Saturday, July 20, 2013

ತ್ಯಾಂಪ... ತ್ಯಾಂಪಿ ಕೋಪವೆಂಬುದು ಕೇಳು.....



ಕೋಪವೆಂಬುದು ಕೇಳು.....

ದಿಗ್ಗನೆದ್ದೆ.
ಎಂತದೋ ಒಂದು ಸದ್ದು ಗುಂಝ್ಝ್ ...ಅಂತ... ಏನಿದು?
ಗೊತಾಯ್ತು, ನನ್ನ ಜಂಗಮವಾಣಿಯದ್ದು ಅದು.,
ನಿನ್ನೆ ಸಂಜೆಯ ಖಾಸಗಿ ಸಮಾರಂಭಕ್ಕಾಗಿ ಅದನ್ನು ಅದುರುವ ಶಬ್ದಕ್ಕಾಗಿ ರೂಪಾಂತರಿಸಿದ್ದೆ, ಮರೆತೂ ಇದ್ದೆ.
ಕರೆ ತ್ಯಾಂಪನದ್ದು.
ಯಾಕೋ ಏನಾಯ್ತೋ......
ನಿನಗೆ ಅಲಸೂರ್ ಹತ್ರ ಯಾರದ್ದಾದರೂ ಪರಿಚಯವಿದೆಯಾ..?
ಯಾಕೆ ಏನಾಯ್ತು..?
ಅದೆಲ್ಲಾ ಬ್ಯಾಡ ಒಂದೇ ಉತ್ತರ ಕೊಡು
ಇವನೊಬ್ಬ ವಕೀಲರ ತರ ಹೌದು ಅಥವಾ ಇಲ್ಲ ಅಂತ ಹೇಳಲು ಇದೇನು ಪರೀಕ್ಷೆ ಯಾ? ಅಥವಾ ಪಾಟೀ ಸವಾಲಾ..??
ನೀನು ಯಾರು ಬೇಕು ಅಂದರೆ ತಾನೇ ನಾನು ಹೇಳಬಲ್ಲೆ..?
ಏಯ್, ಯಾರೋ ಒಬ್ಬರು ಮಿಲಿಟರಿಯಾ, ಪೋಲೀಸಾ ಅಥವಾ ರಾಜ ಕಾರಣಿಯಾ ಅಂತವರ ಪರಿಚಯ ಇದೆಯಾ..??
ಒಳ್ಳೆ ಪಚೀತಿ ಆಯ್ತಲ್ಲ... ಯಾವುದಕ್ಕೆ ಅಂತಾನೂ ಹೇಳಲಿಲ್ಲ ಪ್ರಾಣಿ, ಮಿಲಿಟರಿ ಬಿಟ್ಟು ಆರು ವರ್ಷ ಆಯ್ತು, ಪ್ರತಿ ಮೂರು ವರ್ಷಕ್ಕೊಮ್ಮೆ ಗುಳೆ ಏಳುವ ಸಂಪ್ರದಾಯದಲ್ಲಿ ನನ್ನ ಪರಿಚಯವಿರುವವರು ಯಾರಿದ್ದಾರೆ ಯಾರಿಲ್ಲ ಅಂತ ಹೇಳೋದು ಹೇಗೆ..? ನನ್ನ ಈ ಪ್ರಿಯೋರಿಟಿಯ ಕೆಲಸದ ಬಗ್ಗೆ ಎಲ್ಲಿಲ್ಲದ ಸಿಟ್ಟು ಬಂತು. ಅಲ್ಲ ಬೆಳಿಗ್ಗೆ ಆರಕ್ಕೆ ಮನೆಯಿಂದ ಹೊರಟರೆ ರಾತ್ರೆ ಒಂಬತ್ತಕ್ಕೆ ಮನೆ. ಹೀಗಿರೋವಾಗ ಯಾರನ್ನ ಯಾರ್ಯಾರ ಸಂಪರ್ಕವನ್ನ ನೆನಪಿನಟ್ಟು ಪೋಷಿಸಲಾಗುತ್ತೆ..?
ಏನು ಅರ್ಜೆಂಟೋ ಆತ ಸಂಪರ್ಕವನ್ನ ಕಡಿದೇ ಬಿಟ್ಟ.
ತಡೀರಿ, ಅವನು ಕೇಳಿದ ಮೂವರು ಬೇಕಾಗೋದು ಯಾವಾಗ?




ಏನಾದರೋ ದೊಡ್ಡ ಕಿತಾಪತಿಯಾದಾಗ ಮಾತ್ರ. ಅಂದರೆ ಅವನೋ ಅಥವಾ ತ್ಯಾಂಪಿಯೋ ಒಂದು ಸಮಸ್ಯೆಯಲ್ಲಿದ್ದಾರೆ. ಹೌದು,
ಆತ ಕರೆ ಮಾಡಿದ ಅಂದ್ರೆ ತ್ಯಾಂಪಿಯೇ ಏನೋ ಕಿತಾಪತಿ ಮಾಡಿರಬೇಕು.
