Monday, November 19, 2012

ತ್ಯಾಂಪ ತ್ಯಾಂಪಿಯ ರೈಲು ಪ್ರವಾ (ಯಾ) ಸ


 


ಬೆಂಗಳೂರಿಗೆ ಹೊರಡುವ ರೈಲದು.
ಇವರು ಕುಳಿತ ಭೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ. ಹೊರಡುತ್ತೆ ಅನ್ನುವಾಗ ಒಂದು ಜೋಡಿ ಅದೇ ಬೋಗಿ ಹತ್ತಿದರು.
ನಿಮ್ಮ ಹತ್ತಿರ ರಿಸರ್ವೇಶನ್ ಟಿಕೆಟ್ ಇದೆಯಾ ಮೇಡಮ್..?
"ನುಲಿಯುವುದ್ಯಾಕೆ..? ಟಿಕೆಟ್ ಇದ್ಯಾ ಅಂತ ಕೇಳಿದನಷ್ಟೇ, ನೀನು ಭಾರೀ ಚಂದ ಅಂತೇನೂ ಹೇಳಲಿಲ್ಲ ಆತ." ತ್ಯಾಂಪ ಬಿರುಸಾದ
"ಹೇಳದಿದ್ದರೇನು ಅವನ ಕಣ್ಣೇ ಅದನ್ನು ಹೇಳಿತ್ತು..." ಸುಲಭದಲ್ಲಿ ಬಿಡುವಳಲ್ಲ ತ್ಯಾಂಪಿ
"ಹೋ...ಅದೂ ಹ್ಯಾಗೆ ....ಗೊತ್ತಾಗುತ್ತದೋ ನಿನಗೆ" ತ್ಯಾಂಪ.
"ಮತ್ತೆ........ ಊರಲ್ಲಿ ಮಾವನ ಮಗನಿದ್ದನಲ್ಲ...... ಅವನೂ ಹೀಗೇ ಇದ್ದ"
"ಮತ್ಯಾಕೆ......." ಇಲ್ಲ ತ್ಯಾಂಪನ ಗಮನ ಬೇರೆ ಕಡೆ ಹೊರಳಿತ್ತು..
"ಮಿ ತ್ಯಾಂಫ್!!! ??"
ಇದಿರಲ್ಲಿರುವ ಸುಂದರಿಗೆ ತನ್ನ ಹೆಸರೂ ತಿಳಿದಿದೆ..
" ಹೇಳಿ"
"ನನಗೆ ಬೆಂಗಳೂರಿಗೆ ಹೋಗಲಿಕ್ಕಿದೆ, ಇಲ್ಲೇ ನಿಮ್ಮ ಪಕ್ಕದಲ್ಲೇ ಕೂತುಕೊಳ್ಳಬಹುದಲ್ಲಾ..?"
ತ್ಯಾಂಪನಿಗೆ ಸ್ವರ್ಗ ಮೂರೇ ಗೇಣು... ಆದರೆ....
ಮುಚ್ರೀ ಬಾಯಿನಾ...?? ನಾಲಿಗೆಯ ಎಂಜಲೂ ಹೊರ ಬೀಳ್ತಾ ಇದೆ" ತ್ಯಾಂಪಿಯ ಬಾಂಬು ಅದೂ ....ಅವನಿಗೆ ಮಾತ್ರ ಕೇಳಿಸುವಂತೆ.
ಮುಚ್ಚಿತ್ತು ಬಾಯಿ ಆದರೇನು ಕಣ್ಣು ತೆರೆದೇ ಇದೆಯಲ್ಲ.
"ಅದ್ಯಾಕೆ ಮೇಡಮ್ ಅವರನ್ನು ಕೇಳ್ತೀರಾ... ರೈಲು ನಮ್ಮದಲ್ಲ.. ನೀವು ಎಲ್ಲಿ ಬೇಕಾದರೆ ಕುಳಿತುಕೊಳ್ಳಿ ಆದರೆ ಇಲ್ಲಲ್ಲ... ಇದು ನನಗೆ ಮತ್ತು ಈ ನನ್ನವರಿಗೆ ಮಾತ್ರ ಮೀಸಲು.
ನೀವು ಇದಿರಿನ ಸೀಟಿನಲ್ಲಿರಿ."
ಅದೂ ಬೋನಸ್ಸೇ
ಅಲ್ಲಾ ನಿಮ್ಮೆಜಮಾನ್ರೂ...? ತ್ಯಾಂಪ
ಕಿಲಕಿಲಾ ನಕ್ಕಳಾಕೆ , ತಂಪಾದ ಗಾಳಿ ಬೀಸಿತು ಬೇಸಗೆಯ ತ್ಯಾಂಪನಿಗೆ
"ನನ್ನ ಯಜಮಾನರಲ್ಲ......ಅವರು"
ಮತ್ತೆ...... ???? ತ್ಯಾಂಪಿ
ಆದರೆ ಉತ್ತರ ಕೇಳುವ ಕುತೂಹಲ ತ್ಯಾಂಪನಿಗೆ.
ನಿಮ್ಮ ಬ್ರದರ್ರಾ..? ತ್ಯಾಂಪ
"ಅಲ್ಲ ಅವರು ನನ್ನ ಕಸಿನ್"
ಎರಡರಲ್ಲೂ ಅಂತ ವ್ಯತ್ಯಾಸ ಇದೆಯಾ...... ತ್ಯಾಂಪನ ಸಂಶಯ. ಆದರೂ ಯಾಕೋ ನಿರಾಳನಾದ.
"ಮತ್ತೆ ನಿಮ್ಮ ಜತೆ ಬರಲ್ಲವಾ ಅವರೂ...." ತ್ಯಾಂಪನ ಕಣ್ಣಲ್ಲಿ ...........ಎಂತದ್ದೋ ಛಾಯೆ.
"ಇಲ್ಲ ನನ್ನನ್ನು ಬಿಡಲು ಬಂದರಷ್ಟೇ, ಹೋಗುತ್ತಾರೆ ವಾಪಾಸ್ಸು..........ಯಾಕೆ .ಏನೂ ಹೆದರಿಕೆ ಇಲ್ಲವಲ್ಲಾ ಮಿ ಥ್ಯಾಂಫ್..?? ಯಾಕೆಂದರೆ ನಾನು ಮೊದಲ ಸಲ ಇದರಲ್ಲಿ ಬರುವುದು..."
ತ್ಯಾಂಪ್ ಒಮ್ಮೆಲೇ ಉಬ್ಬಿ ಸೂಪರ್ ಮ್ಯಾನ್ ಆದ.
"ಛೇ ಏನೂ ಹೆದರಿಕೆಯಿಲ್ಲ ಬಿಡಿ, ನಾನಿದ್ದೇನಲ್ಲ..........."
"ದಂಡಕ್ಕೆ......... "ತ್ಯಾಂಪಿ ಮುಗಿಸಿದ್ದಳು ತ್ಯಾಂಪನ ವಾಕ್ಯ.
"ಏನಂದ್ರೀ ತ್ಯಾಂಪಿ ಯವರೇ" ಕೇಳಿದಳಾಕೆ.
"ಏನಿಲ್ಲ ಬಿಡಿ ಅಂದ ಹಾಗೆ ನಮ್ಮ ಹೆಸರು ಹೇಗೆ ತಿಳಿಯಿತು ನಿಮಗೆ.".
"ಹೊರಗೆ ಪೇಪರಿನಲ್ಲಿ......"
ತನ್ನ ಹೆಸರು ಪೇಪರಿನಲ್ಲಿ ಬಂದಿತ್ತಾ....??? ಯಾವಾಗ..? ತನಗೇ ತಿಳಿಯದೇ ತಾನು ಯಾವಾಗ ಫೇಮಸ್ ಆದೆ
ಯಾವ ಪೇಪರಿನಲ್ಲಿ..?
ಅಲ್ಲಲ್ಲ ಹೊರಗೆ... ಈ ಭೋಗಿಯ ಮೇಲೆ ಅಂಟಿಸಿರುತ್ತಾರಲ್ಲ ರಿಸರ್ವೇಶನ್ ಚಾರ್ಟ್ ಪೇಪರಿನಲ್ಲಿ.....
ಹೋ ಅದಾ.... ತ್ಯಾಂಪಿ ಗಂಡನೆಡೆಗೆ ತಾತ್ಸಾರವಾಗಿ ನೋಡಿದಳು
ನೀವು ಎಲ್ಲಾ ಒಟ್ಟಿಗೇ ಇರುವುದಾ..?" ತ್ಯಾಂಪಿ
ಎಲ್ಲಾ ಅಲ್ಲ ತ್ಯಾಂಪಿಯವರೇ
ನಾನೂ ಕಸಿನ್ನೂ ಒಟ್ಟಿಗೇ ಇರುವುದು.
ಮನೆಯಾ..??" ತ್ಯಾಂಪಿ
ಅಲ್ಲಲ್ಲ ರೂಮು...
ಅಂದರೆ ಅವರು ನಿಮ್ಮ ದೂರದ ಅಣ್ಣನಾ..?"ತ್ಯಾಂಪಿ
ಅಲ್ಲಪ್ಪಾ
ಮತ್ತೆ ಮೊದಲು ಕಸಿನ್ನೂ ಅಂದ್ರಿ" ತ್ಯಾಂಪಿ
ಅದು...ನಾನೂ..
"ಇರಲಿ ಬಿಡೇ ನಮಗೇನು.........? ಈಗ ಬಂದ ತ್ಯಾಂಪ ನಡುವಿಗೆ, ತ್ಯಾಂಪಿ ಯ ಪೋಲೀಸ್ ತರಹದ ವಿಚಾರಣೆ ಹಿಡಿಸಲಿಲ್ಲ ಆತನಿಗೆ.. ಪಾಪ
ಅಂದ ಹಾಗೇ ನಿಮ್ಮ ಹೆಸರು ಮಿಸ್......!! ????????
ಭಾರೀ ಖುಷಿಯಲ್ಲಿ ಕೇಳಿದ ಹಾಗಿತ್ತೇ...??
"ಮಾಯಾ"
"ಚೆಂದದ ಹೆಸರು..".ತ್ಯಾಂಪ
ಅಂದ ಹಾಗೇ ನೀವು ಏನು ಕೆಲಸ ಮಾಡುವುದು...?
"ಮಾಯಾ..."
ಅಲ್ಲ ನಿಮ್ಮ ಹೆಸರಲ್ಲ.... ಮಾಯಾ ಅವರೇ...ನಿಮ್ಮ ಉ..."
ಅಷ್ಟರಲ್ಲಿ ಮಾಯಾ ಎದ್ದು " ಈಗ ಬರ್ತೀನಿ ಸ್ವಲ್ಪ ನನ್ನ ಸಾಮಾನು ನೋಡಿಕೊಂಡಿರಿ..!!" ಎಂದಳು.
"ನಿಮ್ಮ ಸಮಯ ತಗೊಳ್ಳಿ..........." ಇದರಲ್ಲೆಲ್ಲಾ ತ್ಯಾಂಪ ಧಾರಾಳಿ ಹೆಂಗರಳು ಪಾಪ
ಟಿ ಟಿ ಬಂದ

