುದು".
ನಾನು ಓರೆ ಕಣ್ಣಲ್ಲಿ ಕಾರಿಯಪ್ಪನವರನ್ನು ನೋಡಿದೆ,
 ಕಾರಿಯಪ್ಪನವರ ಮುಖ ಕೆಂಪಾಗಿತ್ತು. " ಇದೆಲ್ಲಾ ನನಗೆ ಯಾಕೆ ತಿಳಿಸಲಿಲ್ಲ. ಕಲ್ಲೂರಾಮ್..?? ಕೂಡಲೇ ಇದಕ್ಕೆ ಕಾರಣರಾದ ಎಲ್ಲರನ್ನೂ ಡಿಸ್ಮಿಸ್ ಮಾಡಿಬಿಡಿ " ಎಂದರು.
ನಾನು ಮುಂದುವರಿಸಿದೆ  "ನನ್ನ ಈ ನಾಲ್ಕು ವರ್ಷಗಳ ಕ್ಯಾರಿಯರ್ ನಲ್ಲಿ ಕಾಯಾ ವಾಚಾ ಮನಸಾ ಕಂಪೆನಿಯ ಏಳಿಗೆಗಾಗಿ ದುಡಿದಿದ್ದೇನೆ, ತಮ್ಮೆಲ್ಲರಿಗೂ ಒಪ್ಪಿಗೆಯಾದರೆ ನಿಮ್ಮೊಡನೆ ನನ್ನ ಕೆಲವು ಅಭಿಪ್ರಾಯಗಳನ್ನು ಸಹಾ ಈಗ ಹಂಚಿಕೊಳ್ಳುವೆ.
ಕಳೆದ  ಪ್ರೋಜೆಕ್ಟ್ ಎಫ್  ಗೆ ಬಂದ ಟೆಂಡರುಗಳಲ್ಲಿ ಕೆ ಕಂಪೆನಿಯ ಮೊತ್ತ ಎಲ್ಲಕ್ಕಿಂತ ಕಡಿಮೆಯಿದ್ದರೂ, ಓಬುಳ ರೆಡ್ಡಿಗೇ ಟೆಂಡರ್ ಕೊಡಲು ಬೇಕಾಗಿ ಕೆಲವೊಂದು ಐಟಮ್ಮುಗಳನ್ನು ವಿನಾ ಕಾರಣ ಸೇರಿಸಿ ತಾರೀಖು ಮುಂದೂಡಿ ಪುನಃ ಟೆಂಡರು ಕರೆಯಲಾಗಿತ್ತು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೊದಲು ಬಂದ ೩ ಟೆಂಡರುಗಳು ಆ ದಿನ ಹನ್ನೆರಡು ಗಂಟೆಯ  ಒಳಗೇ ಬಂದಿದ್ದರೆ ಎಲ್ಲರಿಗಿಂತ ಕೊನೆಯಲ್ಲಿ ಬಂದ ( ಈ ಅಂಚೆಯಲ್ಲಿ) ಓಬುಳ ರೆಡ್ಡಿಯ  ಟೆಂಡರ್ ಸಂಜೆ ಐದು ಗಂಟೆಗೆ ಬಂದಿತ್ತು!.
 ಅಂದರೆ ಈ ಅಂತರ ಐದುಗಂಟೆ!!!
.ಎಂದರೆ ಮೊದಲ ಮೂರೂ ಟೆಂಡರು ನಮಗೆ ತಲುಪಿದ ( ಗಮನಿಸಿ, ಅವುಗಳ ತಾರೀಖು ಮತ್ತು ಸಮಯ ಅಲ್ಲಿಯೇ ನಮೂದಿಸಲಾಗಿದೆ)  ಅರ್ಧ ಗಂಟೆಯ ನಂತರ  ನಮ್ಮ ಆಫೀಸಿನಿಂದ ಯಾರೋ ಓಬುಳ ರೆಡ್ಡಿಗೆ ಫೋನು ಮಾಡಿ ಎಲ್ಲಾ ಟೆಂಡರುಗಳ ವಿವರಗಳನ್ನೂ ರವಾನಿಸಿದ್ದಾರೆ,
ಇದೇ ಕಾರಣಕ್ಕಾಗಿ ಓಬುಳ ರೆಡ್ಡಿಯು ತನ್ನ ತಾಯಿಯನ್ನು ಎರಡು ಸಲ ಸಾಯಿಸಿದ್ದ.
( ಇದರ ಹಿಂದಿನ ಬಾರಿಯೂ ಇದೇ ರೀತಿಯಲ್ಲಿ ಟೆಂಡರ್ ಪಡೆದುಕೊಂಡಿದ್ದನಾತ)
ಆದುದರಿಂದಲೇ ಪ್ರತೀ ಬಾರಿಯೂ ಟೆಂಡರ್ ಓಬುಳ ರೆಡ್ಡಿಯದ್ದೇ ಆಗುತ್ತಿತ್ತು.
ಸುನೀ ಯಿಂದ ನಾನು ಆ ದಿನದ ೧೨ ಗಂಟೆಯಿಂದ ೫ ಗಂಟೆಯ ವರೆಗಿನ ನಮ್ಮ ಆಫೀಸಿನಿಂದ ಹೊರ ಹೋದ ಕಾಲುಗಳ ಎಲ್ಲಾ ವಿವರ ತೆಗೆದು ಕೊಂಡಿದ್ದೆ.
ಈಗ ಆ ವಿವರಗಳನ್ನು ನೀವು ಪರದೆಯಲ್ಲಿ ಸರಿಯಾಗಿ ನೋಡ ಬಹುದು. ಬೇಕೆಂತಲೇ ಹೆಸರನ್ನು ಮರೆ ಮಾಚಿದ್ದೇನೆ ಸರ್.
ಆ ದಿನ ೧ ಗಂಟೆಯಿಂದ ಒಂದೂವರೆಯ ವರೆಗೆ ಆಫೀಸಿನಿಂದ ಹೊರ ಹೋದ ಒಂದೇ ಒಂದು ಕಾಲ್ ನಮ್ಮ ಡೈರೆಕ್ಟರ್ ಗಳಲ್ಲೊಬ್ಬರಾಗಿತ್ತು.!!!!"