ಜಂಗಮವಾಣಿ ಪರಿಶೀಲಿಸಿದೆ.  ನಿಜ ಅಲಸೂರು ಕೆರೆಯ ಪಕ್ಕದಲ್ಲೇ....ಇದ್ದ ಹಾಗಿದೆ.  ಆತ್ಮಹತ್ಯೆ........ ಮನ ಶಂಕಿಸಿತು, ಸಾಧ್ಯವೇ ಇಲ್ಲ ತ್ಯಾಂಪ ಹಾಗೆ ಮಾಡಿಕೊಳ್ಳಲು , ನನ್ನನ್ನು ಬೇರೆ ಸಂಪರ್ಕಿಸಿದ್ದಾನಲ್ಲ.
ಮತ್ತೆ ತ್ಯಾಂಪಿ... ಇದ್ದರೂ ಇರಬಹುದು.   ಹೌದು ಹಿಂದೆಯೂ ಅಂತಹ ಸುಮಾರು ಘಟನೆಗಳಾಗಿವೆ.
ಒಮ್ಮೆ ಹೀಗಾಗಿತ್ತು...
ಅವಳ ಮನೆಗೆ ನನ್ನನ್ನೂ ಶೀನನನ್ನೂ ತುರಂತಾಗಿ ಕರೆಸಿದ್ದಳು.
ನಾವು ಅಲ್ಲಿಗೆ ಹೋದಾಗ...
ನಾನು ಬದುಕಲ್ಲ ಬಿಡಿ, ಎನ್ನುತ್ತಿದ್ದಾಳೆ ಕೈಯ್ಯಲ್ಲಿ ನಿದ್ದೆ ಮಾತ್ರೆಯ ಬಾಟ್ಲಿ ಹಿಡಿದು. ತ್ಯಾಂಪ ಕೊಸರಾಡುತ್ತಿರೋ  ಅವಳ ಕೈಗಳೆರಡನ್ನೂ ಗಟ್ಟಿಯಾಗಿ  ಹಿಡಿದುಕೊಂಡಿದ್ದಾನೆ.
ಏನಾಯ್ತು ಕೇಳಿದ ಶೀನ, ಆತ ತುಂಬಾನೇ ಕೂಲ್ ಮನುಷ್ಯ.
ನಾ ಇವರ ಜತೆ ಸಂಸಾರ ಮಾಡಿಕೊಂಡಿರಲಾರೆ, ಬಿಡಿ ನನ್ನ ಸಾಯಲು ಬಿಡಿ.
ತ್ಯಾಂಪನ ಮುಖ ನೋಡಿಯೇ ಗೊತ್ತಾಗಿತ್ತು ಅವನಿಗೆ ಕಾರಣ ತಿಳಿದಿಲ್ಲ ಅಂತ.
ಮೊದಲು ಅವಳ ಹತ್ತಿರವಿದ್ದ ಔಷಧಿ ಸೀಸೆ ನನಗಿತ್ತ ಶೀನ. ಹೇಳಮ್ಮ ಏನಾಯ್ತು ಬಿಡಿಸಿಹೇಳು
ನೋಡಿ ಇಲ್ಲಿ, ಏನಮ್ಮ ಇದು. ನಾನೂ ನೋಡಿದೆ ಸುಮಾರು ಎರಡು ಅಡಿ ಉದ್ದ ಇರೋ ಒಂದು ಕಡು ಕಪ್ಪು ತಲೆಗೂದಲು.
ಯಾರದ್ದಮ್ಮಾ ಇದು?
ಇದು ಅವರ ಹತ್ರ ಕೇಳಿ..
ತ್ಯಾಂಪನೆಡೆ ಚಾಚುತ್ತಾ ಸೀನ ಕೇಳಿದ ಯಾರದ್ದಪ್ಪಾ ಇದು?
ನಂಗೇನ್ ಗೊತ್ತು.?
ಅವರ ಅಂಗಿಯ ಹಿಂಬದಿ ಅಂಟಿಕೊಂಡಿತ್ತು, ಒಗೆಯಲು ತೆಗೆದಾಗ ಸಿಕ್ಕಿತ್ತು, ಕೇಳಿ ಅವರ ಹತ್ರ..   ಇಷ್ಟು ಹೇಳುವಷ್ಟರಲ್ಲಿ  ಅವಳ ಕಣ್ಣಾಲಿಗಳು ತುಂಬಿ ಬಂದವು.ತ್ಯಾಂಪಿಯ ಒರಸೆ.
ತ್ಯಾಂಪ ಅದನ್ನ ತೆಗೆದುಕೊಂಡು ಯೊಚಿಸಿದ ಸ್ವಲ್ಪ ಘಟ್ಟಿಯಾಗಿಯೇ.
ರೀಟಾ, ಸೀತಾ, ಕಾವೇರಿ, ಮತ್ತು ನೀತಿಯದ್ದಲ್ಲ ಇದು ಯಾಕೆಂದರೆ ಎಲ್ಲರೂ ಬಾಬ್ ಕಟ್, ಮತ್ತೆ ಹನಿ ಮೇಡಮ್ ಬಾಯ್ ಕಟ್, ಮತ್ಯಾರಿದ್ದಾರೆ ನಮ್ಮ ಆಫೀಸಿನಲ್ಲಿ ಉದ್ದದ ಕೂದಲಿನವರು...ಮೊನ್ನೆ ಮೊನ್ನೆ ಬಂದ ಪೀ ಏ  ಅಲ್ಲಲ್ಲ ಅವಳ ಕೂದಲು ಕೆಂಚು... ತ್ಯಾಂಪನ ಕಥೆಯೇ ಅಷ್ಟು
ನೋಡಿದ್ರಾ, ನೋಡಿದ್ರಾ, ಆಫೀಸಿನ ಎಲ್ಲಾ ಹೆಂಗಸರ ಬಗ್ಗೆನೂ ಅವರಿಗೆ ಗೊತ್ತು. ಇಂತ ಗಂಡನ ಬಳಿ ನಾನು ಸಂಸಾರ ನಡೆಸಲಾರೆ.