ತ್ಯಾಂಪ ಟಿಕೆಟ್ ತೋರಿಸಿದ.
"ಬೇರೆ ಯಾರೂ ಇಲ್ಲ ಅಲ್ವಾ ಇಲ್ಲಿ"
ತ್ಯಾಂಪಿ ಏನೋ ಹೇಳ ಹೊರಟಳು. ....ತ್ಯಾಂಪ ಸುಮ್ಮನಿರಿಸಿದ.
"ಒಳಗಡೆಯಿಂದ ಬಾಗಿಲು ಹಾಕ್ಕೊಳ್ಳಿ ರಾತ್ರೆ ಕಳ್ಳ ಕಾಕರ ತೊಂದರೆ ಇರುತ್ತೆ. ಇದರಲ್ಲಿಯಂತೂ ಸ್ವಲ್ಪ ಕಲಿತಿದ್ದವರ ಹಾಗೆ ಬಂದು ಟೋಪಿ ಹಾಕುವವರೇ ಜಾಸ್ತಿ. ಎಚ್ಚರವಾಗಿರಿ, ಶುಭರಾತ್ರೆ". ಅವರನ್ನು ಎಬ್ಬಿಸಿ ಹೊರಟು ಹೋದ. ಅವನ ಕೆಲಸವೇ ಅದು.
ತ್ಯಾಂಪನಿಗೆ ಹೇಳಿ ಜಬ್ಬರ್ ದಸ್ತೀ ಬಾಗಿಲು ಹಾಕಿಸಿದಳು ಅವನ ಅರ್ಧಾಂಗಿ.
ಸ್ವಲ್ಪ ಹೊತ್ತಲ್ಲಿ ಬಾಗಿಲ ಸದ್ದಾಯ್ತು.
"ಯಾರೂ..??" ಕೇಳಿದ ತ್ಯಾಂಪ
"ನಾನು ಮಾಯಾ.. ಮಿ ಥ್ಯಾಂಫ್"
"ಅರೆ... ಮಾಯಾ ಅಂತೆ" ಬಾಗಿಲು ತೆಗೆಯಲು ಹೋದ ತ್ಯಾಂಪ
"ಟಿಟಿ ಯವರು ಬಾಗಿಲು ತೆರೆಯಬಾರದೆಂದು ಹೇಳಿದ್ದರಲ್ವಾ ..." ತ್ಯಾಂಪಿ
"ಅಲ್ಲ ಅದೆಲ್ಲ ಅಪರಿಚಿತರಾದರೆ ಮಾತ್ರ...!!!"
"ನೀವೆಲ್ಲಿಗೆ ಹೋಗಿದ್ರೀ, ಮಾಯಾ...?? ಟಿ ಟಿ ಬಂದು ಹೋದ"
"ನಾನು ನೀರು ಕುಡಿಯಲು ಕೆಳಗಿಳಿದೆ ಅಷ್ಟರಲ್ಲಿ ರೈಲು ಹೊರಟಿತ್ತು, ಹೇಗೋ ಯಾವುದೋ ಭೋಗಿ ಹತ್ತಿದೆ, ಈ ಸಲ ಇಲ್ಲಿಗೆ ಬಂದೆ ಅದಕ್ಕೆ ತಡವಾಯ್ತು...." ಮಾಯಾ.
"ನಿಮ್ಮ ಹತ್ತಿರ ಟಿಕೆಟ್ ಇದೆಯಲ್ಲಾ....??" ತ್ಯಾಂಪಿ
"ಪ್ಲಾಟ್ ಫಾರಂ ಟಿಕೆಟ್ ತಗೊಂಡೇ ನಾನು ರೈಲು ಹತ್ತಿದ್ದು...."ಮಾಯಾ.
"ಪ್ಲಾಟ್ ಫಾರಂ ಟಿಕೆಟಾ..??"
"ಹಂಗಂದ್ನಾ ನಾನು ಅಲ್ಲಲ್ಲ ಪ್ಲಾಟ್ ಫಾರಂ ನಲ್ಲಿ ಟಿಕೆಟ್ ತೆಗೆದುಕೊಂಡು ನಾನು ಈ ಭೋಗಿ ಹತ್ತಿದ್ದು ಅಂದೆ, ಯಾಕೆ ತೋರಿಸಲಾ..?? "ಮಾಯಾ.
"ಬೇಡ ಬಿಡಿ..!! ಅದರ ಅಗತ್ಯವಿಲ್ಲ.." ಅಲ್ಲ ಇಷ್ಟು ಚೆಂದ ಇರುವವರ್ಯಾರಾದರೂ ಸುಳ್ಳು ಹೇಳ್ತಾರಾ...? ತ್ಯಾಂಪ
" ಮಿ ಥ್ಯಾಂಪ ರವರೇ ನೀವು ಹೇಗೆ ಮಲಗ್ತೀರಿ..? ಮೇಲಾ..?"ಮಾಯಾ.
"ಏನಂದ್ರೀ" ಕೇಳಿದ್ದನ್ನ ನಂಬಲಾರದೇ ಕೇಳಿದ ತ್ಯಾಂಪ
"ಅಲ್ಲ ನೀವು ಕೇಳಗಿನ ಬರ್ತ್ ನಲಿ ಮಲಗ್ತೀರಾ ಅಥವಾ ನಿಮ್ಮ ಶ್ರೀಮತಿಯವರಾ..ಅಂತ ಕೇಳಿದ್ದೆ ಅಷ್ಟೆ??ಮಾಯಾ.
ಅಷ್ಟೇನಾ..??' ತ್ಯಾಂಪ
"ನಾನು ದಿನಾ ತಡವಾಗಿಯೇ ಮಲಗುವುದು, ಆದರೆ ತ್ಯಾಂಪಿ ಸ್ವಲ್ಪ ಬೇಗ ಮಲಗ್ತಾಳಷ್ಟೇ, ಸರಿ ನೀನು ಮೇಲ್ಗಡೆ ಹೋಗಿ ಮಲಗೆ..". ಅಂದ ತ್ಯಾಂಪಿಗೆ.
" ಸ್ವಲ್ಪ ಸಾಮಾನೆಲ್ಲಾ ಜೋಪಾನವಾಗಿ ನೋಡ್ಕೊಳಿ, ಆ ಟೀ ಟಿ......"ತ್ಯಾಂಪಿ
"ನೀವು ಅದನ್ನೆಲ್ಲಾ ಮರೆತು ಬಿಡಿ ಮೇಡಮ್......" ಮಾಯಾ
"ಅಂದರೆ...??" ತ್ಯಾಂಪಿ
"ನಾನೂ ತ್ಯಾಂಪ ಅವರೂ ನೋಡ್ಕೋಳ್ತೀವಿ ಬಿಡಿ." ಮಾಯಾ
"ನೆನಪಿದೆ ಎಲ್ಲವೂ ನೀನು ನಿದ್ದೆ ಮಾಡು ಆರಾಮ್ ಆಗಿ...... ನಾನಿದ್ದೇನಲ್ಲ" . ತ್ಯಾಂಪ


ತ್ಯಾಂಪ ತ್ಯಾಂಪಿಯ ರೈಲು ಪ್ರಯಾಣ

(ಕೊನೆಯ ಭಾಗ)

ಕಾಫೀ ಕಫೇಯಾ... ಪೇಪರ್ ಪೇಪರ್, ಎಲ್ಲ ಶಬ್ದಗಳೂ ಕಲಸು ಮೇಲೋಗರವಾಗಿ ಕೇಳಿಸುತ್ತಿವೆ ತ್ಯಾಂಪಿಗೆ.
ಒಂದೇ ಕ್ಷಣ
ಓಹ್ ಅಂದರೆ ತಮ್ಮ ಗಮ್ಯ ಬಂತು.
ಬೆಂಗಳೂರು.. ಬಂತು
ಅಭ್ಯಾಸ ಬಲ.... ಮಲಗಿದ್ದಲ್ಲಿಂದ ತನ್ನ ತಲೆ ಪಕ್ಕ ಕೈ ಆಡಿಸಿದಳು.
ಇಲ್ಲ ಜಂಬದ ಚೀಲ ಅಲ್ಲಿರ ಬೇಕಾಗಿತ್ತು..
...
ಹಾಗೆಯೇ ಕಣ್ಣು ಪಕ್ಕದಲ್ಲೆಲ್ಲಾ ಹುಡುಕಾಡಿತು..
ಹತ್ತು ಲೀಟರ್ ನೀರಿನ ಸಂಗ್ರಹ ದಾನಿ, ಬಿಸಿಯಾಗಿಡೋ ಚೆಂಬು,ಎರಡು ಸೂಟ್ ಕೇಸುಗಳು, ಒಂದು ಕಿಟ್ ಬ್ಯಗ್,ಎಲ್ಲವೂ ಅದರದರ ಜಾಗದಲ್ಲಿದ್ದುವು, ತನ್ನ ಜಂಬದ ಚೀಲ ತನ್ನ ತಲೆಯ ಪಕ್ಕವೇ, ಇದ್ದವು ಎಲ್ಲಾ, ಸರೀ ನೆನಪಿತ್ತು, ಆದರೆ ಅದು ತಾನು ಮಲಗುವ ಮೊದಲು
ತ್ಯಾಂಪನಿಗೆ ಹೇಳಿಯೇ ಮಲಗಿದ್ದು..
. ಅಲ್ಲಿಲ್ಲ..
ಈಗ ಯಾವುವೂ ಕಾಣುತ್ತಿಲ್ಲ ಅವುಗಳ ಜಾಗದಲ್ಲಿ..
ತ್ಯಾಂಪ ಅರಮ್ ಆಗಿ ಮಲಗಿದ್ದ ಮಗುವಿನ ಹಾಗೆ, ಅವನು ಮಲಗಿದರೆ ಹಾಗೇ, ಯಾವ ಚಿಂತೆಯಿಲ್ಲ
ಆತನೂ ತಿಳಿಸಿದ್ದ
ಎಲ್ಲಿಯೋ ಭದ್ರವಾಗಿ ತೆಗೆದಿಟ್ಟಿರಬೇಕು..
ಜತೆಗೇ.. ನೆನಪಾಯ್ತು "ಆರಾಮ್ ಆಗಿ ಮಲಗು.. ನಾವಿದ್ದೇವಲ್ಲಾ ...’
ಆಗಲೆ ನೆನಪಾಗಿ ಆಕಡೆ ಕಣ್ಣು ತಿರುಗಿತು.
ಎಲ್ಲಿದ್ದಾಳೆ ಅವಳು ..ಆ ಮಿಟುಕಲಾಡಿ!!
ರ್ರೀ ಎಲ್ರೀ... ಏಳ್ರೀ... ಹೌದಾ..???
ಹೂಂ ತಡಿಯೇ....
ಬೆಂಗಳೂರು ಬಂತು
ಬಂದೇ ಬೀಡ್ತಾ..??
ಏಳ್ರೀ.. ಇಳೀರಿ ಕೆಳಗೆ
ಯಾಕೇ ಗಂಟಲು ಹರ್ಕೋತಾ ಇದ್ದೀಯಾ
ಎಲ್ಲಿ ನಮ್ಮ ಸಾಮಾನೂ...
ಸಾಮಾನೂ..??
ತ್ಯಾಂಪ ಕೊಂಚ ಅಧೀರನಾದ
ಹೌದೂ ನಮ್ಮ ಬ್ಯಾಗೆಲ್ಲಾ ಎಲ್ಲಿ..?? ಎಲ್ಲಿಟ್ಟೀದ್ದೀರಾ..?/
ನೀನೂ ಇಟ್ಟಲ್ಲೇ ಇರಬೇಕೂ...
ಅವಳೆಲ್ಲಿ ನಿಮ್ಮ ಪಾಪದ ಮಾಯಾ..??
ಅವಳೇ ಹಿಂದೆಯೇ ಇಳಿದು ಹೋದಳಲ್ಲ.. ಅವಳ ಸಾಮಾನೆಲ್ಲಾ ನಾನೇ ಕೆಳಗಿಳಿಸಿ ಕೊಟ್ಟಿದ್ದೆ, ನಮ್ಮಹತ್ರ ಇದ್ದ ಹಾಗಿನದ್ದೇ ನೀರು ಸಂಗ್ರಹ ದಾನಿ ಕೂಡಾ ಇತ್ತು ಅವಳ ಬಳಿ, ನಮ್ಮಿಬ್ಬರ ಯೋಚನೆ ಎಷ್ಟು ಸರಿಯಾಗಿ ಹೊಂದುತ್ತೆ ಅಂತ ಕೂಡಾ ಹೇಳಿದ್ದಳು.
ಹೋಯ್ತು..ನಮ್ಮ ಸಾಮಾನೆಲ್ಲಾ ಹೋಯ್ತು... ನೀವೇ ಅವಳಿಗೆ ಕೈಯ್ಯೆತ್ತಿ ಕೊಟ್ಟಿರಲ್ಲಾ.. ದೇವರೇ
ತ್ಯಾಂಪಿಯ ಅರಚಾಟ ಹಾಗೇ...
ಇಳಿಯಲೇ ಬೇಕಲ್ಲ
ಇಲ್ಲಾ ಕಣೇ ಹಾಗೆಲ್ಲಾ ಮಾಡುವವಳಲ್ಲ ಕಣೇ ಪಾಪ....
ತ್ಯಾಂಪಿಯ ದುಮು ದುಮು ನಡೆದೇ ಇತ್ತು.....
ಬಾಗಿಲಿಂದ ಕೆಳಗಿಳಿದರು...
ಬನ್ನಿ ಮನೆಗೆ ನಿಮ್ಮ...... ನೋಡ್ಕೋತೀನಿ..
ಅರೆರೇಏನಾಯ್ತು
ಸೀನಣ್ಣ
ಅರೇ ನನ್ನ ಬ್ಯಾಗ್ ನಿಮ್ಮ ಕೈಯಲ್ಲಿ ಹೇಗೇ..?
ಅದನ್ನ ನಾನು ಹೇಳ್ತೇನೆ...
"ಪೋಲೀಸ್ ಗಣೇಶ್..."
ಸುಮಾರು ದಿನದಿಂದ ನಾವು ಒಬ್ಬ ಮೋಸ ಮಾಡುವ ಹೆಂಗಸನ್ನ ಹುಡುಕುತ್ತಿದ್ದೆವು, ನಮ್ಮ ಸೀನನ ಕಾರಣದಿಂದ ಇವಳು ಸಿಕ್ಕಿ ಬಿದ್ದಳು.
ನಾನಲ್ಲ ಕಾರಣ, ನಿಜವಾಗಿ ತ್ಯಾಂಪ ನನಗೆ ಫೋನ್ ಮಾಡಿದ್ದ, ಆಗಲೇ ನನಗೆ ಸಂಶಯ ಬಂತು, ನಾನು ಗಣೇಶನ ಸಹಾಯದಿಂದ ಹಿಡಿದು ಬಿಟ್ಟೆವು. ಓಹ್ ತ್ಯಾಂಪನಾ....
ಹೌದೇನ್ರಿ....??ತ್ಯಾಂಪಿ.
ನಾನಾ..?? ನಿನಗೆ ಯಾವಾಗ..??
ಸೀನ ಕಣ್ಣು ಹೊಡೆದದ್ದು ಗಣೇಶ ಮಾತ್ರ ನೋಡಿದ್ದ...
ಆಗಲೇ.....
ಜತೆಯಲ್ಲಿ ಮಹಿಳಾ ಪೋಲೀಸ್... ಹಗ್ಗ ಕಟ್ಟಿಸಿಕೊಂಡ ಮಾಯಾ....
ತ್ಯಾಂಪನ ಕಥೆ ಸೀನನ ಎಂಟ್ರಿ ಜತೆ ಸುಖಾಂತ್ಯ.