ತಿರುಗಿದೆ ಕಾರಿಯಪ್ಪನ ಕಡೆ.... ಎಲ್ಲಿದ್ದಾರೆ ಆತ??


ಆತ  ಯಾರು ಎಂದು ಹೇಳುವ ಅವಶ್ಯಕಥೆ ಬರಲೇ ಇಲ್ಲ.  ಎಲ್ಲರಿಗೂ ಗೊತ್ತಾಗಿತ್ತು..!!!!




   ಅಂತ್ಯ


"ಸರ್ ನನಗೆ ಅರ್ಥವಾಗದಿದ್ದುದು ಒಂದಿದೆ."
ಅಧಿವೇಶನ ಮುಗಿಯುತ್ತಲೇ ನನ್ನನ್ನು ತಮ್ಮ ಚೇಂಬರಿಗೇ ಕರೆಸಿಕೊಂಡಿದ್ದರು ಎಮ್ ಡಿ.
" ಹೇಳಿ ಮಿಲಿಂಡ್ "
"ಅಲ್ಲ ಸರ್ ನಿಮಗೆ ನನ್ನ ಮಾತುಗಳ ಮೇಲೆ ಭರವಸೆ ಬಂದುದು ಹೇಗೆ..?"
"ಮಿಲಿಂಡ್ ನೀವು ಆ ದಿನ ಕನ್ಯಾಲ್ ನ ಹತ್ತಿರ ಮಾತನಾಡಿದ್ದುದನ್ನು ನಾನು ಕೇಳಿಸಿಕೊಂಡಿದ್ದೆ"
"ಹೇಗೆ ಸರ್.??."
"ಹೀಗೆ,"    ಅವರು ತೋರಿಸಿದರು ,
ನನ್ನ ಕಣ್ಣುಗಳನ್ನು  ನಾನೇ ನಂಬದಾದೆ,
ಅದೊಂದು ಕ್ಲೋಸ್ಡ್ ಸರ್ಕ್ಯೂಟ್ ಟೀವಿ.
ಹೌದು, ಆ ದಿನ
ಅಂದರೆ ತಾ ೧೫.೦೪.೨೦೧೨ ರಂದು ನಾನು ಕನ್ಯಾಲ್ ನ ಹತ್ತಿರ ಹೋಗಿದ್ದೆನಲ್ಲ...