ತಡಿಯಮ್ಮಾ,
ಯಾವಾಗ ಹಾಕಿದ್ದಪ್ಪಾ ಈ ಶರ್ಟು..?
ನಿನ್ನೆ, ಆಫಿಸಿಂದ ಮನೆಗೆ ಹ್ಯಾಗೆ ಬಂದೆ
ಬಸ್ಸಿನಲ್ಲಿ..
ನಿನ್ನ ಹಿಂದೆ ಮುಂದೆ ಯಾರಾದರೂ ಹೆಂಗಸರಿದ್ರಾ, ಚೆನ್ನಾಗಿ ನೆನಪಿಸಿಕೊಂಡು ಹೇಳು
ಹೌದು, ಒಂದು ಚಿಕ್ಕ ಮಗುವೆತ್ತಿಕೊಂಡ ಉದ್ದ ಕೂದಲಿನ ಹೆಂಗಸು ಒಬ್ಬಳು ನಿಂತಿದ್ದಳು.
ಸರಿ ಬಿಡಮ್ಮಾ, ತ್ಯಾಂಪನಿಗೆ ಮಕ್ಕಳೆಂದರೆ ತುಂಬಾ ಪ್ರೀತಿ, ಆ ಮಗುವಿನ ಕಯ್ಯಲ್ಲಿ ತಾಯಿಯ ಕೂದಲು ತ್ಯಾಂಪನ ಅಂಗಿಗೆ ಸಿಕ್ಕಿಕೊಂಡಿರಬೇಕು. ಚಿಕ್ಕ ಚಿಕ್ಕ ವಿಷಯವನ್ನು ಬೇಟ್ಟ ಮಾಡುತ್ತಿದ್ದಿಯಲ್ಲ..?
‘ತಡಿ ತಡಿ ಹೊಸತಾಗಿ ನಮ್ಮ ಆಫೀಸಿಗೆ ಬಂದ ಮಂದಾ.......“    ಶೀನನ ಕಣ್ಣು ಸನ್ನೆ ಅರ್ಥವಾಗಿ ತ್ಯಾಂಪನನ್ನು ಅಲ್ಲಿಂದ ಬೇರೆಡೆ ಕರೆದೊಯ್ದಿದ್ದೆ..
ಏನಂತೆ ಅವರದ್ದು..
ಏನಿಲ್ಲ ಬಿಡಮ್ಮ ನನ್ನ ಹಳೆ ದೋಸ್ತ್ ಒಬ್ಬ ತ್ಯಾಂಪನ ಕಚೇರಿಗೆ ಬಂದಿದ್ದನಂತೆ.
ಮತ್ತೆ ಮಂದಾಕಿನಿಯೋ... ಅಂದ್ ಹಾಗಿತ್ತು
ಇಲ್ಲಮ್ಮ ಅವನ ಹೆಸರು ಮಂದಾ... ಹೌದು ಮಂದಾರ.....ನನ್ನ ಹಳೇ ಗೆಳೆಯ.
.........................................................
ಅಂತೂ ಶೀನನ ದೂರಾಲೋಚನೆಯಿಂದಾಗಿ ಸುಖಾಂತ್ಯವಾಗಿತ್ತು ಘಟನೆ.

ಸರಿ
ನಾನೇ ಅವನನ್ನು ಹುಡುಕುತ್ತ ಹೊರಟೆ ನಂದಿ ದುರ್ಗ ರಸ್ತೆಯಲ್ಲಿ...
ಹೌದು ಅಲಸೂರು ಕೆರೆಯ ಬಳಿ ಸಿಕ್ಕಿದ ಪ್ರಾಣಿ..
ಏನಾಯ್ತೋ..?
ತ್ಯಾಂಪಿ ಅಕ್ಸಿಡೆಂಟ್ ಮಾಡಿಕೊಂಡಿದ್ದಾಳೆ...?
ಯಾಕೆ ಏನಾಯ್ತು..?
ಬೆಳಗಿನಿಂದ ಹತ್ತು ಸಾರಿ ಕೇಳಿ ತಲೆ ಚಿಟ್ಟು ಹಿಡಿದಿದೆಯಪ್ಪಾ, ಎಲ್ಲರಿಗೂ ಹೇಳಿ ಹೇಳಿ ಸಾಕಾಯ್ತು...
ಅಲ್ಲಯ್ಯಾ, ಅದೇನು ಫೇಸ್ ಬುಕ್ ಸ್ಟೇಟಸ್ಸಾ.. ನಿಂದು,  ನೋಡಿದ ಕೂಡಲೆ ಗೊತ್ತಾಗೋಕೆ, ನೀನು ಹೇಳಿದರೆ ತಾನೇ ಗೊತ್ತಾಗೋದು.