Saturday, November 17, 2012


ಸ್ವಾರ್ಥ


೧.   ಕನಸು

ಆದಿನ ನನಗೇ ನೋ ಸ್ವಲ್ಪ ಪೂರ್ವಾಭಾಸವಾಗಿತ್ತು. ಇವತ್ತು ಏನೋ ಆಗುತ್ತೆ ಅಂತ. ಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಒಬ್ಬನೇ ತಿರುಗಾಡುವುದೆಂದರೆ ನನಗೆ ತುಂಬಾನೇ ಇಷ್ಟ. ಆ ಎತ್ತರವಾಗಿ ಬೆಳೆದಿದ್ದ ಮರಗಳಿಂದ ದಟ್ಟವಾಗಿದ್ದ ಲಾಲಭಾಗ್ ನ ಆ ವಿಷೇಷ ಸ್ಠಳ ನನಗೆ ಯಾವತ್ತೂ ಪ್ರಿಯವೇ.   ಬೆಳೆದ ಹಸಿರು ಚಿಮ್ಮುವ ಗಳುವಿನ ಗುಂಪಿನಲ್ಲಿ ನಾನು ನನ್ನನ್ನೇ ಮರೆಯುವಷ್ಟು ವಿವಶನಾಗುತ್ತಿದ್ದೆ. ತಮ್ಮಷ್ಟಕ್ಕೆ ತಾವೇ ಬೆಳೆಯುತ್ತಾ, ತನಗೇ ಎಂದೂ ಏನೂ ಅಪೇಕ್ಷೆ ಪಡದೇ ಸರ್ವರಿಗೂ ಸದಾ ಏನನ್ನಾದರೂ ಕೊಡುತ್ತಿರುವ ಇವುಗಳು ಪ್ರಕೃತಿಗೇ ಸವಾಲು ಹಾಕುತ್ತ ಮೆರೆಯುವ ಮಾನವನೆಷ್ಟು ಕುಬ್ಜ ಎಂಬುದನ್ನು ತೋರಿಸಿಕೊಡುತ್ತಿವೆ ಎನ್ನಿಸುತ್ತದೆ. ಪ್ರಕ್ಷುಬ್ದವಾಗಿರುವ ಮನಸ್ಸನ್ನು ಪ್ರಶಾಂತ ಮಾಡುವ ಗುಣ ಇವುಗಳಲ್ಲಿವೆ. ಮನುಷ್ಯನ ಜೀವನಗತಿಯಲ್ಲಿನ ಏರಿಳಿತಗಳು ಇವುಗಳ ಒಂದು ವರುಷದ ಮಾರ್ಪಾಡಿನಲ್ಲಿ ಸಾಂಕೇತಿಕವಾಗಿ ಪ್ರತಿನಿಧಿಸುವಂತಿದೆ.ಅರ್ಥ ಮಾಡಿಕೊಂಡರೆ ನಾವು ಹೇಗಿರಬೇಕು ಎಂಬುದನ್ನೂ ಇವುಗಳು ನಮಗೆ ಕಲಿಸುತ್ತಿರುತ್ತವೆ.ಸಹನೆ ಶಾಂತಿ ಗಂಭೀರತೆ ಮತ್ತು ಚೇತೋಹಾರೀ ಗುಣಗಳು....... ನನ್ನ ಮನಸ್ಸು ಯೋಚಿಸುವುದನ್ನೂ ನಿಲ್ಲಿಸಿತು, ಇಲ್ಲ ಇವತ್ತು ಎಂದಿನಂತಿಲ್ಲ ಈ ಜಾಗ. ಇವತ್ತು ಏನನ್ನೋ ಅಡಗಿಸಿಕೊಂಡಂತಿದೆ. ಯಾವುದೋ ರಹಸ್ಯ..? ನನಗೇ ನಗು ಬಂತು ಇಲ್ಲಿ ಯಾವ ರಹಸ್ಯ ಅಡಗಿಸಿಡಲು ಸಾಧ್ಯ..? ಇವತ್ಯಾಕೋ ಜಾಸ್ತಿಯೇ ಹಿಮ (ಮಂಜು) ಆವರಿಸಿದೆ ಅನ್ನಿಸಿತ್ತು.ಮೂರ್ನಾಲ್ಕು ಅಡಿ ಮುಂದೆ ಏನಿದೆ ಅಂತ ಗೊತಾಗದಂತೆ ಆವರಿಸಿದೆ ಹಿಮ( ಮಂಜು). ಆದರೂ ನಿರ್ಭಾವುಕವಾಗಿ ( ಈ ಶಬ್ದ ಯಾಕೀಗ..?) ಯಾಂತ್ರಿಕ ನಡೆ. ಆಗಲೇ ಅದು ಕಾಣಿಸಿತು. ಅಸ್ಪಷ್ಟವಾಗಿ. ಕದಲ್ಲುತ್ತಿದೆಯಾ ನಿಶ್ಚಲವಾ ಅಂತಾನೂ ಗೊತ್ತಾಗಿರಲಿಲ್ಲ. ಮನಸ್ಸು ಮುಂದೆ ಹೆಜ್ಜೆ ಹಾಕಲು ಅನುಮಾನಿಸುತ್ತಿರಬೇಕಾದರೆ, ಮುಂದಿನ ಸೆಕೆಂಡಿನ ಕೆಲವೇ ಅಂಶಗಳಲ್ಲಿ ನನ್ನ ಮೇಲೆ ಆಕ್ರಮಣ ಮಾಡಲು ಅಣಿವಾಗುತ್ತಿರುವ ಸಿಟ್ಟಿಗೆದ್ದ , ಜೊಲ್ಲು ಸುರಿಯುತ್ತಿರುವ ತೆರೆದ ಬಾಯಿ ,  ಮಡಿಸಿಕೊಂಡ ಬಾಲ,  ಕೆಂಪು ಕಣ್ಣಿನ ಉಗ್ರ ದೈತ್ಯಾಕಾರದ  ನಾಯಿ..? ಓಡಲೂ ಕಾಲು ಗಳು ಮನಸ್ಸಿನ ಆಜ್ಞೆಯನ್ನು ಸ್ವೀಕರಿಸುತ್ತಿಲ್ಲ. ಯಾಕೆ ನನ್ನ ದೇಹ ನನ್ನ ಮನಸ್ಸಿನಾಣತಿಯನ್ನು  ಸ್ವೀಕರಿಸುತ್ತಿಲ್ಲ.?..? ಎಲ್ಲಕ್ಕಿಂತ ನನ್ನ ಮನಸ್ಸನ್ನು ಘಾಸಿ ಮಾಡಿದ ವಿಷಯ . ಇದು ನನ್ನ ಆಲಿವ್, ನಾನೇ  ಅಕ್ಕರೆಯಿಂದ ಸಾಕಿದ, ನನ್ನ ಕೈಯಾರೆ ಬಾಟಲಿಯಲ್ಲಿ ಹಾಲು ಕುಡಿಸಿ ಎತ್ತಿಕೊಂಡು ಲಲ್ಲೆಗೆರೆಯುತ್ತಾ ಮನೆಯೆಲ್ಲಾ ತಿರುಗುತ್ತಾ, ಮಗುವಿನಂತೆ ಮನೆಯ ಸದಸ್ಯನಂತೆ ಎಣಿಸಿ ಸಾಕಿದ ನಾಯಿ. ಪ್ರಪಂಚದಲ್ಲಿ ಯಾವುದೇ ಜೀವಿಗಿಂತಲೂ ಹೆಚ್ಚಾಗಿ ಕ್ರತಜ್ಞತೆಯನ್ನು ಪ್ರೀತಿಯಲ್ಲಿ ಮಾತ್ರವೇ ಕೊಡಲು ಸಮರ್ಥತೆಯುಳ್ಳ ಈ ಪ್ರಾಣಿ ಈಗ ಮಾತ್ರ ತನ್ನ ಅನ್ನ ಕೊಟ್ಟವನನ್ನೇ ಗುರುತಿಸದೇ,  ಜನ್ಮ ಜನ್ಮಾಂತರದ ವೈರಿಯಂತೆ ನನ್ನನ್ನೇ ಇತಿಶ್ರೀ ಮಾಡಲು ಹೊಂಚಿ ಕಾದಿತ್ತಾ..?

ಬಾಲ್ಯದಲ್ಲಿ ನನ್ನ ಗೆಳೆಯನ ಅಣ್ಣನಿಗೆ ಹುಛ್ಚು ನಾಯಿ ಕಡಿದದ್ದಕ್ಕೆ ಅವನಿಗಾದ ಬವಣೆ ನನ್ನ ಮನಸ್ಸಿನಿಂದ  ಇಂದೂ ಮರೆಯಾಗಿಲ್ಲ. ಅವನನ್ನು ಒಂದು ಪಂಜರದಲ್ಲಿ ಕಟ್ಟಿ ಹಾಕಿದ್ದರು. ಆತ ಹುಚ್ಚು ನಾಯಿಯಂತೆಯೇ ಸರಳನ್ನೆಲ್ಲಾ ಕಚ್ಚುತ್ತಾ ಮುಲುಗುತ್ತಿದ್ದ. ನನಗೂ ಹಾಗೇ ಆಗುತ್ತಾ..? ಇನ್ನೂ ಇದಕ್ಕೆ ಔಷಧಿ ಕಂಡು ಹಿಡಿದಿಲ್ಲವೇ..

ಆಗಲೇ ನನಗೆ ಯಾವುದೋ ಕಾದಂಬರಿಯ ಸಾಲುಗಳು ನೆನಪಾದವು.