"ಒಹ್ ಮಿಲಿಂಡ್ ಸರ್ ಬನ್ನಿ."
"ಮಿ ಕನ್ಯಾಲ್ ನೀವೇ ತಾನೇ ಕಾಂಟ್ರಕ್ಟ್ ಮತ್ತು ಟೆಂಡರ್ ಡೀಲ್ ಮಾಡೋದು"

."ಹೌದು ಸರ್... ಈ ಕಂಪೆನಿಗೆ ಸೇರಿ ಆರು ವರ್ಷವಾಯ್ತು ಸರ್, ಯಾವ ಪ್ರೊಜೆಕ್ಟ್ ವಿಷಯ ಬೇಕಾದರೆ ಕೇಳಿಸರ್ ಹೇಳ್ತೇನೆ. ಎಲ್ಲಾ ನನ್ನ ಬೆರಳುಗಳ ತುದಿಯಲ್ಲಿವೆ."
"ಓಹ್ ವೆರಿ ನೈಸ್"

"ಈ ಓಬುಳ ರೆಡ್ಡಿ ಪ್ರೊಜೆಕ್ಟ್ ಇದೆಯಲ್ಲಾ ಆ ಟೆಂಡರ್ ಕ್ಲಿಯರ್ ಮಾಡಿದ್ದು ನೀವೇನಾ"
"ಹೌದು ಸರ್"
"ಅದರಲ್ಲಿ ಎರಡನೇ ಟೆಂಡರ್ ಅಮೌಂಟ್ ಓಬುಳರೆಡ್ಡಿಗಿಂತ ಕಡಿಮೆ ಇದೆಯಲ್ಲಾ..?"
"ಇಲ್ಲ ಸರ್.. ಅದ್ ಹೇಗೆ.. ಆಗುತ್ತೆ ಸಾರ್."
"ಅದೇ ನಾನು ಕೇಳ್ತಾ ಇರೋದು..? ಅದ್ ಹೇಗೆ ಅಂತ.""ನಾನ್ ನೋಡಿಲ್ಲಾ... ಸಾರ್ ಅದು..""ಅರೇ ನೀವೇ ಕ್ಲಿಯರ್ ಮಾಡಿದ್ದು ಅಂತೀರಾ, ಗೊತ್ತಿಲ್ಲ ಅಂತಾನೂ ಹೇಳ್ತೀರಾ..?"