ಅವಳಿಗೆ ಕಾರು ಕಲಿಸೋದಕ್ಕೆ ಸಾಧ್ಯ ಇಲ್ಲ, ನಿಮ್ ಸ್ವಂತ ಕಾರು ತೆಗೆದು ಕಲೀರಿ ಅಂದ   ಚಾಲಕ ಮಂಜ ಅವಳಿಗೆ ಸಿಕ್ಕಿದ್ದನಂತೆ
ಅದಕ್ಕೇ..
ಅವಳಿಗೆ ಹಳೆಯ ಆತ ಬೈದ ನೆನಪೆಲ್ಲಾ ಒಟ್ಟು ಸೇರಿ ಪಿತ್ತ ನೆತ್ತಿಗೇರಿತಂತೆ
ಸರಿ
ಇವಳು ಹತ್ತಿರ ನಿಲ್ಲಿಸಿದ್ದ ಕಾರು ಹತ್ತಿ ಆತನಿಗೆ ಬಯ್ಯುತ್ತಾ ಕಾರು ಆತನೆಡೆ ಬಿಟ್ಟಳತೆ.
ಅದಕ್ಕೇ
ಎರಡ್ಮೂರು ಸಾರಿ ಗುದ್ದಿಸಿದಳಂತೆ..
ಮತ್ತಿನ್ನೇನು, ಆ ಪ್ರಾಣಿ ಸತ್ತು ಪರಲೋಕಕ್ಕೆ ಹೋಗಿರಬೇಕು, ಆತನ ಮನೆಯವರು ಪೋಲೀಸ್ ಕಂಪ್ಲೆಂಟ್ ಕೊಟ್ಟಿರಬೇಕು,ಪೋಲೀಸರು ಅವಳನ್ನು....
ಸಾಕು ಸುಮ್ನಿರಯ್ಯಾ, ನಿನ್ನ ತರಲೆ ಕಥೆ...
ಮತ್ತಿನ್ನೇನು..?
ಆ ಮಂಜ ( ಅದು ವಾಹನ ಕಲಿಕಾ ತರಭೇತಿ ಶಾಲೆಯ ತರಭೇತುದಾರನ ಹೆಸರಿರಬೇಕು)ನೂ ವಾಹನ ಚಲಾಯಿಸುತ್ತಿದ್ದನಂತೆ.
ಓ ಅಂದರೆ ಅವನ ವಾಹನಕ್ಕೆ ಇವಳು ಗುದ್ದಿಸಿದಳಂತಾ..?
ಹೌದು
ಅಂದ್ರೆ ಅವನ ವಾಹನ ಚಪ್ಪಡಿಯಾಗಿರ ಬೇಕಲ್ವಾ,  ತ್ಯಾಂಪಿ ಎರಡು ಸಾರಿ ತನ್ನ ವಾಹನದಿಂದ ಗುದ್ದಿಸಿದ್ದಾಳೆ ಎಂದರೆ..? ಮತ್ತೆ ಇವಳ್ಯಾಕೆ....
ಏನಯ್ಯಾ ಅಷ್ಟು ಅರ್ಜೆಂಟ್ ನಿಂಗೆ, ಪೂರ್ತಿ ಕೇಳಿಸ್ಕೋ..
ಸರಿ ಹೇಳು
ವಾಹನ ಚಪ್ಪಡಿಯಾಗಿದ್ದು ಹೌದು, ಆದರೆ ಅವನ ವಾಹನವಲ್ಲ, ತ್ಯಾಂಪಿ ಚಲಾಯಿಸಿದ ವಾಹನ..?
ಅದು ಹೇಗೆ.. ಆಗೋಕೆ ಸಾಧ್ಯ..?
ಯಾಕೆ ಆಗಲ್ಲ..?
ಅಂದ್ರೆ
ಮಂಜ ಚಾಯಿಸುತ್ತಾ ಇದ್ದದ್ದು...
ಹುಂ ಹೇಳು, ಇದ್ದದ್ದು...??
ರೋಡ್ ರೋಲರ್...
ಅಯ್ಯಯ್ಯೋ
ಮತ್ತೆ.. ಕೇಳು...
ಹೇಳು
ತ್ಯಾಂಪಿ ಅಷ್ಟು ಗಡಿಬಿಡಿಯಲ್ಲಿ ಚಾಲನೆ ಮಾಡಿದ್ದ ಜೀಪು ಯಾರದ್ದೆಂದುಕೊಂಡೆ..
ಹೌದು ಯಾರದ್ದು..?
ಪೋಲೀಸ್ ಜೀಪ್
ನನ್ನ ತಲೆ ತಿರುಗಿತು.
ಅಂದರೆ ತ್ಯಾಂಪಿ ಪೋಲೀಸ್ ಸ್ಟೇಷನ್ ಹತ್ರ ನಿಂತಿದ್ದ ಪೋಲೀಸ್ ಜೀಪನ್ನು ಹತ್ತಿ ಚಲಾಯಿಸಿ ಆ ಮಂಜ ಚಲಾಯಿಸುತ್ತಿದ್ದ ರೋಡ್ ರೋಲರಿಗೆ ಗುದ್ದಿದ್ದಾಳೆ..  ಪೋಲೀಸರು ಅವಳನ್ನು ಕರೆದುಕೊಂಡು ಹೋಗಿದ್ದಾರೆ...