"ರೆಬೀಸ್ ಬರದಂತೆ ತಡೆಯಲು ವ್ಯಾಕ್ಸಿನ್ ಇದೆಯೇನೋ ಹೊರತಾಗಿ ಬಂದ ಮೇಲೆ ಯಾರೂ ಏನೂ ಮಾಡಲೂ ಸಾಧ್ಯವಿಲ್ಲ. ಮನುಷ್ಯನಿಗೆ ಯಾವಾಗಲಾದರೂ ಯಾವುದೋ ರೀತಿಯಲ್ಲಿ ಸಾವು ತಪ್ಪದಾದರೂ ಆದರು ರ್ಯಾಬೀಸ್ ಮೂಲಕ ಬರುವ ಸಾವು ಶತೃಗಳಿಗೂ ನಾವು ಬಯಸದಷ್ಟು ನಿಕೃಷ್ಟವಾಗಿರುತ್ತದೆ. ಮುಖದಲ್ಲಿ ಆತಂಕ. ರಾತ್ರೆಯಂತೂ ನಿದ್ದೆಯೇ ಇರದು. ಸ್ವಲ್ಪ ಸಪ್ಪಳವಾದರೂ ಮುಟ್ಟಿದರೂ ಬೆಚ್ಚಿ ಬೀಳುತ್ತಾನೆ. ಉಚ್ಚ್ವಾಸ ನಿಶ್ವಾಶಗಳವೇಗ ಹೆಚ್ಚಿ ಕಣ್ಣು ಮುಖ ಗಂಟಲಿನ ಮಾಂಸ ಖಂಡಗಳಿಗೆ ಪಕ್ಷವಾತ ಬಂದು ನುಂಗಲಾಗದ ಜೊಲ್ಲು ಹೊರಕ್ಕೆ ಉಕ್ಕುತ್ತಿರುತ್ತದೆಮೂತ್ರ ಕೋಶಕ್ಕೂ ಹಬ್ಬಿ ಮೂತ್ರ ನಿಂತು ಹೋಗಿ ಹೊಟ್ಟೆಯುಬ್ಬಿ, ಈ ಎಲ್ಲಾ ಶರೀರದಲ್ಲಿನ ಬದಲಾವಣೆಗೆ ಹುಚ್ಚರಾಗುತ್ತಾರೆ. ಫಿಟ್ಸ್ ನಲ್ಲಿ ಮಾಂಸ ಖಂಡಗಳು ಬಿಗಿದುಕೊಂಡು ಅವು ಸಡಿಲವಾಗದೇ ಇರೋದ್ರಿಂದ ಹೃದಯ ಕೂಡಾ ಒಂದು ವಾರದಲ್ಲಿ ನಿಂತೇ ಹೋಗುತ್ತೆ"

ಕ್ಷಣದಲ್ಲಿ ನನ್ನ  ಕಣ್ಣು ಮುಚ್ಚಿತ್ತು, ನಾನು ಧಡಕ್ಕನೆ ಕೆಳಗೆ ಬಿದ್ದಿದ್ದೆ.. ಆ ದೈತ್ಯಾಕಾರದ ಆಲಿವ್ ತೆರೆದ ಬಾಯಿಯಿಂದ ಬೀಳುತ್ತಿರುವ ಜೊಲ್ಲಿನ ಜತೆ  ಎದೆಯ ಮೇಲೆಯೇ ತನ್ನ ಮುಂದಿನ ಕಾಲೂರಿ ನಿಂತಿತ್ತು, ಯಾವ ಕ್ಷಣದಲ್ಲೂ  ನನ್ನ ಮ್ರತ್ಯುವನ್ನು ಅಹ್ವಾನಿಸುತ್ತ. ನಾನು ಕಣ್ಣು ಮುಚ್ಚಿಕೊಂಡೆ, ಮುಂದಿನ ಗಳಿಗೆಯನ್ನು ಎದುರಿಸಲು.


೨.   ಪೀಠಿಕೆ

ಯಾಕೆ ನನ್ನ ಚಿನ್ನ ..? ಇವತ್ಯಾಕಿಷ್ಟು ಬೇಸರ?
ಅಲ್ಲರಿ ನಮ್ಮ ಪುಟ್ಟ ಇವತ್ತು ಊಟವೂ ಮಾಡುತ್ತಿಲ್ಲ.
ಯಾಕೆ ಶಾಲೆಯಿಂದ ಬರುತ್ತಿರಬೇಕಾದರೆ ಏನನ್ನೋ ತಿಂದು ಬಂದಿರ ಬೇಕು.
ಇಲ್ಲ ಇವತ್ತು ಶಾಲೆಗೆ ಹೋಗಲೇ ಇಲ್ಲ ಆತ , ರೂಮಿನಲ್ಲೇ ಇದ್ದಾನೆ, ಬೆಳಗಿನಿಂದ ಹೊರಗೂ ಬಂದಿಲ್ಲ
ಯಾಕೆ ಏನಾಯ್ತು,  ಅಂದರೆ ಏನೋ ದೊಡ್ಡ ಬೇಡಿಕೆಯೇ ಇರಬೇಕು.
ಅದೇ ನಿನ್ನೆ ಹೇಳಿದ್ದೆನಲ್ಲಾ, ಅವನಿಗೆ ಡ್ರಮ್ಸ್ ಸೆಟ್ ಬೇಕಿತ್ತಂತೆ,
ನೆನ್ನೆಯೇ ಹೇಳಿದ್ದೆನಲ್ಲ, ಅವನು ಕೇಳಿದ ಸೆಟ್ ಗೆ ಮತ್ತು ಅದನ್ನು ಕಲಿಯುವದಕ್ಕೆ ಕನಿಷ್ಟವೆಂದರೂ ಒಂದು ಲಕ್ಷ ಬೇಕು ನನ್ನಲ್ಲಿ ಅಷ್ಟು ಹಣವಿಲ್ಲವಲ್ಲ  ಈಗ.
ಅದು ಅವನಿಗೆ ಗೊತ್ತಾಗಬೇಕಲ್ಲ, ಅವನದ್ದೊಂದೇ ರಾಗ, ಬೇಕೇ ಬೇಕು ಅಂತ. ಅಲ್ಲಾರಿ ನಾನೊಂದು ಮಾತು ಹೇಳಲಾ?
"ಹೇಳು.."
"ನನ್ನ ಹತ್ತಿರ ಒಡವೆಗಳಿವೆಯಲ್ಲಾ, ನಾನಂತೂ ಅವುಗಳನ್ನು  ಉಪಯೋಗಿಸುತ್ತಿಲ್ಲ, ಹೊರಗಡೆ ಕಳ್ಳ ಕಾಕರ ಸರ ಎಳೆಯುವವರ ಭರಾಟೆ. ಇದನ್ನೇ ಅಡವಿಟ್ಟು ಹಣ ಹೊಂದಿಸಿದರೆ ಆಯ್ತಲ್ಲಾ..?"
ಇದು ಮಾತ್ರ ಬೇಡವೇ ಬೇಡ, ನಾನು ಪ್ರೀತಿಯಿಂದ ನಿನಗೆ ಮಾಡಿಸಿದ್ದು ಅದು, ಅದಕ್ಕೆ  ಕಷ್ಟ ಪಟ್ಟಿದ್ದೆಷ್ಟಂತ ನಿನಗೇ ಗೊತ್ತು.
ನಾನೇ ನು ಮಾರಲು ಹೇಳಿದೆನಾ ನಿಮಗೆ..?   ನಂತರ ಅದನ್ನು ವಾಪಾಸು ತೆಗೆದುಕೊಂಡರಾಯ್ತು.
ಆದರೆ....
ಆದರೆ  ಹೋದರೆ ಏನಿಲ್ಲ, ನಾನು ಹೇಳಿದ್ದು ಕೇಳಿ. ಈಗ.
...........................................................

ಆದರೆ ಬಿಡಿಸಲು ಸಮಯದ, ಹಣದ ಅಭಾವವಾದಲ್ಲಿ ಅದು ಕೈತಪ್ಪಿ ಹೋಯಿತೆಂದೇ ಅರ್ಥ. 
ಹೀಗೆ ಹೋದದ್ದು ಅದೊಂದೇ ಅಲ್ಲ, ಪ್ರತಿಯೊಬ್ಬರ ಉಪವಾಸಕ್ಕೂ ಒಂದೊಂದು.
ಅಂತಹ ಸಂಸಾರಗಳೆಷ್ಟಿವೆಯೋ ಜಗದಲ್ಲಿ.
ಕೇಳುವ ಹೇಳುವ  ಹದಿನೈದು ಸಂವತ್ಸರಗಳು ಹೀಗೆಯೇ ಕೊಚ್ಚಿ ಹೋದವು
ಇದೇ ಅಲ್ಲವೇ  ಸ್ವಾರ್ಥದ ಪ್ರೀತಿಯ ಮಾಯೆ.