"ಈಗ ನೆನಪಿಗೆ ಬಂತು ಸಾರ್""ಆ ಪ್ರೊಜೆಕ್ಟ್ನಲ್ಲಿ ಮುಖ್ಯವಾದ ಕೆಲವು ಐಟಮ್ಮುಗಳಿಗೆ ಕೆ ಕಂಪೆನಿ ರೇಟ್ ಕೋಟ್ ಮಾಡಿರಲಿಲ್ಲ, ಅದಕ್ಕೇ ಆ ಐಟಮ್ಮುಗಳನ್ನು ಹೊರತು ಪಡಿಸಿ ನೋಡಿದಾಗ ಓಬುಳ ರೆಡ್ಡಿಯ ಟೆಂಡರ್ ಮೊತ್ತ ಉಳಿದೆಲ್ಲರಿಗಿಂತ ಕಡಿಮೆ ಬಂತು ಸಾರ್."
"ಅಂದರೆ   ಮಿ ಕನ್ಯಾಲ್ ನಿಮ್ಮ ಮಾತಿನ ಅರ್ಥ ..ಮುಖ್ಯ ಟೆಂಡರಿನಲ್ಲಿ ಮೊದಲು ಆ ಐಟಮ್ಮುಗಳು ಸೇರಿರಲಿಲ್ಲ . ಅವುಗಳನ್ನು ಅನಂತರ ಸೇರಿಸಲಾಗಿತ್ತು, ಅಲ್ಲವೇ ? ಹಾಗಿದ್ದಲ್ಲಿ ಆ ನಂತರ ಸೇರಿಸಿದ ಆ ಎಲ್ಲಾ ಐಟಮ್ಮುಗಳ ವಿವರ ಎಲ್ಲಾ ವೆಂಡರ್ ಗಳಿಗೂ ಕಳುಹಿಸಿಕೊಟ್ಟಿದ್ದೀರಾ..?
"ಹೌದು ಸಾರ್"
"ಅದರ ವಿವರ ಕೊಡಿ....................."
"ಇದರಲ್ಲಿ ಓಬುಳರೆಡ್ಡಿಯ ಸಹಿ ಮಾತ್ರ ಇದೆ , ಬಾಕಿ ಎಲ್ಲ ವೆಂಡರ್ಸ್ ಗಳ ಸಹಿ ?"
"ಇಲ್ಲ ಸಾರ್, ಆದಿನ ಓಬುಳ ರೆಡ್ಡಿ ಮಾತ್ರ ಸಿಕ್ಕಿದ್ದರು, ಬಾಕಿ ಎಲ್ಲರಿಗೂ ಕೊರಿಯರ್ಸ್ ನಲ್ಲಿ ಕಳುಹಿಸಲಾಗಿತ್ತು."
"ಒಕೆ, ಒಕೆ, ಅವುಗಳೆಲ್ಲದರ ರಶೀದಿ ಇವೆಯಾ..?"
"ಸರ್.......... ಆತ......... ಗುಮಾಸ್ತ... ರಜೆಯಲ್ಲಿದ್ದಾನೆ ಸರ್."
"ಸರಿ ನೀವು ಅವನ್ನೆಲ್ಲಾ ಚೆಕ್ ಮಾಡಿದ್ದೀರಾ...........??"
"ಇಲ್ಲ ಸರ್.""ಇನ್ನೊಂದು ವಿಷಯ""ಹೇ... ಹೇಳಿ ಸಾರ್"
"ಅಂದ ಹಾಗೇ ನಾಲ್ಕು ಟೆಂಡರ್ ಬಂದಿತ್ತು ಕೊನೆಯಲ್ಲಿ ಟೆಂಡರ್ ಕೊಟ್ಟವರ್ಯಾರು?"
"ಅದೇ ಓಬುಳರೆಡ್ಡಿ ಸಾರ್."
"ನೀವು ಹಾರ್ಡ್ ಕಾಪಿ ತಗೋತೀರಾ ಸೊಫ್ಟ್ ಕಾಪೀನಾ."
"ಎರಡೂ ಸಾರ್, ಮೊದಲು ಸೊಫ್ಟ್ ಕಾಪಿ ( ಇ ಮೈಲ್) ನೋಡ್ತೇವೆ ಸಾರ್, ಯಾರದ್ದು ಕಡಿಮೆ ಅಂತ ಗೊತ್ತಾಗುತ್ತಿದ್ದಂತೆ ಹಾರ್ಡ್ ಕೋಪಿಯೂ ಸಿಕ್ಕಿ ಬಿಡುತ್ತೆ"
"ಅಂದ ಹಾಗೇ , ನೀವು ಗಮನಿಸಿದ್ದೀರಾ ಬಾಕಿ ಮೂವರ ಟೆಂಡರ್ ನಿಮಗೆ ಬಂದು ಐದು ಗಂಟೆಯ ನಂತರ ಓಬುಳರೆಡ್ಡಿಯ ಟೆಂಡರ್ ಬಂತಲ್ಲಾ.. ಕಾರಣ ಕೇಳಿದ್ದೀರಾ..?"
"ಸರ್, ಆದಿನ ಓಬುಳ ರೆಡ್ಡಿಯವರ ತಾಯಿ ತೀರಿಕೊಂಡಿದ್ದರು ಸಾರ್ , ಅದಕ್ಕೇ ಅವರ ಟೆಂಡರ್ ಬರಲು ತಡವಾಯ್ತು ಸಾರ್."
"ಓಹ್ ಹಾಗೊ??"
"ಅಂದ ಹಾಗೇ ಇವೆಲ್ಲವುಗಳ ಫೈನಲ್ ಡಿಸೀಶನ್ ಯಾರದ್ದು..?".".........................................."
"ಒಕೆ ಇನ್ನೇನಿಲ್ಲ, ನಾನಿನ್ನು ಬರ್ತೀನಿ."


 ****************************  **************************************  *************************************


ನಾನು ಅಲ್ಲಿಂದ ಹೊರಟು ಹೋದ ತಕ್ಷಣ ಕನ್ಯಾಲ್ ಒಂದು ಫೋನ್ ಮಾಡಿದ್ದ, ಅದೂ ರೆಕಾರ್ಡ್ ಆಗುತ್ತದೆ ಎಂಬ ಅರಿವಿಲ್ಲದೇ.
ಆಗಲೇ ಇದೆಲ್ಲದರ ಹಿಂದೆ ಯಾರಿದ್ದಾರೆ ಎಂಬುದು ಬಾಸ್ ಗೆ ಗೊತ್ತಾಗಿತ್ತು.