ಪಾಪ ತ್ಯಾಂಪಿ ಎಲ್ಲಿದ್ದಾಳೆ ಈಗ.
ಅವಳನ್ನ ಅಣ್ಣಂದಿರು ಕರ್ಕೊಂಡು ಮನೆಗೆ ಹೋಗಿದ್ದಾರೆ, ಓಕೆ.... ಬಚಾವು
ಆದರೆ ..
ಏನು ಆದರೆ..??
ಅದನ್ನ ರಿಪೇರಿ ಮಾಡ್ಸಿ ಕೊಡೋ ಜವಾಬ್ದಾರಿ ನಂದು.
ಇನ್ಸೂರ್ ಇರತ್ತೆ, ಸರಕಾರೀ ವಾಹನ ಅಲ್ವಾ..
ಇಲ್ಲ ಕಣೋ ಅದೇ ತಲೆ ಬಿಸಿ ಈಗ... ಅದಕ್ಕೆ ಕಳೆದ ಎರಡು ವರ್ಷಗಳಿಂದ ಇನ್ಸೂ ಮಾಡ್ಸಿರಲಿಲ್ಲ, ಪೂರ್ತಿ ರಿಪೇರಿ ಹಣ ನಾನೇ ಕೊಡಬೇಕು... ಅಲ್ಲದೇ ಕೋರ್ಟ್ ಖರ್ಚು ಬೇರೆ....ಮತ್ತೆ ಇತ್ತೀಚೆಗೆ ಬಂದ ಸರಕಾರಿ ಕಾನೂನಿದೆಯಂತೆ, ನನ್ನ ಸಂಬಳದಲ್ಲಿ ಹತ್ತು ಪರ್ಸೆಂಟ್ ಕೂಡಾ ಪತ್ನಿಗೆ ಕೊಡಬೇಕಂತೆ.
ಕೊಡು.... ಸಂಬಳ ಸಿಗಲಿಲ್ಲವಾ,,?
ಸಿಕ್ಕಿತ್ತು ಆದರೆ ಕಳೆದ ಹತ್ತು ವರ್ಷ ದ ಲೆಕ್ಕಾಚಾರ ಮಾಡಿ ಈ ತಿಂಗಳ ಸಂಬಳ ಪೂರ್ತಿ ತೆಗೆದುಕೊಂಡು ಆಗಲೇ ಶಾಪಿಂಗ್ ಮುಗಿದ್ದಾಳೆ ಅವಳು.... ಹೌದು ನಿನ್ನ ಬ್ಯಾಂಕನಲ್ಲಿ ಎಷ್ಟಿದೆ..?
ಏಡುಕೊಂಡಲವಾಡಾ .....ಗೊವಿಂದಾ...ಗೋವಿಂದ.

Saturday, July 6, 2013

ಸೀನ ತ್ಯಾಂಪನ - ಪ್ರತಿಜ್ಞೆ ೧.



ಟಿಂಗ್........... ಟಿಂಗ್!!
ಅರೇ ಬೆಲ್ಲಾಯ್ತು.
ಧಿಗ್ಗನೆದ್ದೆ.
ಬಾಗಿಲು ತೆರೆದೆ.
ಇಲ್ಲ ಹೊರಗೆ ಯಾರೂ ಕಾಣಲಿಲ್ಲ. ಮತ್ತೆ .....?,
ಪುನಃ ಬೆಲ್ಲಾಯ್ತು.
ಥುಥ್ ..ಗೊತ್ತಾಯ್ತು, .
ಇದು ಬಾಗಿಲ ಕರೆ ಗಂಟೆಯಲ್ಲ... ,
ಮಕ್ಕಳು ನನ್ನ ಕರೆವಾಣಿಯ ಯಾವಾಗಿನ ಸದ್ದನ್ನೇ ಬದಲು ಬಾಗಿಲ ಸದ್ದಿನಂತೆ ಮಾಡಿಟ್ಟಿದ್ದಾರೆ.
ಇದು ಅದರದ್ದು......!!
ಎತ್ತಿದೆ
" ಹಿಲ್ಲೋ.."
ಇಂತಹ ಶಬ್ದ ಭೂಮಿ ಮಾತ್ರದಲ್ಲಿ ಬಂತೆಂದರೆ ಅದು ಸೀನನದ್ದು ಆಗಿರಲೇ ಬೇಕು.
ಹೇಳು ಸೀನ...
ಅರೇ ನಿಂಗೆ ಹೇಗೋ ಗೊತ್ತಾಯ್ತು..?
ನಿನ್ನ ಸ್ನೇಹಿತ ಅಲ್ವೇನೋ ..?
ಆದರೂ ಇದು ಹೊಸ ನಂಬರ್..?
ವಿಷಯ ಹೇಳು..?
ಸ್ವಲ್ಪ ಕೆಳಗಡೆ ಬರ್ತೀಯಾ..??