೩.  ಭ್ರಮೆ

"ನಮಸ್ಕಾರ"    ಶಬ್ದ ಕೇಳಿ ತಲೆಯೆತ್ತಿದೆ
"ನೀವೇನಾ ಕೃಷ್ಣ ಕುಮಾರ್, ನಿಮ್ಮ ಪರಿಚಯವಾದದ್ದು ತುಂಬಾ ಸಂತೋಷ."  ಸ್ವಲ್ಪ ತಡೆದು "ಏಯ್ ನೆನಪಾಗಿಲ್ಲವಾ. ನಾನು ಕೆ ಸಿ " ಎಂದನಾತ ಶುದ್ಧ  ಹಿಂದೀಯಲ್ಲಿ .
ಆಗಲೇ  ಹಳತೆಲ್ಲಾ ಪಕ್ಕನೆ ನೆನಪಾಯ್ತು,
ಕೆಲವೇ ಕ್ಷಣಗಳಲ್ಲಿ ನಾವು ಎಲ್ಲವನ್ನೂ ಜ್ಞಾಪಿಸಿಕೊಂಡು ಬಿಟ್ಟೆವು.
ನಾನೂ ಈತನೂ ಸುಮಾರು ೮-೧೦ ವರ್ಶಗಳ ಹಿಂದೆ ಜತೆಯಲ್ಲೇ ಇದ್ದೆವು. ನಮ್ಮದು ಪ್ರತಿ ಮೂರು ವರುಷಕ್ಕೊಮ್ಮೆ ಗುಳೆ ಏಳುವ ಸಂಪ್ರದಾಯದ ಕೆಲಸ.
ಆಗ ಸಿಕ್ಕಿದ ದಿಲ್ದಾರ್ ಸ್ನೇಹಿತ.  ಈತ ಹೆಸರು ಕಾಳಿಚರಣ್ ಸಿಂಘ್, ನಾವೆಲ್ಲಾ ಈತನನ್ನು ಕೆ ಸಿ ಎಂತಲೇ ಕರೆಯುತ್ತಿದ್ದೆವು. ನಾವಿಬ್ಬರೂ ಸಂಸಾರಸ್ಥರಾಗುವ ಮೊದಲೇ  ಸ್ನೇಹ ಬೆಳೆದು ಬಂದುದರಿಂದ ಹಳ್ಳಿಯ ನೆಲೆಯಿಂದ ಬಂದ ಆತನ ಶ್ರೀಮತಿಯೂ ನನ್ನ ಮನೆಯವರನ್ನು ಹೊಂದಿಕೊಂಡಿದ್ದಳು. ಆತನ ಇಬ್ಬರು ಮಕ್ಕಳೂ ನಮ್ಮಿದುರೇ ಬೆಳೆದರು. ಸರಿ ಸುಮಾರು ೯-೧೦ ವರುಷ ನಮ್ಮ ಸಂಸಾರ ಜತೆಯಲ್ಲೇ ಇದ್ದು, ನಮ್ಮ ಪ್ರತೀ ವರ್ಗಾವಣೆಯೂ ಸರಿ ಸುಮಾರು ಹತ್ತಿರ ಹತ್ತಿರವೇ ಇದ್ದುದರಿಂದ, ಸ್ವಾಭಾವಿಕವಾಗಿ ನಾವು ಮನೆಯವರ ಹಾಗೆ ಹೊಂದಿಕೊಂಡಿದ್ದೆವು. ಹಬ್ಬ ಹರಿದಿನಗಳಲ್ಲಿ ಅವರ ನಮ್ಮ ಸಂಭಂಧಿಗಳೂ. ಅವನ  ತುಡುಗ ತುಂಟ ಮಕ್ಕಳಿಗೂ ನಾನು ಪಾಠ ಹೇಳಿಕೊಡುವ ಮಾಸ್ಟರ್, ಅವುಗಳು  ಸ್ವಲ್ಪ ಮನುಷ್ತ್ಯರಂತಾಗಲು ನಾವಿಬ್ಬರೂ ಕಾರಣರಾಗಿದ್ದೆವು. ಆತ ಒಮ್ಮೆ ಊರಿಗೆ ಹೋಗಿದ್ದಾಗ, ಖಾಯಿಲೆ ಬಿದ್ದ ಮಕ್ಕಳನ್ನೂ ಆತನ ಶ್ರೀಮತಿಯವರನ್ನೂ ಕಾಳಜಿಯಿಂದ ನೋಡಿಕೊಂಡಿದ್ದೆವು.
ದೆಹಲಿಯಲ್ಲಾತ ಈಗ ಸೆಟಲ್ ಆಗಿದ್ದಾನೆ.
ಕ್ಲಾಸಿನಲ್ಲಿ ಹಿಂದೆ ಬಿದ್ದಿರುತ್ತಿದ್ದ ಆತನ ಶೈತಾನ್ ಮಕ್ಕಳು ಈಗ ಟ್ಯುಟೋರಿಯಲ್ ನಡೆಸುವಲ್ಲಿ ಅಪ್ಪನ ಜತೆ ಸೇರಿದ್ದವಂತೆ.
ತನ್ನ ಜೀವಿತಾವಧಿಯಲ್ಲಿ ಸೇರಿಸಿಟ್ಟ ಹಣದಿಂದ ಟ್ಯುಟೋರಿಯಲ್   ಆರಂಭಿಸಿದ ಈತ ಅದನ್ನೇ ಮಕ್ಕಳಿಗೆ ವಹಿಸುವ ಇರಾದೆ ಹೊಂದಿದ್ದಾನೆ.
ಅದೂ ಸರಿಯೇ,ಆತನಿಗೆ ಬೀಪಿ ಮತ್ತು ಶುಗರ್ ಕೂಡಾ ಇವೆಯಂತೆ. ಮೊದಲಿಗಿಂತ ಸ್ವಲ್ಪ ಹೆಚ್ಚಿಗೆಯೇ  ದಪ್ಪವಾಗಿ ಆತನ ದೇಹ ಕೂಡ ಅದನ್ನೇ ಉಸುರುತ್ತಿತ್ತು. .
ನನಗೂ , ಅವನಿಗೆ ವಿಶ್ರಾಂತಿಯ ಅವಶ್ಯಕತೆಯಿದೆ ಅನ್ನಿಸಿದ್ದರೂ,  ಮಂಗಗಳಂತಹಾ ಮಕ್ಕಳಿಗೇ ಎಲ್ಲವನ್ನೂ ಕೊಡುವುದು ಅದೇಕೋ ಸರಿ ಕಾಣಲಿಲ್ಲ
 "ಸರಿಯಪ್ಪಾ, ನಿನಗೆ ಈಗ ಬೇಕಾದದ್ದು ವಿಶ್ರಾಂತಿ. ಆದರೂ ಪೂರ್ತಿಯಾಗಿ ಮಕ್ಕಳ ಕೈಯಲ್ಲಿ ಕೊಡುವುದು ಉಚಿತವಲ್ಲ " ಎಂದೆ ನಾನು
ಅದೆಲ್ಲಾ ಆಮೇಲೆ ನೋಡೋಣ ಬಿಡು "  ಅಂದ ಹಾಗೆ ಇಲ್ಲಿ ಎಲ್ಲಾ ಚೆನ್ನಾಗಿದೆ ತಾನೇ, ಏನಾದರೂ ಬೇಕಿದ್ದಲ್ಲಿ ಸಂಕೋಚ ಪಡದೇ ಕೇಳು" ಎಂದ
ಹೊಸದಾಗಿ ದೆಹಲಿಗೆ ವರ್ಗವಾಗಿ ಬಂದ ನನಗೆ ಎಲ್ಲವೂ ಅಡಚಣೆಯೇ,
"ಎಲ್ಲಾದರೂ ಇರಲು ಮನೆ ಹೊಂದಿಸಿಕೊಡು ನೋಡುವಾ" ಎಂದೆ.
"ಸಂಕೋಚ ಯಾಕೆ ಯಾರ್  ನನ್ನಲ್ಲಿ,  ದೆಹಲಿಯಲ್ಲಿ ಅದಕ್ಕೇನೂ ಬರಗಾಲವಿಲ್ಲ ಬಿಡು,
ಯಾವಾಗ ಕರೆತರುವ ಯೋಚನೆಯಿದೆ..?ತಿಳಿಸು.ನಿನ್ನ ಸಂಸಾರಕ್ಕೆಇಷ್ಟವಾದ ಮನೆ ಕೊಡಿಸೋದು ನನ್ನ ಜವಾಬ್ದಾರಿ  ಆಯ್ತಾ."
ವಿಶ್ವಾಸದ ಅಲೆ ನನ್ನೆದೆ ತುಂಬಿತು ಹೇಳಿದೆ
 "ಹಾಗಾದರೆ  ಈಗಲೇ ಊರಿಗೆ ಹೊರಟು ನನ್ನ ಸಂಸಾರ  ಆದಷ್ಟು ಬೇಗ  ಕರೆದು ತರ್ತೇನೆ"
 "ಊರಿಂದ ಹೊರಡುವ ಮೊದಲು ನನಗೆ ತಪ್ಪದೇ ಫೋನ್ ಮಾಡು"   .ಆತ ಎಚ್ಚರಿಸಿದ.
ಹೊರಡುವ ಸಮಯದಲ್ಲೂ ಪಕ್ಕದಲ್ಲಿನ ಖಾನ್ ಕೇಸಿಗೆ ಹೇಳಿದ್ದ ಮಾತು ಅಸ್ಪಷ್ಟವೆಂಬಂತೆ ಕೇಳಿಸಿತ್ತು.
 " ನಿಮ್ಮದೇ ಮನೆ ಇದೆಯಲ್ಲ, ಈಗಂತೂ ಸುಮಾರು ದಿನಗಳಿಂದ ಖಾಲಿಯೇ ಇದೆ.......?"


೪. ವರ್ತಮಾನ

ಶ್ರೀಮತಿಗೆ ಕೇಸಿ ಬಗ್ಗೆ ಕೇಳಿಯೇ ಖುಷಿಯಾಗಿತ್ತು.
"ಅಂದ ಹಾಗೆ ಅವನ ಶ್ರೀಮತಿ ಹೇಗಿದ್ದಾಳಂತೆ ಈಗ..?"  ನನಗೆ ಒಮ್ಮೆಲೇ ಪಿಚ್ಚೆನ್ನಿಸಿತು.
"ನಮ್ಮದೇ ಮಾತಿನ ಗುಂಗಿನಲ್ಲಿ ನಾನು ಈ ವಿಷಯವನ್ನು ಮರೆತೇ ಬಿಟ್ಟಿದ್ದೆ....
ಒಮ್ಮೆಲೇ ಕೇಸಿ ಯಮೇಲೆ ಸಿಟ್ಟು ಬಂತು .
ಅವನಾದರೂ ತಿಳಿಸ ಬಾರದಿತ್ತಾ....?.
ಆದರೂ ನನ್ನವಳನ್ನು ಸಂತೈಸಲು ಹೇಳಿದ್ದೆ 
 "  ನೀನೇ ಕೇಳಿಕೋ.... ಹೇಗಿದ್ದರೂ ಅಲ್ಲಿಗೇ ಹೋಗುತ್ತೆವಲ್ಲ...!!"
ಮನೆಯಿಂದ ಹೊರಡುವ ಮುನ್ನ ನಾನು  ದೆಹಲಿಯಲ್ಲಿನ  ಕೆ ಸಿಂಘ್ ಗೆ  ಫೋನ್ ಮಾಡಿದೆ.
ಆದರೆ ಆಗ ಆತ ಯಾವುದೋ ಬೇರೆಯೇ ಲೋಕದಲ್ಲಿದ್ದ ಹಾಗಿತ್ತು.
"ಆಯ್ತು ಬನ್ನಿ"  ಅಂದಷ್ಟೇ ಹೇಳಿದ್ದ.
ಅಂತೂ ದೆಹಲಿಯಲ್ಲಿ ರೈಲಿನಿಂದ ಇಳಿದ ನಾವು ಸಿಂಘ್ ಹೇಳಿದಂತೆ ಅವನಿರುವ ರೋಹಿಣಿಯಲ್ಲಿನ ಅಪಾರ್ಟ್ಮೆಂಟ್ ಗೇ ಹೊರಟೆವು.
ನನ್ನ ಬೆಳಗಿನ ಫೋನ್ ಗಾಗಿ ಕಾಯದೇ ಆತನೇ ನನ್ನ ಬಳಿ ಬಂದ.
ನಮ್ಮನ್ನು ಅವನದ್ದೇ ಆದ ಮಕಾನಿಗೆ ಕರೆದೊಯ್ದ.
ಅದು ಆತ ತನ್ನ ಬದುಕಿನೆಲ್ಲಾ ಸಂಪತ್ತನ್ನು ಧಾರೆಯೆರೆದು ಸಂಪಾದಿಸಿಕೊಂಡ ಮಹಲು.
ಮೇಲಿನ ಎರಡೂ ಅಂತಸ್ತನ್ನು  ಟ್ಯುಟೋರಿಯಲ್ಸ್ ಗಾಗಿ ಉಪಯೋಗಿಸುತ್ತಿದ್ದಾರೆ.
ಕೆಳಗಡೆಯ ಮನೆಯಿಂದ ಸಿಂಘ್ ಗೆ ಬಾಡಿಗೆ ಬರುತ್ತಿತ್ತು. ಈಗ್ಗೆ ಕೆಲವು ಸಮಯದಿಂದ ಖಾಲಿಯಿದ್ದಂತಿತ್ತು.
ತನ್ನ ಮಕ್ಕಳನ್ನು ಚೆನ್ನಾಗಿ ಪ್ರೀತಿ ಅಕ್ಕರೆಯಿಂದ  ತನ್ನೆಲ್ಲಾ ಪ್ರೀತಿ ಧಾರೆಯೆರೆದ ಸಿಂಘ ಅವರನ್ನು ದೊಡ್ದವರನ್ನಾಗಿ ಮಾಡಲು ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನೂ ಬದಿಗೊತ್ತಿದ್ದ. ಕಲಿಯಲು ಹೆಚ್ಚೇನೂ ಆಸಕ್ತಿ ತೋರಿಸದಿದ್ದ ಅವರನ್ನು ತಮ್ಮ ಕಾಲ ಮೇಲೆ ನಿಂತುಕೊಳ್ಳುವಂತೆ ಮಾಡಲು ತನ್ನದೇ ಈ ಜಾಗದಲ್ಲಿ ಟ್ಯುಟೋರಿಯಲ್ ಒಂದನ್ನು ತೆರೆದಿದ್ದ.
ಮಕ್ಕಳು ಕಲಿತದ್ದಕ್ಕೆ ಹೊರಗಡೆ ಕೆಲಸ ಸಿಗದೇ ಇದ್ದರೂ  ಇಲ್ಲಿ ತಿಂಗಳಿಗೆ ನಲವತ್ತು ಐವತ್ತು ಸಾವಿರ ಸಂಪಾದಿಸುತ್ತಿದ್ದಾರೆ ಎನ್ನುತ್ತಿದ್ದ.
 ಸಿಂಘ ನ ಮಾತಿನಲ್ಲಿ ಅವನ ಮಕ್ಕಳ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೆಂಬಂತಿತ್ತು. ಇಬ್ಬರೂ ತಂದೆ ತಾಯಿಯವರನ್ನು ದೇವರಂತೆ ಕಾಣುತ್ತಿದ್ದಾರೆ, ಇಂತಹ ಮಕ್ಕಳಿರುವುದೇ ತಂದೆ ತಾಯಿಯವರ ಭಾಗ್ಯ ಎಂದೆಲ್ಲಾ ಹೇಳುತ್ತಿದ್ದನಾದರೂ ಯಾವುದೋ ಒಂದು ಯೋಚನೆ ಆತನನ್ನು ಕಾಡಿದಂತಿತ್ತು.
"ನಮಸ್ತೇ ಭಾಭೀಜಿ ಹೇಗಿದ್ದೀರಾ..?"
 ನನ್ನ ಶ್ರೀಮತಿ ನಕ್ಕು ವಂದಿಸಿದಳು. "ನಿಮ್ಮ ಶ್ರೀಮತಿಯವರು ಹೇಗಿದ್ದಾರೆ ಅವರು ಯಾಕೆ ಬಂದಿಲ್ಲ"
  "  ಅವಳು ಬರುವ ಸ್ಥಿತಿಯಲ್ಲಿಲ್ಲ ,"   ಒಮ್ಮೆಲೇ ಅನ್ಯ ಮನಸ್ಕನಾದ ಕೇಸೀ.
"ರೈಲಿನಲ್ಲಿ ಬರುವಾಗಲೇ ನೀವು ಭಾಭೀಜಿ ಕಟ್ಟಿ ತಂದ ತಿಂಡಿಯೆಲ್ಲಾ ಮುಗಿಸಿರಬಹುದಲ್ಲಾ " ಎಂದ ಆತ ನನ್ನ ಉತ್ತರಕ್ಕೂ ಕಾಯದೇ.
"ಹತ್ತಿರದಲ್ಲೇಒಂದು ವೈಷ್ಣೋ ಧಾಭಾ ಇದೆ, ನಿಮಗೆಲ್ಲಾದರೂ ಹೊರಗಡೆ ಒಳ್ಳೆಯ ಶುದ್ಧವಾದ ಅಚ್ಚುಕಟ್ಟಾದ ರುಚಿಯಾದ , ತಿಂಡಿ ಊಟ ತಿನ್ನ ಬೇಕೆನಿಸಿದರೆ , ತೋರಿಸುತ್ತೇನೆ ಬಾ ,   ಎಂದು ಕರೆದೊಯ್ದಿದ್ದ
ನಮಗೆ ರೋಹಿಣಿಯಲ್ಲಿ  ಊಟ ತಿಂಡಿಗೂ  ಪರದಾಡ ಬೇಕಾದ ಪರಿಸ್ಥಿತಿಯಿರಲಿಲ್ಲ ನಿಜ . ಶ್ರೀಮತಿಗಂತೂ ಎಲ್ಲಾ ಕಡೆ ಸಸ್ಯಾಹಾರಿಗಳೇ  ಕಾಣಿಸಿದರಂತೆ. ಒಂದೇ ಒಂದು ಸಮಸ್ಯೆ ಎಂದರೆ ಎಲ್ಲಾ ಕಡೆ ಹೋಟೆಲ್ಲುಗಳು ಧಾಭಾಗಳು ಬೆಳಗ್ಗೆ ತೆರೆಯುವದೇ ಹತ್ತು ಹನ್ನೊಂದು ಘಂಟೆಯ ನಂತರ, ಇದೊಂದೇ ನಮಗೆಲ್ಲಾ ಬೆಳಗಿನ ದೊಡ್ಡ ತೊಡಕು.  ಬೆಳಿಗ್ಗೆ ಬೇಗ ಏಳುವ ಅಭ್ಯಾಸವಾಗಿದ್ದು,  ಇಲ್ಲಿನ ವ್ಯಾಪಾರಸ್ಥರ ರೀತಿಯ ರಾತ್ರೆ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳುವವರಲ್ಲವಲ್ಲ. ಹೊಟ್ಟೆಯ ಕೂಗು ಬೆಳಗಿನ ಎಂಟೂವರೆಗೇ ಬಂಬಡಾ ಬಾರಿಸುತ್ತಿರುತ್ತದೆ.
"ನಿಮ್ಮನ್ನು ನನ್ನ ಮನೆಗೇ  ಕರೆದು ಕೊಂಡು ಹೋಗಬಹುದಿತ್ತು.ಇವತ್ತು ನಮ್ಮ ಮನೆಯಲ್ಲಿ ಮಾಂಸಾಹಾರ, ಅಲ್ಲದೇ ಆದರೆ ಅಲ್ಲಿಯೂ ಈ ಟ್ಯೂಷನ್ ಹಾವಳಿಯಿದೆ. ನಿಮಗೆ ತೊಂದರೆ ಯಾಗಬಾರದಲ್ಲಾ,  ಬೇರೆ ಮನೆ ದೊರಕುವವರೆಗೆ ಇಲ್ಲಿಯೇ ಇರಿ"  ಎಂದಿದ್ದ ಕಾಳಜಿಯಿಂದ. ಕೇಸೀ.
"ಕೆ ಸಿ ನೀನು  ಇಷ್ಟು ಮಾಡಿದ್ದೇ ಹೆಚ್ಚು " ಎಂದೆಪ್ರೀತಿಯಿಂದ.
ಸಂಜೆ ನಾನೂ ನನ್ನ ಶ್ರೀಮತಿ  ಹೊರ ಸಂಜೆ ಯಾನ ಹೊರಟೆವು. ಹತ್ತಿರದಲ್ಲೇ ಕಂಡು ಬಂದ ಒಬ್ಬ ಪ್ರಾಪರ್ಟಿ ಡೀಲರ್ ಅಂಗಡಿಯಲ್ಲಿ ವಿಚಾರಿಸಿದೆವು. ಆತ ಬೆಳಿಗ್ಗೆಯೇ ಮೂರ್ನಾಲ್ಕು  ಮನೆ ತೋರಿಸುವ , ಅದರಲ್ಲೊಂದಾದರೂ ನಮಗೆ ಮೆಚ್ಚುಗೆಯಾಗುವ ಬರವಸೆಯಿತ್ತ.
ಶ್ರೀಮತಿಯನ್ನು ಮನೆಯ ಹತ್ತಿರ ಬಿಟ್ಟು ನಾನು ಸಿಂಘ್ ಮನೆಯತ್ತ ನಡೆದೆ.
ಹೋಗದಿದ್ದರೇ ಒಳ್ಳೆಯದಿತ್ತು ಅನ್ನಿಸುತ್ತಿದೆ ಈಗ.