ಆದರೆ ಆಗಲೇ ಅವರು ಯಾವ ಕ್ರಮವನ್ನೂ ಕೈಕೊಂಡಿರಲಿಲ್ಲ.ಹಿಂದೆಯೂ ಎರಡು ಮೂರು ಬಾರಿ ಅವರಿಗೆ ಸಂದೇಹ ಬಂದಿತ್ತು ಆದರೆ, ಸಾಕ್ಷಿ ಏನೂ ಇರಲಿಲ್ಲವಲ್ಲ

."ಅಂದ ಹಾಗೆ ಮಿಲಿಂಡ್ ಮತ್ತೆ ನಿಮ್ಮ ಸಿಗ್ನೇಚರ್ಸ್, ಡೈರಿ, ಕೆ ಕಂಪೆನಿಯ ಇನ್ ವರ್ಡ್ ರಿಜಿಸ್ಟರ್???? ಇವೆಲ್ಲಾ ಏನು..?"
"ನಿಮಗೊಂದು ನಿಜ ಹೇಳಲಾ ಸಾರ್..?"
"ಹೇಳಿ, ಹೇಳಿ.."
"ನೀವು ನೋಡಿರೋದೆಲ್ಲಾ ನಿಜ...... ಸರ್.""ಅಂದರೆ...?"

"ನನ್ನ ಡೈರಿ ಕಲ್ಲೂರಾಮ್ ನವರ ಹತ್ತಿರವೇ ನಾನು ಬೇಕೆಂತಲೇ ಬಿಟ್ಟು ಡೈರಿ ಕಳೆದ ನಾಟಕವಾಡಿದ್ದೆ ಸರ್"

."ಮತ್ತೆ ನೀವು ಸೈಟಿನಲ್ಲಿದ್ದೆ ಅಂದ್ರಿ...

""ಇಲ್ಲ ಸರ್, ಕಾಂಕ್ರೀಟ್ ಪ್ಲಾಂಟ್ ನಲ್ಲಿ ಗಲಾಟೆಯಾದುದರಿಂದ ಎರಡು ಗಂಟೆಯಿಂದ ಆರು ಗಂಟೆಯವರೆಗೆ ಕಾಂಕ್ರೀಟ್ ಕೆಲಸ ನಡೆಯುತ್ತಿರಲಿಲ್ಲ . ನಾನು ಹೊರಗಡೆಯಿದ್ದೆ."
"ಆ ಮೈಲ್ ನೀವು ಕಳುಹಿಸಿದ್ದು..? "
"ಅದು ಖಾಲಿ ಫೋಲ್ಡರ್ ಸರ್ , ಅವರು ಮೈಲ್ ನ ಗಾತ್ರ ನೋಡಿದ್ದರೆ ಗೊತ್ತಾಗುತ್ತಿತ್ತು."
"ಮತ್ತೆ ನೀವು ಐ ಪಿ ವಿಳಾಸ ನೋಡಲು ಹೇಳಿದ್ದರಲ್ಲ, ಅವರು ಚೆಕ್ ಮಾಡ್ಸಿದ್ದರೆ ಗೊತ್ತಾಗುತ್ತಿತ್ತಲ್ಲ..?"