ನಾನಿರುವುದು ೫ ನೇ ಮಹಡಿಯಲ್ಲಿ...
ಅಲ್ಲಾ ಬೆಂಗಳೂರು ದರ್ಶನ ಮಾಡಲು ಹೊರಟಿದ್ದಲ್ಲವಾ..?? ವಾಪಾಸ್ಸು ಬಂದು ಬಿಟ್ಟರಾ ಇಷ್ಟು ಬೇಗ..? ಅಲ್ಲ ಹೆಲಿಕಾಫ್ಟರ್ನಲ್ಲಿ ತಿರುಗಿದರೂ ಇಷ್ಟು ಇಡೀ ಬೆಂಗಳೂರು ನೋಡಿ ಬರಲು ಸಾಧ್ಯವೇ ಇಲ್ಲಾ ಮತ್ತೆ...?
ಯಾಕೆ ಮಂಡೆ ಬಿಸಿ ಅವನನ್ನೇ ಕೇಳಿದರಾಯ್ತಪ್ಪಾ..!! ಲಗುಬಗೆಯಿಂದ ಕೆಳಗಿಳಿದೆ.
ಕೆಳಗೆ ಇಡೀ ಪಟಾಲಮ್ಮೇ ಇದೆ!!!!
ತ್ಯಾಂಪ ತ್ಯಾಂಪಿ ಸೀನ ಸೀನನ ಲಚುಮಿ, ಗಣಪ..??!!! ಇನ್ನೆರಡು (ಮಂಗನ) ಮರಿಗಳು!!!
ಬನ್ನಿ ಬನ್ನಿ ಎರಡು ದಿನ ಬೆಂಗಳೂರೆಲ್ಲಾ ತಿರುಗಿ ಆರಾಮ್ ಆಗಿ ನಮ್ಮನೆಗೆ ಬರ್ತೀವಪ್ಪಾ ಎಂದಿದ್ದರಲ್ಲಾ... ಏನಿದು ಕೆಲವೇ ಗಂಟೆಗಳಲ್ಲಿ ಇಡೀ ಬೆಂಗಳೂರೇ ಮುಗಿಸಿ ಬಿಟ್ಟಿರಾ..???
ಉತ್ತರ ಬಿಸಿಯಾಗಿತ್ತು
ಬೆಂಗಳೂರು ಮುಗಿಸಲು ನಾವೇನು ಅಲ್ಕೈದಾಗಳೇನು..? ತ್ಯಾಂಪನ ಮುಸಿ ಮುಸಿ
ಯಾಕೋ ಬೆಳಗಿನ ಸಮಯವೇ ಸರಿ ಇದ್ದಂಗಿಲ್ಲ... ಏನೋ ಎಡವಟ್ಟಾಗಿದೆ ಅನ್ನಿಸಿತು..
"ಯಾಕ್ರೀ ಅಣ್ಣ ಅವರ ಮೇಲೆ ರೇಗಾಡ್ತೀರಾ..? ತಪ್ಪು ನೀವ್ ಮಾಡಿದ್ದಲ್ಲದೇ ಸಿಟ್ಟು ಬೇರೆ "ತ್ಯಾಂಪಿ ಇಲ್ಲೂ ತನ್ನ ಸಾಮ್ರಾಜ್ಞಿಯ ದರ್ಪ ತೋರಿಸಿಯೇ ಬಿಟ್ಟಳು.
ಎಲ್ಲಾದರೇನು ತ್ಯಾಂಪನ ದಿನದ ರಾಮಾಯಣ ಇದು. ಇವತ್ತೇನೋ ನಮ್ಮನೆಯಲ್ಲಿ ಅಷ್ಟೆ. ಸಧ್ಯ ನನ್ನವಳು ಮನೆಯಲ್ಲಿಲ್ಲ. ಇದ್ದಿದ್ದರೆ..........??.
ನೋ ನೋ...
ಯಾಕಪ್ಪಾ‌ಏನಾಯ್ತು..???
ಯಾರೂ ಮಾತಾಡಲಿಲ್ಲ..
"ನಮ್ಮನ್ನ ಇಲ್ಲೇ ನಿಲ್ಲಿಸಿ ಮಾತಾಡ್ತೀಯಾ, .. ಹೇಗೆ?" ಈ ಸಾರಿ ಸೀನ
ನನ್ನ ತಪ್ಪು ಅರಿವಾಯ್ತು.
ತ್ಯಾಂಪ ಸೀನ ಎತ್ತಿಗೆ ( ಲಿಫ್ಟು) ಉಪಯೋಗಿಸಲ್ಲ, ಎಷ್ಟೇ ಮೆಟ್ಟಲಾದರೂ ನಡೆದೇ ಬರ್ತಾರೆ....
ಏನೂ ............ ಇಲ್ಲಪ್ಪ.... ಅಂತದ್ದೇನಿಲ್ಲ
ಎತ್ತಿಗೆಯಲ್ಲಿ ಹತ್ತಲು ಹೆದರಿಕೆ ಅವರಿಗೆ..

ಅದಕ್ಕೂ ಬಲವಾದ ಕಾರಣವಿತ್ತು...............................
ಒಮ್ಮೆ ಅವರು ಬಂದಾಗ ಹೀಗಾಯ್ತು.....