೫. ಪ್ರಕೃತ

" ಯಾರನ್ನು ಕೇಳಿ  ಕೊಟ್ಟಿರಿ ನಮ್ಮ ಮನೆಯನ್ನು ನಿಮ್ಮ ಸ್ನೇಹಿತನಿಗೆ"

ಹಾಗಲ್ಲ ಮಗಾ, ಅವನು ನನ್ನ ಪ್ರಾಣ ಸ್ನೇಹಿತ , ನೀವೆಲ್ಲಾ ಸಣ್ಣವರಿರುವಾಗ ಎಷ್ಟು ಸಹಾಯ ಮಾಡಿದ್ದಾನೆ ಗೊತ್ತಾ..? " ಇದು ಕೇಸಿ ಯ ಸ್ವರವಲ್ಲವೇ..?

ನಾನು ಬಾಗಿಲು ತಟ್ಟಲು ಅನುಮಾನಿಸಿದ್ದೆ.

ಕಂಡರೂ ಕಾಣದಂತಿದ್ದ ತೆರೆದ ಬಾಗಿಲಿನ ಸಂದಿಯಲ್ಲಿ  ಮೇಜಿನ ಮೇಲಿದ್ದ ಅರ್ಧ ಮಧು ತುಂಬಿದ ಗ್ಲಾಸ್ ಮುಂದಿನ ಕಥೆ ಸಾರಿ  ಹೇಳುತ್ತಿತ್ತು.

"ನೋಡಪ್ಪಾ ನೀನೀಗ ನಮ್ಮ ಮೇಲೆ ಅವಲಂಬಿತ , ಅದಕ್ಕೇ ನಾನು ಹೇಳಿದಂತೆ ಕೇಳಲೇಬೇಕು.  ಹಿಂದೆ ನಡೆದದ್ದು,  ಮರೆತು ಬಿಡು ,ದೆಹಲಿಯಲ್ಲಿ ಬೇಕಾದಷ್ಟು ಮನೆಗಳಿವೆ ಬಾಡಿಗೆಗೆ, ಅವರಿಗೆ  ನಮ್ಮದೇ ಮಕಾನು ಅಗ ಬೇಕಂತಿಲ್ಲ, ನಾನು ಅದನ್ನು ನನ್ನ ಸ್ನೇಹಿತನಿಗೇ ಕೊಡುತ್ತೇನೆ."

"ಅಲ್ಲಾ.... ಅವನ ಋಣವೇ ಸಾಕಷ್ಟಿದೆ ತೀರಿಸಲು, ಮನೆ ಕೊಟ್ಟಾದರೂ ತೀರಿಸಬಹುದಲ್ಲಾ..., ನೋಡಪ್ಪಾ ನನ್ನ ಕಾರು ಮಾರಿದೆ, ನಾನೇನೂ ಹೇಳಲಿಲ್ಲ, ಅಮ್ಮನ ಹೆಸರಿಗಿದ್ದ ಮನೆಯನ್ನೂ ಮೋಸದಿಂದ ತಿಂದು ತೇಗಿದೆ, ಅದೇ ವ್ಯಥೆಯಿಂದ ಅವಳೂ ಕಣ್ಮುಚ್ಚಿದಳು.   ಅಂತಿಮ ಕಾಲಕ್ಕೆಂದು ಕೂಡಿಟ್ಟ ಹಣ ವನ್ನೂ ನೀರಿನಂತೆ ಖರ್ಚು ಮಾಡಿ ನಿನ್ನ ಚಟಗಳಿಗೆ ಬಲಿಯಾಗಿಸಿಕೊಂಡೆ"  ಕೇಸಿ ಮಾತನಾಡುತ್ತಾ ಆಡುತ್ತಾ ಗದ್ಗದಿತನಾಗಿದ್ದ.

"ಬಾಯ್ಮುಚ್ಚೋ ಮುದುಕಾ  ಸಾಕು ಮಾಡು ನಿನ್ನ ತಲೆ ಹರಟೆ....  ಊಟವಂತೂ ಸಿಗುತ್ತದಲ್ಲಾ....  ಬಿದ್ದಿರು ಮನೆಯ ಮೂಲೆಯಲ್ಲಿ, ನಾವು ಹೇಳಿದ ಹಾಗೆ ಕೇಳಿಕೊಂಡು "  ಕೈಯೆತ್ತಿದ್ದ ಆತನ ಮಗ ಮತ್ತೂ ಮುಂದೆ ಬಂದ.

ಇನ್ನು ಒಂದು ಕ್ಷಣವೂ ನಿಲ್ಲಲಾರೆ ಅನ್ನಿಸಿತ್ತು 
ಅಲ್ಲಿಂದ ಹೊರಬಂದೆ.
ಇವತ್ತು ಬಿದ್ದ ಕನಸಿಗೂ ಈ ಘಟನೆಗೂ ಮನಸ್ಸು ತಾಳೆ ಹಾಕಿತ್ತು.
ಈಗಲೂ ಕೇಸಿಯಲ್ಲಿ ಧೈರ್ಯ ತುಂಬಿ ಬದುಕನ್ನೆದುರಿಸುವ ಛಲ ತುಂಬ ಬಹುದೆನ್ನಿಸಿತ್ತು.
ಅವನು ತನ್ನ ವಿಶ್ರಾಂತಿ ಜೀವನ ಚೆನ್ನಾಗಿ ಕಳೆಯ ಬಹುದಾದಷ್ಟು.
ಹದ್ದು ಸಾಯುವರೆಗೆ ಒಂದೇ ಸಂಗಾತಿಯನ್ನು ಅವಲಂಬಿಸಿರುತ್ತದಂತೆ.
ಪ್ರಾಣಿಗಳಲ್ಲಿಯೂ ಸಹ ಬಾಳ್ವೆಯ ಚಿಂತನೆ ಕಂಡು ಬರುತ್ತದೆ.
ಕಮ್ಮಿಯೆಂದರೆ ಪ್ರಪಂಚದಲ್ಲಿನ ಕನಸು ಕಾಣುವ ಹಕ್ಕು ಮಾತ್ರ ಪ್ರಾಣಿಗಳಿಗೆ ಇರದದ್ದು,
ನಾವು ಕನಸು ಕಾಣುತ್ತೇವೆ ಆದರೆ ಎಂತಹಾ ವೈಪರೀತ್ಯ ನೋಡಿ .
ಪ್ರಾಣಿ ಪಕ್ಷಿಗಳ ಜೀವನದಲ್ಲಿ ಮಕ್ಕಳು ಮರಿಗಳ ಜವಾಬ್ದಾರಿ ಅವುಗಳನ್ನು ಬೆಳೆಸಿ ತನ್ನ ಅನ್ನ ಹುಡುಕಿಕೊಡುವ ವರೆಗೆ ಮಾತ್ರ ಸೀಮಿತ.
ಆದರೆ ನಮ್ಮಲ್ಲಿ....
ಮನುಷ್ಯ ಯಾಕೆ ಇಷ್ಟೊಂದು ಸ್ವಾರ್ಥಿಯಾಗುತ್ತಾನೆ.
ತನ್ನ ಹೆತ್ತವರನ್ನೇ ಕೊಲ್ಲುವಷ್ಟು.?
ಇದು ಬರೀ ಆಸೆಯಾ..?