"ಇಲ್ಲಿ ನಾನೊಂದು ರಿಸ್ಕ್ ತಗೊಂಡೆ ಸಾರ್,  ಆದರೆ ನನಗನ್ನಿಸಿದ ಮಟ್ಟಿಗೆ ತಪ್ಪು ಮಾಡಿದವರಿಗೆ ಹೆದರಿಕೆ ಇದ್ದೇ ಇರುತ್ತದೆ ಸರ್, ನನ್ನ ಮೇಲಿನ ಅವರ  ಮೊದಲಿನ ಅಪಾದನೆಗಳು ತಪ್ಪೆಂದು ಗೊತ್ತಾಗುತ್ತಲೇ ಮುಂದಿನವುಗಳನ್ನೂ ತಪ್ಪು ಅಂತಾನೇ ಯೋಚಿಸುತ್ತಾರೆ ಸರ್. ನಾನಂದುಕೊಂಡ ಹಾಗೆಯೇ ನಡೆಯಿತು ಸರ್"
."ಆದರೂ ......"
"ಸುನಿ,  ನಿಮಗೆ ನನ್ನ ಕಂಪ್ಯೂಟರಿನ ಐ ಪಿ ವಿಳಾಸ ಹೇಳುತ್ತಿದ್ದಳು,
ಯಾಕೆಂದರೆ ನಾನು ಅದನ್ನು ಅಲ್ಲಿಂದಲೇ ಕಳುಹಿಸಿದ್ದೆ ಸರ್, ಅದನ್ನೇ ಅವರು ಕೇಳಿದ್ದರೆ,  ನಾನಾಗ ರೂಮಿನಲ್ಲಿರಲಿಲ್ಲ, ಬೇರೆ ಯಾರೋ ಬಂದು ಮಾಡ್ಸಿರಬೇಕು ಅಂತ ವಾದಿಸಿರುತ್ತಿದ್ದೆ, ನನ್ನ ಹಿಂದೆ ಬೇಹುಗಾರಿಕೆಗೆ ಕಲ್ಲೂರಾಮ್ ರುದ್ರನ್ನ ನೇಮಿಸಿದ ನಂತರವೇ ನಾನಿದೆಲ್ಲಾ ಮಾಡಲು ಯೋಚಿಸಿದ್ದು ಸರ್,  ಅಲ್ಲದೇ ನಾನು ಈ ಸಾರಿಯ ಪ್ರೊಜೆಕ್ಟ್ ಎಫ್ ನಲ್ಲಿ ಬ್ಲಾಂಕ್ ಟೆಂಡರ್ ( ಕೆಲಸ ಮಾಡಲು ಮನಸ್ಸಿಲ್ಲ ಎನ್ನುವಂತೆ) ಕಳುಹಿಸೆಂದು ಕೇಳಿಕೊಳ್ಳಲು  ಕೆ ಕಂಪೆನಿಗೆ ಹೋಗಿದ್ದೆ ಸರ್. ."
"ಮತ್ತೆ ನೀವು ಪ್ಲಾಂಟ್ ನಲ್ಲಿ ತೊಂದರೆ ಇದ್ದು ಗಾಡಿಗಳೆಲ್ಲವೂ ಆರು ಗಂಟೆಯ ನಂತರವೇ ಬಂದಿದ್ದರೆ ಅದು ಹೇಗೆ ಬಿಲ್ ಗಳಲ್ಲಿ  ಎರಡೂವರೆಯಿಂದ ಅಂತ ನಮೂದಿಸಿದ್ದೀರಿ, ಕಾಂಕ್ರೀಟ್ ಗಾಡಿಗಳು ಬರುವ  ಸಮಯ ಗೇಟಿನಲ್ಲಿ ಸಹಾ ನಮೂದಾಗುತ್ತದಲ್ಲ..???"
ಕೆಲವು ವಿಷಯಗಳನ್ನು ರಹಸ್ಯವಾಗಿಡುವುದೇ ಒಳ್ಳೆಯದಲ್ಲವೇ ಸರ್..??"
"ಸರಿ ಸರಿ, ಆ ರಹಸ್ಯ ನಾನು ಭೇಧಿಸುತ್ತೇನೆ ಬಿಡಿ " ಎಂದರು ನಗುತ್ತಾ.
ಅರ್ಥವಾಗದೇ ಅವರನ್ನೇ ನೋಡಿದೆ.ನಗುತ್ತಾ ನನಗೆ ಹಸ್ತ ಲಾಘವ  ಮಾಡಲು ಎದ್ದು ನಿಂತ ಅವರು  ನನ್ನತ್ತ ಬಾಗುತ್ತಾ ರಹಸ್ಯ ಭೇಧಿಸಿದರು.

"ಓಕೆ ನಿಮ್ಮ ಹೊಸ ಡೈರೆಕ್ಟರ್ ಹುದ್ದೆ ಗೆ ಸ್ವಾಗತ.

 ಇನ್ನು ಏನಿದ್ದರೂ ನೀವುಂಟು ನಿಮ್ಮ ಪ್ರೊಜೆಕ್ಟ್.

No comments:

Post a Comment