ಇಬ್ಬರೂ ನಮ್ಮನೆಯಿಂದ ಪೇಟೆಗೆ ಹೊರಟಿದ್ದರು.
ಅವರಿಬ್ಬರನ್ನು ಬಿಟ್ಟು ಮನೆ ಸೇರಿ ಬಾಗಿಲು ಹಾಕಿ ೫ ನಿಮಿಷ ಕಳೆದಿಲ್ಲ ಬೆಲ್ಲಾಯ್ತು.
ನೋಡಿದರೆ ತ್ಯಾಂಪ ಏದುಸಿರು ಬಿಡುತ್ತಾ ನಿಂತಿದ್ದಾನೆ....
ಏನಾಯ್ತೋ..?
ಪಾಕೀಟು ಬಿಟ್ಟು ಹೊಂಟಿದ್ದೆ.
ನಿಜವೇ ತ್ಯಾಂಪಿಗೆ ಇವನು ಕೊಡಿಸಬೇಕಾದ ಲಿಸ್ಟು ದೊಡ್ಡದೇ ಇತ್ತು, ಮುಖ್ಯವಾದದ್ದನ್ನೇ ಬಿಟ್ಟರೆ ಹೇಗೆ..??
ನನಗೆ ಫೋನ್ ಮಾಡಿ ಹೇಳಿದ್ದರೆ ನಾನೇ ತರ್ತಿದ್ದೇನಲ್ಲಪ್ಪಾ..??
ನಿನ್ ನಂಬ್ರ ನೋಡಿ ಮಾಡೋಣ ಎಂದರೆ ನನ್ ಕನ್ನಡಕವೂ ಇಲ್ಲೇ ಬಿಟ್ಟಿದ್ದೆ.
ಅದಕ್ಕೇ...???
ಯಾರದ್ದೋ ಫೋನ್ ಬಂತಾ, ನಿಂದೇ ಅಂತ ಮಾತಾಡ್ದೆ.. ಬಾಯಿಗ್ ಬಂದ ಹಾಗೆ ಬಯ್ಯೋದಾ ಆತ.. ನಂಗಂತೂ ತಲೆ ಬಿಸಿ ಆಯ್ತಪ್ಪಾ... ಅದಕ್ಕೆ ಫೋನ್ ಯಾರದ್ದ್ ಬಂದದ್ದ್ ಅಂದೇಳಿ ಗೊತ್ತಾಗದೇ ಮಾತಾಡಲ್ಲ ಅಂತ ಪ್ರತಿಜ್ಞೆ ಮಾಡಿದ್ದೆ. ಫೋನ್ ಬಂದದ್ದ್ ಯಾರದ್ದ ಅಂದ್ ಕಾಂಬೋ ಅಂದ್ರೆ ಕನ್ನಡಕ ಇಲ್ಯಲ್ಲೆ.
ನಾನೂ ಅದಕ್ಕೇ ಹೇಳದ್ದಾ. ನಂಗ್ಯಾಕೆ ಫೋನ್ ಮಾಡ್ಲಿಲ್ಲೆ..?
ಅಲ್ಲ ನಿಂಗ್ ಫೋನ್ ಮಾಡುಕೂ ಕನ್ನಡಕ ಇಲ್ದೆ ಮಾಡಿ ಮತ್ ಎಲ್ಲಾರೂ ಹೋಯಿ ಆ ಬೈಗುಳ ತಿಂಬುವ ಕಥಿ ಬ್ಯಾಡವೇ ಬ್ಯಾಡ ಮಾರಾಯಾ.

########

ಅದೇ ಸರಿ ಬಿಡಿ ಅಂದ್ಕೊಂಡರೆ ಕಳೆದ ಸಾರಿಯೂ............

ಅವರಿಬ್ಬರು ಎತ್ತಿಗೆಗೆ ಹತ್ತಿದರಾ. ಒಳ ಬಂದು ೫ ಎಂಬ ಗುಂಡಿ ಒತ್ತಿದರು. ಬಾಗಿಲು ಮುಚ್ಚಿಕೊಂಡಿತು. ಸ್ವಲ್ಪ ಎತ್ತರಕ್ಕೇರುತ್ತಿದ್ದಂತೆಯೇ ನಿಂತಿತು. ಮೇಲೂ ಹತ್ತಲ್ಲ ಕೆಳಕ್ಕೂ ಇಳಿಯಲ್ಲ
ತ್ರಿಶಂಕು...
ತ್ಯಾಂಪನಿಗೆ ಕತ್ತಲೆ ಎಂದರೆ ಹೆದರಿಕೆ, ಸೀನನಿಗೆ ಎತ್ತರವೆಂದರೆ...
ಇಬ್ಬರೂ ದಬ್ಬ ದಬ ಬಡಿದರು ಕೂಗಿದರು ಅತ್ತರು ಯಾರೂ ಇಲ್ಲ. ಕೂಗಿ ಕೂಗಿ ಗಂಟಲ ಪಸೆಯೇ ಇಲ್ಲ ಇಬ್ಬರಿಗೂ. ಇನ್ನು ಮೂರ್ಚೆ ಹೋಗುವುದೊಂದು ಬಾಕಿ.