Saturday, November 3, 2012

ತ್ಯಾಂಪನ ವ್ಯಾಲಂಟೈನ್ ಹಗರಣ


 
 

ಪ್ರೇಮಿಗಳ ದಿನ ಶನಿವಾರ ಬಂದಿತ್ತು.
ರಜೆ ಅಂತಾನೂ ತ್ಯಾಂಪಿಗೆ ಹೇಳದೇ ಹೊರ ಹೊರಟಿದ್ದ ತ್ಯಾಂಪ. 
ಬಸ್ ನಿಲ್ದಾಣಕ್ಕೆ ಬಂದ. ಅದೆಕೋ ಆಗಲೇ ಆತನ ಎದೆಯಲ್ಲಿ ನಗಾರಿ ಕುಟ್ಟಲು ಆರಂಭವಾಯ್ತು.
ಕಾರಣ ಒಂದು ಮಧುರ !!! ದನಿ
"ಮಿ..!!!"
ಅಚಾನಕ್ಕಾಗಿ ಪಕ್ಕಕ್ಕೆ ತಿರುಗಿದ ಈ ಮಿ!!......ತ್ಯಾಂಪ
ಎತ್ತಿ ಕಟ್ಟಿದ ತುರುಬು, ತಂಪು ಕನ್ನಡಕಾರಿಣಿ, ಲವ್ಲೀ ಧಿರುಸು... ಪ್ರೇಮೀ ದಿನಕ್ಕೆ ಹೇಳಿ ಮಾಡಿಸಿದ ಸಂಗಾತಿ..... ಯಾರೀಕೆ..???
ಯಸ್!! ಮಿ... ಮಿ..ತ್ಯಾ ...ತ್ಯಾಂಪ" ಎಂದ ಕುಟ್ಟುತ್ತಿದ್ದ ಎದೆ ನಗಾರಿಯ ತಹಬಂದಿಗೆ ತರಲೆತ್ನಿಸಿ.
ನನ್ನ ನೆನಪಾಗಲಿಲ್ವಾ??? ಮಿ. ಥ್ಯಾಂಪ್??" ಉಲಿದಳು ನಾರಿ ನಗುತ್ತಾ, 
ಅವಳು ನಕ್ಕಾಗ ಮಲ್ಲಿಗೆ ಜಾಜಿ ಸಂಪಿಗೆಗಳ ಪರಿಮಳ... 
ಏನೂ.....ನಗೋದಕ್ಕೂ .. ಹೂವಿನ ಪರಿಮಳಕ್ಕೂ ಯಾವ ಸಂಭಂಧ ಅಂತ ಕೇಳುತ್ತಿದ್ದೀರಾ,.... ಇರಲಿ ಬಿಡಿ.. ಅಂತಹ ಯೋಚನೆಗಳಿಗೆಲ್ಲಾ ಅವನ ತಲೆಗೆಲ್ಲಿ ಪುರುಸೊತ್ತು..???
"ನಾನು ಮಂಜುಳಾ,... ನಿಮ್ಮ ಸ್ನೇಹಿತ ನಾಗೇಶ್ ನ ಪತ್ನಿ, ಆ ದಿನ ನಮ್ಮಲ್ಲಿಗೆ ಬಂದಿದ್ರಲ್ಲಾ, ನನ್ನ ಕೈ ಅಡುಗೆ ತುಂಬಾ ಚೆನ್ನಾಗಿತ್ತೂ ಅಂದಿದ್ರಿ"
"ಯಾ....ವ.... ನಾಗ್...!!! ’ ಥಟ್ಟನೆ ಹಲ್ಲು ಕಚ್ಚಿಕೊಂಡ ತ್ಯಾಂಪ.. 
"ಹೋ... ಹೌದು... ಹೌದೌದು ನೆನಪಾಯ್ತು... ಹೇಗಿದ್ದಾರೆ.. ನಾಗೇಶ್, ತುಂಬಾ ದಿನಗಳಾದುವಲ್ಲ ಅವರನ್ನೂ, ನಿಮ್ಮನ್ನೂ ನೋಡಿ". ಎಂದ ಹಲ್ಲು ಕಿರಿಯುತ್ತಾ ಮುಂದುವರಿಸಿದ.
"ಅಂದ ಹಾಗೇ ಪ್ರೇಮಿಗಳ ದಿನದ ಶುಭಾಶಯ.. ನಿಮಗೆ ಮಂಜುಳಾ ಅವರೇ"
"ಮಿ. ತ್ಯಾಂಪ್, ನೀವು ಬರೇ ಕಂಜೂಸ್ ಕಣ್ರಿ, ಬರೀ ಶುಭಾಶಯ ಮಾತ್ರಾನಾ?? ಇನ್ನೇನಿಲ್ವಾ..?? 
ಅಂದರೆ..?? ತ್ಯಾಂಪನ ಗಾಡಿ ಅಷ್ಟು ಬೇಗ ಇಳಿಯಲ್ಲ ಟ್ರಾಕಿಗೆ.
ಪಕ್ಕದಲ್ಲೇ ಕಾಫೀ ಡೆ ಇರೋವಾಗ..??" ಅವಳೇ ಸಮಜಾಯಿಸಿದಳು.
ಅನಿಯಾರ್ಯವಾಗಿ ತ್ಯಾಂಪ ಹೇಳಲೇ ಬೇಕಾಯ್ತು.. " ಸ್ಸರಿ ಸ್ಸರಿ, ಅಷ್ಟೇತಾನೇ... ನಡೆಯಿರಿ", 
ತ್ಯಾಂಪ ಹಿಂದೆಯೇ ಹೊರಟ.
ಕಾಫಿ ಡೇ..!!! ನಿಜವಾದ ಕಾಫಿಯೊಂದನ್ನು ಬಿಟ್ಟು ಇನ್ನು ಏನ್ ಬೇಕೋ ಅದೆಲ್ಲಾ ಸಿಗುತ್ತೆ ಅಲ್ಲಿ.
ಪೇಮಿಗಳ ದಿನಕ್ಕಾಗಿ ವಿಶೇಷವಾಗಿ ಸಿಂಗರಿಸಿಕೊಂಡಿತ್ತು, ನೋಡಿದಲ್ಲೆಲ್ಲಾ ಕೆಂಪು ಕೆಂಪಿನ ರಿಬ್ಬನ್, ಕೆಂಪು ಗುಲಾಬಿಗಳ ಗುಚ್ಛಗಳು, ಹೃದಯದಾಕಾರದ ಬಲೂನುಗಳು, ಅಲ್ಲಿನ ಪ್ರತಿ ನೆಲ ಕಂಭ, ಮಾಡು ವಿಶೇಷವಾಗಿ ಸಿಂಗರಿಸಿಕೊಂಡಿದ್ದು, ತನ್ನದೇ ಆದ ವಿಶಿಷ್ಟ ( ಪ್ರೇಮ!?!!??)ದ ಘಮಲು ಆವರಿಸಿಕೊಂಡಂತಿತ್ತು, ಇದನ್ನೆಲ್ಲಾ ನೋಡುತ್ತಿರಲು ಆ ಮಂಜುಳಮಣಿಯ ಜತೆಯಲ್ಲಿದ್ದ ತ್ಯಾಂಪನಿಗೆ ನಿಜವಾದ ಮತ್ತೇರಲು ಶುರುವಾಯ್ತು. ಆಮೇಲೇನಾಯ್ತು ಅವನಿಗೆ ಗೊತ್ತಿಲ್ಲ, ಅವನಿಗೆ ನೆನಪಿದ್ದುದು ಬಿಲ್ಲ್ ತೆತ್ತದ್ದು ಮಾತ್ರ.
ಜತೆಗೆ ಅವನಿಗೆ ಗೊತ್ತಿಲ್ಲದುದು ಇನ್ನೊಂದೂ ವಿಷಯವಿತ್ತು. ಇವೆಲ್ಲವನ್ನೂ ಒಂದು ಜೋಡಿ ಕಣ್ಣುಗಳು ನೋಡುತ್ತಿದ್ದವು. 
ಅವು ಈತನ ಬಾಸ್ ಪತ್ನಿ ಕಲ್ಲೂರಾಮಿಯವು.