ಕೆಳಗಿನ ಮನೆಯ ಚಿಲ್ಟೂ ..... ನಾವೆಲ್ಲಾ ಅದಕ್ಕೆ ಒಸಾಮಾ ಅಂತೇವೆ ಮಹಾ ದರೋಡೆಕೋರ, ಉಗ್ರವಾದಿ. ಇದೆಲ್ಲಾ ನೋಡಿಕೊಂಡಿತ್ತು. ಅಂದರೆ ಅವರಿಬ್ಬರು ಎತ್ತಿಗೆ ಹತ್ತಿದ್ದೂ, ವಿದ್ಯುತ್ ಕೈ ಕೊಟ್ಟಿದ್ದೂ, ಎತ್ತಿಗೆ ಮಧ್ಯದಲ್ಲೇ ನಿಂತು ಅವರಿಬ್ಬರೂ ಕೂಗಿಕೊಂಡದ್ದು... ಮುಂದೇನಾಗುತ್ತೆ ನೋಡೋಣ ಎಂಬ ಆಸೆ ಅದಕ್ಕೆ.. ಅಂತೂ ಇವರಿಬ್ಬರ ಸದ್ದಡಗಿದ ಮೇಲೆ ಒಂದು ಪುಣ್ಯದ ಕೆಲಸ ಮಾಡಿತು. ನಮ್ಮ ಎತ್ತಿಗೆಯ ನಿರ್ವಹಣಕಾರನನ್ನು ಕರೆದು ಹೇಳಿತು.
ಆತ ಹೋಗಿ ಜನರೇಟರ್ ಶುರು ಮಾಡಿದ ಮೇಲೆ ಎತ್ತಿಗೆ ಮೇಲೆ ಬಂತು.ಎತ್ತಿಗೆಯಿಂದ ಇಬ್ಬರನ್ನೂ ಹೊರ ಬರಮಾಡಿಕೊಳ್ಳಲಾಯ್ತು.
ಏನಾಯ್ತಾ..... ನೋಡಿ ಎತ್ತಿಗೆ ನಿಂತರೆ ಒಳಗಿನ ಬೆಲ್ ಮಾಡಿದರಾಯ್ತು, ಅಥವಾ ನನಗೆ ಫೋನ್ ಮಾಡಿಲ್ಲ ಯಾಕೆ..??
ನನ್ನ ಫೋನ್ ನಲ್ಲಿ ನಿನ್ನ ನಂಬರ್ ಇಲ್ಲ
ಮತ್ತೆ ಸೀನನದ್ದು.. ಕತ್ತಲೆಯಲ್ಲಿ ಅವನಿಗೆ ಮೊಬೈಲ್ ನಂಬರ ಕಾಣದು.
ತ್ಯಾಂಪನಿಗೆ.... ಸೀನನ ಫೋನ್ ನೋಡ ಬಹುದಿತ್ತಲ್ಲಾ... ಕೇಳಿದೆ ನಾನು
ಅವನಿಗೆ ಸೀನನ ಫೋನ್ ಆಪರೇಟ್ ಮಾಡಲು ಬರುವುದಿಲ್ಲ.
ಇಲ್ಲವಾ ಹೆದರಿಕೆಯಿಂದ ಕೈ ಕಾಲೇ ಬಿದ್ದ್ ಹೋಯ್ತಾ...
ಇನ್ನು ಜನ್ಮದಲ್ಲಿ ಎತ್ತಿಗೆ( ಲಿಫ್ಟು ) ಹತ್ತಲ್ಲ ಅಂತ ಇಬ್ಬರೂ ಪ್ರತಿಜ್ಞೆಯೇ ಮಾಡಿದ್ದಾರೆ.
ಅವರಿಬ್ಬರೂ ಸುಧಾರಿಸಲು ಒಂದು ವಾರವೇ ಬೇಕಾಯ್ತು...
ಇದು ನಿಜವಾದ ವಿಷಯ
ಪಾಪ ಅನ್ನಿಸಿತ್ತು.

ಆದರೆ ನನ್ನ ನನ್ನ ಮನೆಯ ಕಥೆ........
ಅಲ್ಲಿಯವರೆಗೆ ನನ್ನ ಮನೆಯೇ ಮೈದಾನ, ನನ್ನ ಹೆಂಡತಿ, ಕಳೆದೊಂದು ಸಾರಿ ಇವರೆಲ್ಲಾ ಬಂದು ಮಾಡಿ ಹೋದ ಮೇಲೆ ನನಗೂ ಒಂದು ವಾರವಾದರೂ. ರಜೆ ಹಾಕಬೇಕಾಗಿತ್ತು ಮನೇನ ನಾನೂ ನನ್ನ ಅರ್ಧಾಂಗಿ ಸೇರಿ ಕೂಡಾ ಸರಿ ಮಾಡಲು. ಅದಕ್ಕೆಮ್ದೇ ನಮ್ಮ ಮನೆಯಲ್ಲಿ ಧರ್ಮ ಯುದ್ಧವೂ ನಡೆದಿತ್ತು......
ಬಿಡಿ ಅದೆಲ್ಲಾ ಈಸಾರಿ ...... ಈಗ ಬೇಡ ಬಿಡಿ ..
ಮುಂದಿನ್ ಸಾರಿ