‍॓॓॓॓॓॓॓॓॓॓॓॓॓॓॓॓॓॓॓॓॓॓॓॓॓॓ ‍॓॓॓॓॓॓॓॓॓॓॓॓॓॓ ‍॓॓॓॓॓॓॓॓॓॓॓॓॓॓॓॓॓॓॓॓॓॓॓॓॓॓ ‍

ನಾನಲ್ಲವೇ ಕರೆದದ್ದು" ತ್ಯಾಂಪನ ಅಳಲು.
ಮತ್ತೆ ಅವಳೇ ಕರೆದ್ಲಾ?? ತ್ಯಾಂಪಿ.
" ಹೌದು ಕಣೇ , ಕಾಫಿ ಕುಡಿಯೋಣ ಬನ್ನೀ ಅಂದಳು, ನಾನು ಹೋದೆ’ತ್ಯಾಂಪ
ಅವಳು ಕರದ್ಲೂ ನೀವು ಹೋದ್ರಿ, .... ನನ್ನ ನೆನಪೂ ಅಗ್ಲಿಲ್ವಾ..??.ತ್ಯಾಂಪಿ
ಅದೇ .. ಅದಕ್ಕೇ ಹೋದೆ ಕಣೇ, ಅಲ್ಲ ನೀನು ಕರೆದ್ರೆ ನಾನು ಇಲ್ಲ ಅಂತೀನಾ, ಅಲ್ಲದೇ ಇವಳು ನಿನ್ನ ಬೆಸ್ಟ್ ಫ್ರೆಂಡ್ ಅಂದಿದ್ದಳಲ್ಲ.., ನಗಾಡ್ತಾ ಕರೆದ್ರೆ ಬೇಡ ಅನ್ನಕಾಗ್ಲಿಲ್ಲ ಕಣೇ..!!"
ತ್ಯಾಂಪಿಗೂ ಗೊತ್ತು ಗಂಡನ ವೀಕ್ನೆಸ್, ಯಾರೇ ನಗಾಡ್ತಾ ಕರದ್ರೂ ಆತ ಇಲ್ಲವೆನ್ನಲಾರ.
"ಸರಿ, ಕಾಫಿ ಕುಡದ್ರಿ, ಆ ಮೇಲೇನಾಯ್ತು..?" ತ್ಯಾಂಪಿ ಡಿಟೆಕ್ಟಿವ್
"ಆಮೇಲೆ ಸರ್ವರ್ ಬಿಲ್ಲ್ ತಂದಿಟ್ಟ."..ತ್ಯಾಂಪ
"ಸರಿ.....?!"
"ಅವಳು... ತನ್ನ ಹತ್ರ ಚಿಲ್ಲರೆ ಇಲ್ಲಾರಿ ಅಂದ್ಲು" ತ್ಯಾಂಪ
ಅದಕ್ಕೇ ನೀವೇ ಕೊಟ್ಬಿಟ್ರಾ...??"
ಹೌದು" ತ್ಯಾಂಪ
ಬಿಲ್ಲ್ ಎಷ್ಟಾಯ್ತು..?? ತ್ಯಾಂಪಿ.
ಬರೇ ಐನೂರು ಚಿಲ್ರೆ’
ಬರೇ... ಐನೂರು ಚಿಲ್ರೆ....?? ಅಲ್ಲರಿ ಬರೇ ಕಾಫಿಗೆ ಐನೂರು ಅಂದರೇನು ಸ್ಟಾರ್ ಹೋಟೆಲ್ ಕೆಟ್ಟೋಯ್ತಾ..??" ತ್ಯಾಂಪಿ
ಅದು ಐಸ್ ಕ್ರೀಮ್ ಕಾಫಿ ಕಣೇ..?? " ತ್ಯಾಂಪ
"ಅದಾದ್ರೂ ಎಷ್ಟಾಗುತ್ತೆ..?? ಅಬ್ಬಬ್ಬಾ ಅಂದ್ರೆ ನೂರೈವತ್ತಾಗುತ್ತಾ..???" ತ್ಯಾಂಪಿ
"ಅಲ್ಲಾ.... ಕಣೇ.. ಇದೂ..."
"ಹಾಂ... ಹೇಳೀ... ಇದೂ....???" ತ್ಯಾಂಪಿ
ಸ್ಪೆಷೆಲ್ ಕಾಫೀ ಕಣೇ, ವ್ಯಾಲಂಟೈನ್ ಸ್ಪೆಷೆಲ್ ಕಾಫೀ ಅದಕ್ಕೇ...??? ಕಡೆಗೂ ತ್ಯಾಂಪ, ಕಾರಣ ಹೇಳಲೇ ಬೇಕಾಯ್ತು.
"ತಡೀರಿ.. ನಾನೂ ಅವಳ ಗಂಡನಿಗೆ ಈಗ್ಲೇ ಫೋನ್ ಮಾಡ್ತೀನಿ..!!" ತ್ಯಾಂಪಿಯ ಟಿಟ್ ಫ಼ಾರ್ ಟ್ಯಾಟ್.
ಯಾ... ಯಾಕೆ?" ತ್ಯಾಂಪ.
ನಾನೂ.... ಅವರನ್ನ..... ಕಾಫಿ ಕುಡಿಯೊಕ್ಕೆ ಕರಿತೀನಿ" ತ್ಯಾಂಪಿ.
"ರಮೇಶ್ ನಿನ್ನ ಜತೆ ಬರಲಿಕ್ಕಿಲ್ಲ ಬಿಡು" ತ್ಯಾಂಪ.
ನಿಮ್ಮ್ನು ಕರೆದದ್ದು ಲಕ್ಷ್ಮಿ ಅಲ್ಲವಾ ಹಾಗಾದರೆ..??" ತ್ಯಾಂಪಿ
ನಾಲಿಗೆ ಕಚ್ಚಿಕೊಂಡ ತ್ಯಾಂಪ, ತನ್ನ ತಪ್ಪು ಗೊತ್ತಾಯ್ತು.....ಲಕ್ಷ್ಮಿ ಅಂದನಾ ತಾನೂ "ಅಲ್ಲಲ್ಲಾ.... ಇವಳು ಗಾಯತ್ರಿ ಕಣೇ"
"ಥೂ.... ನಿಮ್ಮ... ಹಂಗಾರೆ.... ಗ್ಯಾರಂಟೀ ನೀವೇ ಕರೆದಿರಬೇಕು, ಕಾಫಿಗೊ ಅಥವಾ... ಇನ್ನೆಲ್ಲೋ..???
" ಅರೆರೆ....ನಿಂಗೆ ಹೇಗೆ ಗೊತ್ತಾಯ್ತು" ತ್ಯಾಂಪ ತ್ಯಾಂಪನೇ..
ಬಾಂಬ್ ಸಿಡಿಯಿತು.." ಹೌದಾ ಗಂಡಾ... ಅವಳ ಜತೆ ಸಿನೇಮಾ ಬೇರೆ ನೋಡಿದ್ರಾ..? ಯಾವ ಸಿನೇಮಾ..?? 
"ಇಲ್ಲ ಕಣೇ ಪ್ರಾಮಿಸ್... ಬರೇ ಸಿನೇಮಾ ಮಾತ್ರ ನೋಡಿದ್ವಿ, ಅದು....ಇಬ್ಬರು ಹೆಂಡಿರ ಮುದ್ದಿನ ಗಂಡ" ತ್ಯಾಂಪಿಯ ಮುನಿಸಿನ ಬಾಂಬ್ ಗೆ ತ್ಯಾಂಪ ತಣ್ಣಗಾದ.
"ಆಣೆ ಮಾಡಿ..ನನ್ನ ಕೊಂದ್ ಹಾಕಬೇಡಿ...ಸಿನೇಮದ ಹೆಸರು ನೋಡೂ.... ಆ ಕಲ್ಲೂರಾಮಿ ಹೇಳಿದಾಗಲೇ ಅಂದ್ಕೊಂಡಿದ್ದೆ, ನೀವು ಇದಿರಿಗೆ ಇದ್ದ ಹಾಗೆ ಅಲ್ಲ ಅಂತ"
ತಡೀರಿ ಯಾವ ಹುತ್ತದಲ್ಲಿ ಯಾವ ಹಾವೋ.. ಎಲ್ಲಾ ಹೊರಗೆ ಬರಲೇಳಿ, ಈಗಲೇ ಫೋನ್ ಮಾಡ್ತೇನೆ ಅವಳಿಗೆ.."
....................
"ಲಕ್ಷ್ಮೀ ..ನಾನ್ ಕಣೇ...ತ್ಯಾಂಪಿ, ಹೌದೂ ..ನೀನೆಲ್ಲಾದರೂ ಹೊರಗಡೆ ಹೋಗಿದ್ಯಾ.. ಈ ಶನಿವಾರ"
"ಇಲ್ಲವಲ್ಲಾ ತ್ಯಾಂಪಿ .. ಏನ್ಸಮಾಚಾರ..?" ಲಕ್ಷ್ಮಿ
ಅಲ್ಲ ನನ್ ಯಜಮಾನರನ್ನ ನೋಡಿದ್ಯಾ..??ತ್ಯಾಂಪಿ.
"ಇಲ್ಲ ಕಣೇ... ಆದರೆ ನಳಿನಿ ಏನೋ ಹೇಳ್ತಾ ಇದ್ದಳಲ್ಲಾ..!!!" ಲಕ್ಷ್ಮಿ
"ಏನಂದ್ಲೂ..?? ತ್ಯಾಮ್ಪಿ.
"ಅವ್ಳು ....... ಅದೇ ಶನಿವಾರ ಅವ್ಳು ಮಾಲ್ ನಲ್ಲಿ ತ್ಯಾಂಪ ರನ್ನು ನೋಡಿದ್ಲಂತೆ ಜತೆಗೆ ಯಾರೊ ಇದ್ರಂತೆ..??

"ತಡೀ ಲಕ್ಷ್ಮೀ.ಒಂದ್ನಿಮ್ಷ.... " ತ್ಯಾಂಪನೆಡೆ ತಿರುಗಿ ".. ರೀ ಶನಿವಾರ ನಿಮಗೆ ಆಫೀಸ್ ಇತ್ತಲ್ವಾ..??" ಏನಂದಾನು ತ್ಯಾಂಪ, ತನ್ನ ತಲೆ ಅಲುಗಾಡಿಸೋದನ್ನು ಬಿಟ್ಟು!!!!
ಹೌದಂತೆ ಲಕ್ಷ್ಮೀ.. ಇಡ್ತೀನಿ ಫೋನೂ..!!
ಅಫೀಸ್ ಇತ್ತು ಅಂದ್ರಲ್ಲಾ... ಮತ್ತೇನ್ರೀ ಈ ಹೋಟೆಲ್ ವಿಷ್ಯಾ..??
ತ್ಯಾಂಪ ತಡಬಡಾಯಿಸಿದ್ನಾ!!! " ಹೌದೇ ನಾನೂ ನಾಗೇಶೂ ಗೋಪಾಲಾ ಅಫೀಸಿಂದೇ ಪ್ಲಾನ್ ಮಾಡಿದ್ವಾ,.... ನೀನ್ ಬೇರೆ ಏನೋ ಫಂಕ್ಷನ್ ಇದೆ ಅಂದಿದ್ದೀಯಲ್ಲಾ ಆವತ್ತು, 
ಅದಕ್ಕೆ ಅವರೆಲ್ಲಾ ಅವರವರ ಫ್ಯಾಮಿಲೀ ಜತೆ ಬಂದಿದ್ರೂ... ನಿನ್ನ ನಳಿನಿ ಅದೇ ನೋಡಿ ಹೇಳಿರಬೇಕೂ.. ನಾವೆಲ್ಲಾ ಒಟ್ಟಿಗೇ ಇದ್ವೀ.."
ಸಾರಿ ಕಣ್ರಿ... ನಾನು ಎನೇನೋ ಹೇಳ್ಬಿಟ್ಟೆ.. ಬೇಸರವಿಲ್ಲ ತಾನೇ..??
’ಇರಲಿ ಬಿಡು ಚಿನ್ನಾ" 
ತಪ್ಪಿತು ಬೀಸುವ ದೊಣ್ಣೆ ಎಂದುಕೊಂಡ ಖುಷೀಯಾಗಿ ತ್ಯಾಂಪ............ನಿಜವಾಗಿಯೂ ಹೌದಾ..??

ಟ್ರಿಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ಣ್ನ್ 

ಈ ಸಾರಿ ಫೊನೂ.... ಲಕ್ಷ್ಮಿಯದ್ದೆ..

ಹಾಂ ಹೇಳು ... ಲಕ್ಷ್ಮೀ"

ಅಲ್ಲ ಕಳೆದ ಶನಿವಾರ ಮಧ್ಯಾನ್ನ ಊಟಕ್ಕೆ ನಿನ್ನ ಕರೆದಿದ್ದೆನಲ್ಲ, ನೀನೂ ಏನೇನೋ ಸಬೂಬು ಹೇಳಿದ್ಯಲ್ಲಾ, 

"ಹೌದೂ" ತ್ಯಾಂಪಿ.
" ಆ ದಿನ ಆಫೀಸಿಗೆ ರಜೆ ಇತ್ತಲ್ಲಾ... ಅದಕ್ಕೇ.. ಊಟಕ್ಕೆ ನಾಗೇಶೂ, ಗೋಪಾಲ ಅವರವರ ಮನೆಯವರೆಲ್ಲರೂ ಬಂದಿದ್ದರು, ಎಂತಹ ಪಾರ್ಟಿ ಆಯ್ತು ಗೊತ್ತಾ, ನೀನೂ ಬಂದಿರ ಬೇಕಿತ್ತು." ಲಕ್ಷ್ಮಿ.
ತ್ಯಾಂಪಿಯ ತಲೆ ಗಿರ್ರೆಂತು.." ಏನಂದೇ..ಕಳೆದ ಶನಿವಾರವಾ.. ಅದೇ ವ್ಯಾಲಂಟೈನ್ ದಿನ ಅಲ್ವಾ.... ನಿನಗೆಲ್ಲೋ ಕನ್ಫ್ಯೂಸ್ ಆಗಿರಬೇಕು, ಆದಿನ ಆಫೀಸ್ ಇತ್ತಲ್ವಾ" ತ್ಯಾಂಪಿ 
"ಇಲ್ಲಮ್ಮಾ, ಆಫೀಸ್ ರಜೆ ಇತ್ತು....ಅದೇ ದಿನ ನಮ್ಮವರ ಬರ್ತ್ ಡೇ ಕೂಡಾ ಇತ್ತು.. ಅದ್ಕೇ.. ನಿಂಗೆ ಹೇಳಿದ್ನಲ್ಲಾ.............."
ಆಯ್ತು... ಅವಳು ಏನೇನೋ ಹೇಳುತ್ತಿದ್ದುದನ್ನೂ ಕೇಳದೇ ಫೋನು ಕೆಳಗಿಟ್ಟೇ ಬಿಟ್ಟಳು ತ್ಯಾಂಪಿ..... ಕೋಪದಿಂದ ಕುದಿಯುತ್ತಾ......"ಅಂದರೆ ಇವರು..."....ತ್ಯಾಂಪನಿದ್ದ ಕಡೆ ತಿರುಗುಗಿದಳು."" "ಯಾಕ್ರೀ...................??? " ಸಿಡುಕಿದಳು ಕೆಂಡಾಮಂಡಲವಾಗಿ. 
ಆದರೆ.......ಎಲ್ಲಿದ್ದಾನೆ ಆತ.........ತ್ಯಾಂಪ..
ಪಾ.........ಪ!!! 
ಈ ಸಾರಿ..??? ಅಲ್ಲ ಬಿಡಿ.!!!!